ಮೃತದೇಹದೊಂದಿಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ!

Team Newsnap
1 Min Read

ಸ್ಮಶಾನಕ್ಕೆ ತೆರಳಲು ದಾರಿ ಇಲ್ಲದಿದ್ದರಿಂದ ಆಕ್ರೋಶಗೊಂಡ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿ ಗ್ರಾಮಸ್ಥರು ಸೋಮವಾರ ಬೆಳಗ್ಗೆಯೇ ಶವದೊಂದಿಗೆ ಬಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ಮಾಡಿದ ಘಟನೆ ನಡೆದಿದೆ.

ಏಣಗಿ ಗ್ರಾಮದ ಅಬ್ದುಲ್ ಖಾದರ್ ಮಿಶ್ರಿಕೋಟಿ (65) ಭಾನುವಾರ ರಾತ್ರಿ ಮೃತಪಟ್ಟಿದ್ದರು, ಹೀಗಾಗಿ ಸ್ಮಶಾನಕ್ಕೆ ತೆರಳಲು ದಾರಿ ಇಲ್ಲದೆ ಅಸಮಾಧಾನಗೊಂಡ ಗ್ರಾಮಸ್ಥರು ಮೃತದೇಹದೊಂದಿಗೆ ಆಗಮಿಸಿ ಧರಣಿ ಆರಂಭಿಸಿದ್ದರು. ಗ್ರಾಮದ ಲಿಂಗಾಯತ ಮತ್ತು ಮುಸ್ಲಿಂ ಸಮುದಾಯಗಳಡರಡೂ ಜನರಿಗೆ ಸ್ಮಶಾನಕ್ಕೆ ತೆರಳಲು ದಾರಿ ಇಲ್ಲದ್ದರಿಂದ ಅಂತ್ಯಸಂಸ್ಕಾರ ನಡೆಸಲು ತೊಂದರೆ ಆಗುತ್ತಿತ್ತು. ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ದಾರಿ ನಿರ್ಮಿಸಿಕೊಡುವ ಭರವಸೆ ನೀಡಿದ ನಂತರ ಧರಣಿ ಕೈಬಿಟ್ಟ ಗ್ರಾಮಸ್ಥರು ಮೃತದೇಹದೊಂದಿಗೆ ಮರಳಿ ಗ್ರಾಮಕ್ಕೆ ತೆರಳಿದ್ದಾರೆ. ಇದನ್ನು ಓದಿ – ಕೃಷಿಹೊಂಡದಲ್ಲಿ ಈಜಲು ಹೋಗಿ ಬೆಂಗಳೂರಿನ ಯುವಕರಿಬ್ಬರು ಜಲ ಸಮಾಧಿ

ಇದೇ ಸಂದರ್ಭದಲ್ಲಿ ಧರಣಿ ಸ್ಥಳಕ್ಕೆ ಆಗಮಿಸಿದ ರೈತ ಸಂಘಟನೆ ಮುಖಂಡರು, ಸತತವಾಗಿ ಮನವಿ ನೀಡುತ್ತ ಬಂದರೂ ಶಾಸಕರು, ಅಧಿಕಾರಿಗಳು ಕಣ್ತೆರೆದು ನೋಡುತ್ತಿಲ್ಲ. ಇದರಿಂದ ಸಾವು ಸಂಭವಿಸಿದಾಗಲೆಲ್ಲ ಗ್ರಾಮಸ್ಥರು ಸಮಸ್ಯೆ ಎದುರಿಸುವಂತಾಗಿದೆ. ಈ ಬಾರಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಂತ್ಯ ಸಂಸ್ಕಾರ ನಡೆಸುವುದಾಗಿ ಪಟ್ಟು ಹಿಡಿದಾಗ ರೈತ ಮುಖಂಡರನ್ನು ಪೊಲೀಸರು ಬಂಧಿಸಿ ಕರೆದೊಯ್ದರು.

’50 ವರ್ಷಗಳಿಂದ ಗ್ರಾಮದಲ್ಲಿ ಇದೇ ಸಮಸ್ಯೆ ನಡೆಯುತ್ತಿದೆ. ಗ್ರಾಮದಾಚೆ ಹೂಳಲು ಜಾಗ ಇದ್ದರೂ ಅಲ್ಲಿಗೆ ಹೋಗಲು ಮಧ್ಯ ಇರುವ ಹೊಲದ ಮಾಲೀಕರು ದಾರಿ ಕೊಡುತ್ತಿಲ್ಲ. ಗ್ರಾಮದಲ್ಲಿ ಲಿಂಗಾಯತ್, ಮುಸ್ಲಿಂ ಸಮಾಜದವರು ಯಾರೇ ಸತ್ತರೂ ಸಂಬಂಧಿಕರಿಗಿಂತ ಮುಂಚೆ ಪೊಲೀಸರಿಗೆ ಕರೆ ಮಾಡುವುದಾಗುತ್ತಿದೆ. ಈ ಕುರಿತು ಸಾಕಷ್ಟು ಸಾರಿ ಶಾಸಕರು, ಅಧಿಕಾರಿಗಳಿಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಈ ಪರಿಸ್ಥಿತಿಗೆ ಅಂತ್ಯ ಹಾಡಲು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದೇವೆ. ಸ್ಷಷ್ಟ ಭರವಸೆ ನೀಡದಿದ್ದರೆ ಜಿಲ್ಲಾಧಿಕಾರಿ ಆವರಣದಲ್ಲಿಯೇ ಅಂತ್ಯಸಂಸ್ಕಾರ ಮಾಡುತ್ತೇವೆ ಎಂದು ಮೃತನ ಸಂಬಂಧಿ ಇಬ್ರಾಹಿಂ ಹೇಳಿದ್ದಾರೆ.

Share This Article
Leave a comment