ರಾಜ್ಯಾದ್ಯಂತ ಇಂದಿನಿಂದ ಕಾಲೇಜುಗಳು ಆರಂಭ

Team Newsnap
3 Min Read

ಕೊರೋನಾ‌ ಸಂದಿಗ್ಧತೆ ಮಧ್ಯೆ ಇಂದಿನಿಂದ ಕಾಲೇಜುಗಳು ಆರಂಭವಾಗ್ತಿದೆ. ಕೋವಿಡ್ ಕೇಸ್ ಕಡಿಮೆಯಾಗುತ್ತಿರುವ ಈ ಹೊತ್ತಿನಲ್ಲಿ ಕಾಲೇಜು ತೆರೆಯಲು ಈಗಾಗಲೇ ಆಡಳಿತ ಮಂಡಳಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.

ಏಳು ತಿಂಗಳ ಬಳಿಕ ತೆರೆಯಲಿರುವ ಕಾಲೇಜಿಗೆ ಬರಲು ವಿದ್ಯಾರ್ಥಿಗಳಿಗೆ ಒಂದು ಕಡೆ ಖುಷಿಯಿದ್ದರೆ ಮತ್ತೊಂದು ಕಡೆ ಕೊರೋನಾ ಆತಂಕವೂ ಇದೆ.

ಯಾವ ಕಾಲೇಜು ಗಳು ಆರಂಭ ?:

ಅಂತೂ ಇಂತೂ ಇಂದಿನಿಂದ ರಾಜ್ಯದಾದ್ಯಂತ ಕಾಲೇಜು ಆರಂಭವಾಗಲಿದೆ. ಬರೋಬ್ಬರಿ ಎಂಟು ತಿಂಗಳ ಬಳಿಕ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕಲರವ ಕಂಡುಬರುತ್ತಿದೆ. ಆದರೆ ಕೊರೋನಾ ಮುಂಚಿನ ವಾತಾವರಣ  ಕ್ಯಾಂಪಸ್ಸಿನಲ್ಲಿ ಕಾಣಸಿಗುವುದಿಲ್ಲ.‌ ಯಾಕೆಂದರೆ ಇನ್ನು ಕೊರೋನಾ ವ್ಯಾಕ್ಸಿನ್ ಸಿಕ್ಕಿಲ್ಲ. ಕೊರೋನಾ ಕಾಲದಲ್ಲಿ ಕಾಲೇಜು ತೆರೆಯಲು ಯುಜಿಸಿ ಸೂಚಿಸಿದ‌ ಮಾರ್ಗಸೂಚಿಗಳನ್ನು ಪಾಲಿಸುತ್ತ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ಕಾಲೇಜು ಆರಂಭ ಮಾಡಲಿದೆ. ಕಾಲೇಜು ಮರು ಆರಂಭಕ್ಕೆ ಭರ್ಜರಿ ಸಿದ್ದತೆ ಮಾಡಿಕೊಂಡಿದೆ. ಪ್ರತೀ ಬೇಂಚ್ ನಡುವೆ 6 ಅಡಿ ಅಂತರದಲ್ಲಿ ಮಾರ್ಕ್ ಗಳನ್ನು ಮಾಡಲಾಗಿದೆ. ಕಾಲೇಜು ಆವರಣ, ಕ್ಲಾಸ್ ರೂಂಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಈಗಾಗಲೇ ಕಾಲೇಜಿನ‌ ಶಿಕ್ಷಕರಿಗೆ, ಶಿಕ್ಷಕೇತರ ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಸೂಚನೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಖಾಸಗಿ ಕಾಲೇಜುಗಳಲ್ಲಿ ಆರಂಭಕ್ಕೆ ಪೂರ್ವ ಸಿದ್ಧತೆ ನಡೆದಿದೆ. ಕೊರೋನಾ ಮಾರ್ಗಸೂಚಿ ಅನ್ವಯ ಸೆಂಟ್ ಜೋಸೆಫ್ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಬಿಬಿಎಂಪಿ ಸಿಬ್ಬಂದಿ ಕೋವಿಡ್ ಟೆಸ್ಟ್ ಮಾಡಿದರು. ನಾಗರಬಾವಿಯ ಆಕ್ಸಫರ್ಡ್ ಕಾಲೇಜಿನಲ್ಲಿ ಅಂತಿಮ‌ ಸಿದ್ಧತೆ ಮಾಡಿಕೊಳ್ಳುತ್ತಿದ್ದರು‌. ಕಾಲೇಜು ಆವರಣದಲ್ಲಿ ಸಾಮಾಜಿಕ ಅಂತರದ ಗುರುತು ಮಾಡಿ, ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್, ಟೆಂಪರೇಚರ್ ಚೆಕ್ ಮಾಡುವ ವ್ಯವಸ್ಥೆ ಮಾಡಲಾಯಿತು. ತರಗತಿಗಳಿಗೆ ಪ್ರತಿದಿನ ಫ್ಯುಮಿಗೇಷನ್, ವಿದ್ಯಾರ್ಥಿ ಸಂಖ್ಯೆಗನುಗುಣವಾಗಿ ಬೆಳಗ್ಗೆ, ಮಧ್ಯಾಹ್ನ ಪ್ರತ್ಯೇಕ ಸೆಮಿಸ್ಟರ್ ತರಗತಿಗಳ ಆಯೋಜನೆ ಮಾಡಿದೆ.

ಇವು ನಿಯಮಗಳು:

  • ಮಾಸ್ಕ್, ಸ್ಯಾನಿಟೈಸರ್ ಹಾಗೂ ದೈಹಿಕ ಅಂತರ ಕಡ್ಡಾಯ
  • ಕಾಲೇಜು ಪ್ರಾರಂಭಕ್ಕೆ ‌3 ದಿನ‌ ಮುಂಚೆ ಕೋವಿಡ್ ಟೆಸ್ಟ್:
  • ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ಕೋವಿಡ್ ಟೆಸ್ಟ್ ಕಡ್ಡಾಯ
  • ಸಾಮಾಜಿಕ ಅಂತರ 6 ಅಡಿಯಷ್ಟು ಪಾಲನೆ‌ ಮಾಡ್ಬೇಕು
  • ಶುಚಿತ್ವ,‌ ಶುದ್ದ ಕುಡಿಯುವ ನೀರು ಕಡ್ಡಾಯ

*ಕಾಲೇಜು ಆವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು

  • ಖಾಸಗಿ ವಾಹನಗಳು, ಕಾಲೇಜು ಬಸ್ ಗಳನ್ನು ಸತತವಾಗಿ ಸ್ಯಾನಿಟೈಸ್ ಮಾಡಬೇಕು
  • ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಗಮನ ಕೊಡೋಕೆ ಕಡ್ಡಾಯ ಆರೋಗ್ಯ ಸಮಿತಿ ರಚನೆ ಮಾಡ್ಬೇಕು
  • ಕಾಲೇಜು ಆವರಣರಲ್ಲಿ ಉಗುಳುವುದನ್ನ ಕಡ್ಡಾಯವಾಗಿ ನಿಷೇಧ ಮಾಡಲಾಗಿದೆ

“ವಿದ್ಯಾರ್ಥಿಗಳು ಕಡ್ಡಾಯವಾಗಿ ಆರೋಗ್ಯ ಸೇತು ಆಪ್ ಇನ್ ಸ್ಟಾಲ್ ಮಾಡಿಕೊಂಡಿರಬೇಕು.

  • ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿ, ಅಧ್ಯಾಪಕರು 14 ದಿನಗಳ ಕಾಲ ಕ್ವಾರಂಟೈನ್ ಇರಬೇಕು.

ವಸತಿ ನಿಯಕ್ಕೂ ರೂಲ್ಸ್

ಕಾಲೇಜುಗಳು ಆರಂಭದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಉಳಿದುಕೊಳ್ಳುವ ವಸತಿ ನಿಲಯಗಳು ಸಹ ಕೋವಿಡ್‌ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡಿದೆ. ಬೆಂಗಳೂರು ವಿವಿ ಹಾಸ್ಟೆಲ್‌ಗಳನ್ನು ಶುಚಿಗೊಳಿಸಿದ್ದು, ಜ್ಞಾನಭಾರತಿ ಆವರಣದ ಬಿಸಿಎಂ ಹಾಸ್ಟೆಲ್ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಮೊದಲು ಆರು ವಿದ್ಯಾರ್ಥಿಗಳು ಒಂದು ಕೊಠಡಿಯಲ್ಲಿ ಉಳಿದುಕೊಳ್ಳುತ್ತಿದ್ದರು. ಇದೀಗ ಮೂವರು ಒಂದು ಕೊಠಡಿಯಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ. ಊಟದ‌ ಕೋಣೆಗೆ ವಿದ್ಯಾರ್ಥಿಗಳಿಗೆ ಪ್ರವೇಶವಿಲ್ಲ.  ಊಟ ಬಡಿಸಿಕೊಂಡು ತಮ್ಮ ಕೊಠಡಿಯಲ್ಲಿ ಊಟ ಮಾಡಬೇಕು.‌ ಹಾಸ್ಟೆಲ್‌ ಹೊರಗೆ ಗುಂಪಾಗಿ ವಿದ್ಯಾರ್ಥಿಗಳು ಸೇರುವಂತಿಲ್ಲ. ಕೊರೋನಾ ‌ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಕಾಲೇಜು ಆಡಳಿತ ಮಂಡಳಿ ಪಾಲನೆ ಮಾಡದೇ ಹೋದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಡಿಸಿಎಂ ಅಶ್ವತ್ಥ್ ನಾರಾಯಣ ಸೂಚನೆ ನೀಡಿದ್ದಾರೆ‌.

ಕೋವಿಡ್ ನಿಂದ ಕಳೆದ‌ 7 ತಿಂಗಳಿನಿಂದ ಬಂದ್ ಆಗಿದ್ದ ಕಾಲೇಜುಗಳು ಇಂದಿನಿಂದ ಆರಂಭವಾಗುತ್ತಿದ್ದು, ಮೊದಲು ಅಂತಿಮ ವರ್ಷದ ಪದವಿ, ಸ್ನಾತಕೋತ್ತರ, ಡಿಪ್ಲೊಮಾ, ತಾಂತ್ರಿಕ ಹಾಗೂ ವೈದ್ಯಕೀಯ ಕಾಲೇಜುಗಳು ಆರಂಭವಾಗಲಿವೆ. ಕಾಲೇಜು ಆರಂಭ ವಿದ್ಯಾರ್ಥಿಗಳಿಗೆ ಒಂದು ಕಡೆ ಖುಷಿಯಾದರೆ, ಮತ್ತೊಂದೆಡೆ ಆತಂಕ ಎದುರಾಗಿದೆ. ಕೊರೋನಾ‌ ಕೇಸ್ ಹೆಚ್ಚಿರುವ ಸಂದರ್ಭದಲ್ಲಿಯೇ ಪಿಯುಸಿ, ಎಸ್ ಎಸ್ ಎಲ್‌ ಸಿ ಪರೀಕ್ಷೆಗಳು‌ ಜರುಗಿದ್ದವು. ಇದೀಗ ಕೊರೋನಾ‌ ಕೇಸ್ ಇಳಿಕೆ‌ ಹೊತ್ತಿನಲ್ಲಿ ಕಾಲೇಜು ಆರಂಭವಾಗುತ್ತಿದ್ದು, ಕಾಲೇಜು ಆರಂಭ ಆಗುವುದು ನೋಡಿಕೊಂಡು ಶಾಲೆ‌ ತೆರೆಯಲು ಸರ್ಕಾರ‌ ಚಿಂತನೆ ನಡೆಸಿದೆ.‌

Share This Article
Leave a comment