25 ವರ್ಷ ನಂತರ ಕಲಬುರಗಿಯಲ್ಲಿ 36ನೇ ಪತ್ರಕರ್ತರ ರಾಜ್ಯ ಸಮ್ಮೇಳನ – ತಗಡೂರು ಶಿವಾನಂದ

Team Newsnap
2 Min Read
  • ಸಮ್ಮೇಳನ ಸ್ವಾಗತ ಸಮಿತಿ ರಚನೆಗೆ ಸಿದ್ದತೆ: ಉದ್ಘಾಟನೆಗೆ ಸಿಎಂ

25 ವರ್ಷಗಳ ನಂತರ ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಕರ್ನಾಟಕ ರಾಜ್ಯ 36ನೆಯ ಪತ್ರಕರ್ತರ ಸಮ್ಮೇಳನ ನಡೆಸಲು ಸಿದ್ದತೆಗಳನ್ನು ಆರಂಭಿಸಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.

ಕಲಬುರಗಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ತಗಡೂರು ಸಮ್ಮೇಳನ ಉದ್ಘಾಟನೆ ನೆರವೇರಿಸುವಂತೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಲಾಗಿದೆ. ವಾರದೊಳಗೆ ದಿನಾಂಕ ನಿಗದಿ ಮಾಡಲಿದ್ದಾರೆ. ಅಕ್ಟೋಬರ್ ಕೊನೆ ವಾರ ಇಲ್ಲವೇ ನವೆಂಬರ್ ಎರಡನೇ ವಾರದಲ್ಲಿ ಸಮ್ಮೇಳನ ನಡೆಯವ ಸಾಧ್ಯತೆಗಳಿವೆ ಎಂದರು.

ಈ ಹಿಂದೆ 1996ರಲ್ಲಿ ಕಲಬುರಗಿಯಲ್ಲಿ 20 ನೆಯ ರಾಜ್ಯ ಸಮ್ಮೇಳನ ನಡೆದಿತ್ತು. ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ಸಾಕಷ್ಟು ಬದಲಾವಣೆಗಳಾಗಿವೆ. ಆಗ ವಿದ್ಯುನ್ಮಾನ ಕಡಿಮೆ ಇದ್ದವು. ಈಗ ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈಗ ಬಹು ಸಮ್ಮೇಳನ ಎಲ್ಲರನ್ನು ವಿಶ್ವಾಸ ತೆಗೆದುಕೊಂಡು ನಡೆಸಲಾಗುವುದು.‌ ವೃತ್ತಿ ಆಧಾರಿತ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಸಮ್ಮೇಳನ ಸಂಘಟಿಸಲಾಗುತ್ತಿದೆ.‌ ಮೊದಲನೇಯದಾಗಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ, ಹಾಗೂ ಶರಣಬಸವೇಶ್ವರರ ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ ಹಾಗೂ ಶರಣಬಸವೇಶ್ವರರ ಮಹಾದಾಸೋಹಿ ಸಂಸ್ಥಾನದ ಅಧ್ಯಕ್ಷರಾದ ಶರಣಬಸವಪ್ಪ ಅಪ್ಪ ಅವರ ಸಾನ್ನಿದ್ಯದಲ್ಲಿ ಸ್ವಾಗತ ಸಮಿತಿ ರಚಿಸಲಾಗುವುದು ಎಂದು ತಗಡೂರು ವಿವರಿಸಿದರು.

ಕೋವಿಡ್ ಸೋಂಕು ಆತಂಕದ ಹಿನ್ನೆಲೆಯಲ್ಲಿ ಸಮ್ಮೇಳನ ಎರಡು ದಿನದ ಬದಲು ಒಂದು ದಿನ ಮಾತ್ರ ಆಯೋಜಿಸಲು ಉದ್ದೇಶಿಸಲಾಗಿದೆ. ಬೆಳಿಗ್ಗೆ ಉದ್ಘಾಟನೆ, ತದನಂತರ ಗೋಷ್ಠಿ, ಸಂಜೆ ಸಮಾರೋಪ ನಡೆಸಲು ಉದ್ದೇಶಿಸಲಾಗಿದೆ. ಮರು ದಿನ ಪ್ರವಾಸ ಆಯೋಜಿಸಲಾಗುವುದು. ಸಮ್ಮೇಳನ ಅಂಗವಾಗಿ ಅರ್ಥಪೂರ್ಣ ಲೇಖನ ಗಳನ್ನು ಒಳಗೊಂಡ ಸ್ಮರಣ ಸಂಚಿಕೆ ಹೊರಲಾಗುವುದು. ಒಟ್ಟಾರೆ ಸಮ್ಮೇಳನ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.

ಕೆಯುಡಬ್ಲ್ಯೂಜೆ ಪ್ರಶಸ್ತಿ:
ಸಮ್ಮೇಳನ ಸಮಾರೋಪದಲ್ಲಿ ಸಂಘದಿಂದ 19 ವಾರ್ಷಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ. 2 ವರ್ಷಗಳಿಂದ ಸಂಘದಿಂದ ವಾರ್ಷಿಕ ಪ್ರಶಸ್ತಿ ನೀಡಿಲ್ಲ. ಈಗ ಕಲಬುರಗಿ ಸಮ್ಮೇಳನದಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಹೀಗಾಗಿ ಪತ್ರಕರ್ತರು ತಮ್ಮ ಸಾಮಾಜಿಕ ಪರಿಣಾಮದ ಜತೆಗೆ ಇತರ ವೈವಿದ್ಯಮಯದ ವಿಶೇಷ ವರದಿಗಳ ಪ್ರತಿಯನ್ನು ಹಾಗೂ ತಮ್ಮ ಸೇವೆಯ ವಿಶಿಷ್ಟತೆಯನ್ನು ಒಳಗೊಂಡಂತೆ ಕುರಿತ ಅರ್ಜಿಯನ್ನು ಪತ್ರಕರ್ತರು ಇದೇ ಸೆ.30 ರೊಳಗೆ ಅರ್ಜಿ ಸಲ್ಲಿಸಬೇಕೆಂದು ಶಿವಾನಂದ ತಗಡೂರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್ ಠಾಕೂರ್ ಮಾತನಾಡಿ, ಸಮ್ಮೇಳನ ಎಲ್ಲರೂ ಒಗ್ಗೂಡಿ ಕನ್ನಡ ಸಾಹಿತ್ಯ ಸಮ್ಮೇಳನದಂತೆ ಯಶಸ್ವಿ ಗೊಳಿಸೋಣ ಕಲಬುರಗಿ ಗೆ ಕೀರ್ತಿ ತರೋಣ ಎಂದು. ಸಂಘದ ಪ್ರಧಾನ ಕಾರ್ಯದರ್ಶಿ ದೇವಿಂದ್ರಪ್ಪ ಅವಂಟಿ, ರಾಜ್ಯ ಸಮಿತಿ ಸದಸ್ಯರಾದ ಹಣಮಂತರಾವ ಭೈರಾಮಡಗಿ, ದೇವಿಂದ್ರಪ್ಪ ಕಪನೂರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This Article
Leave a comment