October 18, 2024

Newsnap Kannada

The World at your finger tips!

deepa1

ಸತ್ಯದ ಹುಡುಕಾಟ ನಿರಂತರ………..

Spread the love

ನಿಮ್ಮ ಭಾವನೆಗಳಲ್ಲಿ ಭಕ್ತಿ ಆಧ್ಯಾತ್ಮ ದೈವಿಕ ಪ್ರಜ್ಞೆ ತುಂಬಿದ್ದರು
ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ,……..

ನಿಮ್ಮ ಮನದಾಳದಲ್ಲಿ ಅದ್ಭುತ ಚಿಂತನೆ ವೈಚಾರಿಕ ಪ್ರಜ್ಞೆ ಮೂಡಿದ್ದರು
ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ,……….

ನಿಮ್ಮ ಬರಹಗಳಲ್ಲಿ ಅತ್ಯುತ್ತಮ ಪದ ಲಾಲಿತ್ಯ, ಭಾಷೆಯ ಸೊಗಡು, ಸಾಹಿತ್ಯ ನಲಿದಾಡುತ್ತಿದ್ದರೂ
ಸತ್ಯದ ಹುಡುಕಾಟ ನಿರಂತರವಾಗಿರಲಿ,……..

ನಿಮ್ಮ ಪ್ರತಿಭೆ ಯಾವ ಪ್ರಕಾರದ ಲಲಿತ ಕಲೆಯಲ್ಲಾದರು ಅರಳುತ್ತಿರಲಿ
ಸತ್ಯದ ಹುಡುಕಾಟ ನಿರಂತರವಾಗಿರಲಿ,……

ನಿಮ್ಮ ಜ್ಞಾನದ ಮಟ್ಟ ತುಂಬಿ ಹರಿಯುತ್ತಿದ್ದರೂ
ಸತ್ಯದ ಹುಡುಕಾಟ ನಿರಂತರವಾಗಿರಲಿ‌,……..

ಏಕೆಂದರೆ,
ಸತ್ಯ ಮಾತ್ರವೇ ಸೃಷ್ಟಿಯ , ಸಮಾಜದ ತಳಹದಿ,
ಸತ್ಯವೆಂಬುದೇ ಇದೆಲ್ಲದರ ಪ್ರತ್ಯಕ್ಷ ಪರೋಕ್ಷ ಶಕ್ತಿ,……,

ಸತ್ಯದ ಅಗ್ನಿ ಪರೀಕ್ಷೆಯಲ್ಲಿ ಇವು ಗೆದ್ದು ಬಂದಾಗ ಮಾತ್ರವೇ ಈ ಎಲ್ಲಾ ಸಾಧನೆಗಳಿಗೆ ಅರ್ಥ ಸಿಗುವುದು………

ನಿಮ್ಮ ಆತ್ಮಾವಲೋಕನದ ಮೂಲವೂ ಸತ್ಯವೇ ಆಗಿರಲಿ,…….

ನಿಮ್ಮ ಜ್ಞಾನದ ಮೂಲವೂ ಸತ್ಯವೇ ಆಗಿರಲಿ,………

ಸತ್ಯದ ಹುಡುಕಾಟದ ವಿಫಲತೆಯೇ ಇಂದಿನ ಸಮಾಜದ ಬಹುತೇಕ
ಸಮಸ್ಯೆಗಳ ಮೂಲ……….‌

ಅದು ರಾಜಕೀಯವಾಗಿರಲಿ, ಆಡಳಿತವಾಗಿರಲಿ, ಧಾರ್ಮಿಕವಾಗಿರಲಿ.
ಸುಳ್ಳಿನ – ಬುದ್ದಿವಂತಿಕೆಯ ಪ್ರದರ್ಶನ ಹೆಚ್ಚಾಗಿ ಆಚರಣೆಗೆ ಬಂದು
ಮನುಷ್ಯನ ಅಸ್ತಿತ್ವವೇ ಅನುಮಾನಕ್ಕೆ ಒಳಗಾಗಿದೆ………‌‌‌

ಆತನ ವ್ಯಕ್ತಿತ್ವದ
ವಿಶ್ವಾಸಾರ್ಹತೆಯೇ ಪ್ರಶ್ನಾರ್ಥಕವಾಗಿದೆ……….

ಇಡೀ ಸಮಾಜ ಸತ್ಯ ಒಪ್ಪಿಕೊಂಡು ಮುಂದುವರೆದಲ್ಲಿ ,
ಖಂಡಿತವಾಗಿಯೂ ಈಗ ನಮ್ಮನ್ನು ಕಾಡುತ್ತಿರುವ ಬಹುತೇಕ ಸಮಸ್ಯೆಗಳು
ತನ್ನಿಂದ ತಾನೇ ಮಾಯವಾಗುತ್ತವೆ………

ಎಲ್ಲರೂ ಸತ್ಯ ಹರಿಶ್ಚಂದ್ರರಂತೆ ಆಗದಿದ್ದರೂ
ಕನಿಷ್ಠ
ಅನವಶ್ಯಕ ಮತ್ತು ಅಪಾಯಕಾರಿ ಸುಳ್ಳುಗಳಿಂದ ದೂರವಿದ್ದರೂ ಸಾಕು,………

ಅದೇ ನಮ್ಮ ವ್ಯಕ್ತಿತ್ವ ಉತ್ತಮಗೊಳ್ಳಲು ಮತ್ತು ಸಾಕಷ್ಟು ನೆಮ್ಮದಿಯ,
ಬದುಕಿಗೆ ಸಹಕಾರಿಯಾಗುತ್ತದೆ………

ನೆನಪಿಡಿ,
ಸತ್ಯವೂ ಪರಿಪೂರ್ಣವಲ್ಲ. ಅದು ಜ್ಞಾನದ ಜೊತೆಯೇ ಜ್ಞಾನದಂತೆಯೇ ಚಲಿಸುತ್ತಿರುತ್ತದೆ………

ಸಾರ್ವತ್ರಿಕ ಸತ್ಯ,
ಈ ಕ್ಷಣದ ಸತ್ಯ,
ಸಾಂದರ್ಭಿಕ ಸತ್ಯ,
ಘಟನೆಯ ಸತ್ಯ,
ಕಾನೂನಿನ ಸತ್ಯ,
ನೈತಿಕತೆಯ ಸತ್ಯ,
ವ್ಯಾವಹಾರಿಕ ಸತ್ಯ,
ಪ್ರಾಕೃತಿಕ ಸತ್ಯ,
ಊಹಾತ್ಮಕ ಸತ್ಯ,
ವಾಸ್ತವಿಕ ಸತ್ಯ,
ಮುಂತಾಗಿ ನಾನಾ ರೂಪದಲ್ಲಿ ಇರುತ್ತದೆ…….

ಶುಧ್ಧ – ನಿಷ್ಕಲ್ಮಶ ಮನಸ್ಥಿತಿಯಲ್ಲಿ ಇದನ್ನು ಗ್ರಹಿಸುವುದು ಸುಲಭವಾಗುತ್ತದೆ……….

ಈ ಪ್ರಯತ್ನದಲ್ಲಿಯೇ ಬದುಕಿನ ಸಾರ್ಥಕತೆ ಅಡಗಿದೆ……..

ಇದು ಒಣ ಆದರ್ಶವಲ್ಲ, ವಾಸ್ತವ…………

ಏನೇ ಆಗಿರಲಿ,
ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ…………

ಏಕೆಂದರೆ…….

ಬಡತನವನ್ನು ಆಕರ್ಷಕವಾಗಿ ಕಣ್ಣೀರಾಗುವಂತೆ ವರ್ಣಿಸಬಲ್ಲೆ,

ಭ್ರಷ್ಟತೆಯನ್ನು ಕೋಪ ಉಕ್ಕುವಂತೆ ಚಿತ್ರಿಸಬಲ್ಲೆ,

ದೌರ್ಜನ್ಯಗಳನ್ನು ಕೆಂಡಾಮಂಡಲವಾಗುವಂತೆ ಬರೆಯಬಲ್ಲೆ,

ವೇಶ್ಯಾವಾಟಿಕೆಯನ್ನು ಮನಮಿಡಿಯುವಂತೆ ಹೇಳಬಲ್ಲೆ,

ರೈತರ ಕಷ್ಟ ಕೋಟಲೆಗಳನ್ನು ನಿಮ್ಮ ಮನದಾಳಕ್ಕೆ ಮುಟ್ಟುವಂತೆ ಸೃಷ್ಟಿಸಬಲ್ಲೆ,

ಬಾಲಕಾರ್ಮಿಕರ ಸ್ಥಿತಿಯನ್ನು ಮನಕರಗುವಂತೆ ನಿರೂಪಿಸಬಲ್ಲೆ,

ಧರ್ಮಗಳನ್ನು ಕಟು ಮಾತುಗಳಲ್ಲಿ ಖಂಡಿಸಬಲ್ಲೆ,

ಜಾತಿಗಳ ಅಸ್ತಿತ್ವವನ್ನು ಅಲ್ಲಗಳೆಯಬಲ್ಲೆ,

ಬುದ್ದ, ಬಸವ, ಗಾಂಧಿ, ವಿವೇಕಾನಂದ, ಅಂಬೇಡ್ಕರ್ ಮುಂತಾದವರನ್ನು ದೇವರುಗಳಂತೆ ಚಿತ್ರಿಸಬಲ್ಲೆ,

ಪ್ರೀತಿ, ಕರುಣೆ, ಸಮಾನತೆ, ಮಾನವೀಯತೆಯ ಶ್ರೇಷ್ಠತೆಯನ್ನು ಸಾರಬಲ್ಲೆ,

ನಿಮ್ಮನ್ನು ಮೆಚ್ಚಿಸುವ ಸಿನಿಮಾ ನಿರ್ಮಿಸಬಲ್ಲೆ,

ನಿಮ್ಮನ್ನು ರಂಜಿಸುವ ಲೇಖನ ಬರೆಯಬಲ್ಲೆ,

ನಿಮ್ಮನ್ನು ನಗಿಸುವ ಸಾಹಿತ್ಯ ರಚಿಸಬಲ್ಲೆ,

ನಿಮ್ಮನ್ನು ಅಳಿಸುವ ಕಥೆ, ಕಾದಂಬರಿ ಸೃಷ್ಟಿಸಬಲ್ಲೆ,

ನಿಮ್ಮನ್ನು ಭಕ್ತಿಯ ಲೋಕದಲ್ಲಿ ತೇಲಿಸಬಲ್ಲೆ,

ನಿಮ್ಮನ್ನು ಮೌಡ್ಯದ ಆಳಕ್ಕೆ ಸೆಳೆಯಬಲ್ಲೆ,

ನಿಮ್ಮನ್ನು ಮಹಾನ್ ಬುದ್ದಿವಂತರೆಂದು ನಂಬಿಸಬಲ್ಲೆ,

ನಿಮ್ಮನ್ನು ಮಾತಿನ ಮೋಡಿಯಲ್ಲಿ ಬೀಳಿಸಬಲ್ಲೆ, ಹೌದು,
ಇದನ್ನು ಕೇವಲ ಲೇಖನಿಯಿಂದ ಮಾಡಬಲ್ಲೆ, ಆದರೆ,…….,
ನಿಮ್ಮನ್ನು ನಾಗರೀಕರನ್ನಾಗಿ ಮಾಡಲು ಸಾಧ್ಯವಾಗುತ್ತಿಲ್ಲ,
ನಿಮ್ಮನ್ನು ನಿಜವಾದ ಮನುಷ್ಯರನ್ನಾಗಿ ಮಾಡಲು ಸಾಧ್ಯವಾಗುತ್ತಿಲ್ಲ,
ನಿಮ್ಮ ಕಷ್ಟ ಕೋಟಲೆಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ,
ನನಗೂ ನನ್ನಂತೆ ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತಿಲ್ಲ,
ಇದೆಲ್ಲಾ ಹೇಳಿದ ನಾನೂ ನಿಮ್ಮೊಳಗೊಬ್ಬನೆ,

ನಿಮ್ಮಂತೆ ನನ್ನ ಮನಸ್ಸೂ ಬದಲಾವಣೆಗಾಗಿ ತುಡಿಯುತ್ತಿದೆ,

ನಿಮ್ಮೊಂದಿಗೆ ನಾನೂ ಆ ನಿರೀಕ್ಷೆಯಲ್ಲಿ ………..

ಸತ್ಯದ ಹುಡುಕಾಟ ನಿರಂತರ………..

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!