ಕನ್ನಡದ ನೆಲ, ಕನ್ನಡಿಗರಿಗಾಗಿ ಋಣಿಯಾಗಿ‌ ಹೋರಾಟ -ಸುಮಲತಾ

Team Newsnap
1 Min Read

ಕನ್ನಡಿಗರ ನೆಲ ಹಾಗೂ ಕನ್ನಡಿಗರಿಗೆ ಋಣಿಯಾಗಿ‌ ಯಾವತ್ತೂ ಹೋರಾಟ ನಡೆಸುತ್ತೇನೆ’ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ‘ಅನಿವಾಸಿ ಭಾರತೀಯ ಕನ್ನಡಿಗರ ಸಂಘ’ದ ಜೂಮ್ ಮೀಟಿಂಗ್‌ನಲ್ಲಿ ಭರವಸೆ ನೀಡಿದರು.

ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ ಲಂಡನ್‌ನಲ್ಲಿ ನೆಲೆಸಿರುವ ಕನ್ನಡಿಗ ರಾಜೀವ‌ ಮೇತ್ರಿ ಹಾಗೂ ಐರ್ಲೆಂಡ್‌ನ ಕನ್ನಡಿಗ ನಿವಾಸಿ ಈಶ್ವರ್ ಪ್ರಾರಂಭ ಮಾಡಿರುವ ‘ಅನಿವಾಸಿ ಭಾರತೀಯ ಕನ್ನಡಿಗರ ಸಂಘ’ ಪ್ರತಿ ವಾರ ಹಲವಾರು ಆನ್‌ಲೈನ್ ಕಾರ್ಯಕ್ರಮ ನಡೆಸಿಕೊಡುತ್ತಿದೆ. ಈ ವಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಮಲತಾ ಅಂಬರೀಶ್ ಚಿತ್ರರಂಗದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಸುಮಾರು 90 ನಿಮಿಷಗಳ ಕಾಲ 25 ದೇಶಗಳಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ಸಂವಾದ ಮಾಡಿದ ಸುಮಲತಾ ರಾಜಕೀಯ ಅಡೆತಡೆಗಳು, ಸಂಕಷ್ಟಗಳು, ಅವರು ತೊಂದರೆಯಲ್ಲಿದ್ದ ಸಮಯದಲ್ಲಿ ಕರ್ನಾಟಕದವರಲ್ಲದೇ ಹೊರ ರಾಜ್ಯ ಹಾಗೂ ಹೊರದೇಶದಲ್ಲಿನ ಕನ್ನಡಿಗರು ಅವರಿಗೆ ನೀಡಿದ ಪ್ರೋತ್ಸಾಹವನ್ನು ನೆನಪಿಸಿಕೊಂಡಿದ್ದಾರೆ.

ಇತ್ತೀಚಿಗೆ ಸಂಸತ್ತಿನಲ್ಲಿ ಕನ್ನಡ ಪರ ಧ್ವನಿ ಎತ್ತಿ ಸಮರ್ಥವಾಗಿ ಮಾತನಾಡಿದ್ದಕ್ಕಾಗಿ NRI ಕನ್ನಡ ಸಂಘದ ಸದಸ್ಯರು ಸುಮಲತಾ ಅಂಬರೀಷ್ ಅವರನ್ನು ಅಭಿನಂದಿಸಿದರು.

ಇಂಗ್ಲೆಂಡ್, ಅಮೇರಿಕ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ದುಬೈ, ಕತಾರ್, ಸೌದಿ ಅರೇಬಿಯಾ, ಓಮನ್, ಕುವೈತ್, ಆಫ್ರಿಕಾ, ಐರ್ಲೆಂಡ್ ಕೆನಡಾ,‌ ಯುರೋಪ್ ಸೇರಿದಂತೆ ಸುಮಾರು 25 ದೇಶಗಳ ಕನ್ನಡ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿ ಶನಿವಾರ ಹಾಗೂ ಭಾನುವಾರ ಇಂತಹ ಕಾರ್ಯಕ್ರಮ ನಡೆಯುತ್ತಿದ್ದು ಕನ್ನಡದ ಹೆಸರಾಂತ ಕವಿಗಳು, ನಗೆ ಹರಟೆಗಾರರು, ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂವಾದ ನಡೆಸುತ್ತಾರೆ‌. ಕಳೆದ ಒಂದು ತಿಂಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಗಣ್ಯರು ಹಾಗೂ ಸಾಧಕರು ಭಾಗವಹಿಸಿದ್ದಾರೆ.

Share This Article
Leave a comment