ರಾಜ್ಯ ಕಾಂಗ್ರೆಸ್ ನಾಯಕರಿಗೆ ನಮ್ಮ ಜೊತೆ ಮೈತ್ರಿಗೆ ಇಷ್ಟವಿಲ್ಲ – ಹೆಚ್ ಡಿ ಕೆ

Team Newsnap
1 Min Read

ಕಾಂಗ್ರೆಸ್ ನ ರಾಜ್ಯ ನಾಯಕರಿಗೆ ಜಾತ್ಯಾತೀತ ಶಕ್ತಿಗಳು ಒಗ್ಗೂಡಿಸುವ ಅಭಿಲಾಷೆಯೇ ಇಲ್ಲ. ಹೀಗಾಗಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಗೆ ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಇಷ್ಟವೇ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.

ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ನಾವು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೆವು. ನಮ್ಮ ವಿರುದ್ಧ ಕುತಂತ್ರ ಮಾಡಿದರೂ ಕೈಜೋಡಿಸಿದೆವು. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ನಮಗೆ ಗೌರವ ಇದೆ. ದೇವೇಗೌಡರು ಹಾಗೂ ಖರ್ಗೆ ಮಾತ್ರ ಚರ್ಚಿಸಿದ್ದಾರೆ. ಉಳಿದ ಯಾವ ನಾಯಕರೂ ನಮ್ಮ ಬಳಿ ಮಾತನಾಡುತ್ತಿಲ್ಲ ಎಂದು ಹೇಳಿದರು.

ಈ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಜೆಡಿಎಸ್​ ಅನ್ನು ಬಿಜೆಪಿಯ ಬಿ ಟೀಂ ಎಂದು ನಿರೂಪಿಸುವ ಉದ್ದೇಶ ಹೊಂದಿದ್ದಾರೆ. ನಮ್ಮ ಪಕ್ಷದ ಶಕ್ತಿಯನ್ನು ಕುಂದಿಸುವ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರಿಗೂ ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಇಷ್ಟವೇ ಇಲ್ಲ. ಇದನ್ನ ಮೈಸೂರು ಮೇಯರ್ ಚುನಾವಣೆ ವೇಳೆಯೇ ನೋಡಿದ್ದೇವೆ. ಆಗ ರಾಜ್ಯಮಟ್ಟದ ಯಾವ ನಾಯಕರೂ ನಮ್ಮನ್ನು ಸಂಪರ್ಕ ಮಾಡಲೇ ಇಲ್ಲ. ಈಗಲೂ ಅದನ್ನೇ ಮಾಡುತ್ತಿದ್ದಾರೆ. ಹೈಕಮಾಂಡ್ ರಾಜ್ಯ ನಾಯಕರಿಗೆ ಮೈತ್ರಿಗೆ ಸೂಚಿಸಲಿ. ಇಲ್ಲವೇ ಹೈಕಮಾಂಡ್ ನಮಗೆ ಮನವಿ ಮಾಡಲಿ. ಆಗ ಕಲಬುರಗಿ ಮಹಾನಗರ ಪಾಲಿಕೆಗೆ ಬೆಂಬಲ ನೀಡುವ ಬಗ್ಗೆ ಪರಿಶೀಲಿಸುತ್ತೇವೆ ಎಂದು ಹೆಚ್​ಡಿಕೆ ಹೇಳಿದರು.‌

ಬಿಜೆಪಿ ಪಕ್ಷ ನಮ್ಮ ಜೊತೆ ಮಾತುಕತೆ ಮಾಡಿದ್ದಾರೆ. ಬಿಜೆಪಿ ನಾಯಕರೂ ಕೂಡ ಅವಶ್ಯಕತೆ ಇದ್ದಾಗ ಬಳಸಿಕೊಂಡು ನಂತರ ನಮ್ಮ ವಿರುದ್ಧ ಮಾತನಾಡುತ್ತಾರೆ. ಈ ಕಾರಣಕ್ಕಾಗಿ ನಾವು ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದರು.

Share This Article
Leave a comment