ಮೂವರು ಸಹೋದರಿಯರ ಆತ್ಮಹತ್ಯೆ

Team Newsnap
1 Min Read
Suicide of three sisters ಮೂವರು ಸಹೋದರಿಯರ ಆತ್ಮಹತ್ಯೆ

ತಮ್ಮನ್ನು ಸಾಕಿ ಸಲುಹಿದ್ದ ಅಜ್ಜಿ ಸಾವನ್ನಪ್ಪಿದ್ದರಿಂದ ಮನನೊಂದ ಮೂವರು ಸಹೋದರಿಯರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಬರಕನಹಾಲ್ ತಾಂಡ್ಯದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ರಂಜಿತಾ (೨೪), ಬಿಂದು (೨೧) ಹಾಗೂ ಚಂದನಾ (೧೮) ಎಂಬುವರೇ ಆತ್ಮಹತ್ಯೆ ಮಾಡಿಕೊಂಡವರು.ಮಳವಳ್ಳಿ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ – ಅರೋಪಿಗೆ 22 ವರ್ಷ ಕಠಿಣ ಶಿಕ್ಷೆ

ಈ ನತದೃಷ್ಟ ಸಹೋದರಿಯರ ತಂದೆ-ತಾಯಿ ಇಬ್ಬರೂ ದಶಕಗಳ ಹಿಂದೆಯೇ ನಿಧನರಾಗಿದ್ದರು. ಕಳೆದ ೩ ತಿಂಗಳ ಹಿಂದೆಯಷ್ಟೆ ಇವರನ್ನು ಸಾಕುತ್ತಿದ್ದ ಅಜ್ಜಿಯೂ ಸಹ ಸಾವನ್ನಪ್ಪಿದ್ದು, ಈ ಸಹೋದರಿಯರು ಅನಾಥರಾಗಿದ್ದರು.
ರಂಜಿತಾ ಮತ್ತು ಬಿಂದು ಇಬ್ಬರು ಕೆ.ಬಿ.ಕ್ರಾಸ್‌ನ ಗಾರ್ಮೆಂಟ್ಸ್‌ಗೆ ಕೆಲಸಕ್ಕೆ ಹೋಗುತ್ತಿದ್ದರು. ಚಂದನಾ ವಿದ್ಯಾ ಅಭ್ಯಾಸ ಮಾಡುತ್ತಿದ್ದರು.

ಈ ಮೂವರೂ ಬಾಲದೇವರಹಟ್ಟಿಯಿಂದ ಬರಕನಹಾಲ್ ತಾಂಡ್ಯಕ್ಕೆ ಹೋಗುವ ದಾರಿಯ ರಸ್ತೆ ಬದಿಯಲ್ಲಿರುವ ತಮ್ಮ ಒಂಟಿ ಮನೆಯಲ್ಲಿ ಕಳೆದ ಒಂಭತ್ತು ದಿನಗಳ ಹಿಂದೆಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರುಗಳ ದೇಹ ಕೊಳೆತು ವಾಸನೆ ಬಂದಿದ್ದರಿಂದ ದಾರಿಹೋಕರು ನೋಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಘಟನೆಯ ಸುದ್ದಿ ತಿಳಿದ ಕೂಡಲೇ ಹುಳಿಯಾರು ಪೊಲೀಸರು ಸ್ಥಳಕ್ಕೆ ಧಾವಿಸಿ ಮನೆಯ ಮೇಲ್ಛಾವಣಿಯ ಹೆಂಚು ತೆಗೆದು ನೋಡಿದಾಗ ಈ ಮೂರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಮೃತ ದೇಹಗಳನ್ನು ಹೊರತೆಗೆದು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಈ ಸಹೋದರಿಯರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಈ ಸಂಬಂಧ ಹುಳಿಯಾರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ತಿಪಟೂರು ಎಎಸ್‌ಪಿ ಸಿದ್ಧಾರ್ಥಗೋಯಲ್, ಚಿಕ್ಕನಾಯಕನಹಳ್ಳಿ ಸಿಪಿಐ ನಿರ್ಮಲ, ಹುಳಿಯಾರು ಪಿಎಸ್‌ಐ ಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Share This Article
Leave a comment