ಅದ್ಧೂರಿಯಾಗಿ ನಡೆಯುತ್ತಿದ್ದ ಶ್ರೀರಾಮನ ಶೋಭಾಯಾತ್ರೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ ಪರಿಣಾಮ ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಲವಕುಶ ಜನ್ಮಭೂಮಿ ಪುಣ್ಯಕ್ಷೇತ್ರ ಟ್ರಸ್ಟ್ ವತಿಯಿಂದ ಶ್ರೀರಾಮನವಮಿ ಪ್ರಯುಕ್ತ ಅದ್ಧೂರಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.
ಮೊದಲ ದಿನದ ಅಂಗವಾಗಿ ಶ್ರೀರಾಮನ ಶೋಭಾಯಾತ್ರೆ ಮುಳಬಾಗಿಲು ಪಟ್ಟಣದಲ್ಲಿ ನಡೆಯುತ್ತಿತ್ತು. 3 ಗಂಟೆ ಸುಮಾರಿಗೆ ಆರಂಭವಾದ ಶೋಭಾಯಾತ್ರೆ ಮುಳಬಾಗಿಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುತಿತ್ತು.
ಶೋಭಾಯಾತ್ರೆ ಸಂಜೆ 7.30ರ ಸುಮಾರಿಗೆ ಮುಳಬಾಗಿಲು ಪಟ್ಟಣದ ಜಹಂಗೀರ್ ಸರ್ಕಲ್ ಬಳಿ ಬರುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ರಸ್ತೆಯಲ್ಲಿ ಕತ್ತಲು ಆವರಿಸುತ್ತಿದ್ದ ಕೆಲವೇ ಕ್ಷಣಗಳಲ್ಲಿ ಶೋಭಾಯಾತ್ರೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಆಗ ಶೋಭಾಯಾತ್ರೆಯಲ್ಲಿದ್ದವರು ಚೆಲ್ಲಾಪಿಲ್ಲಿಯಾಗಿ ಓಡಲು ಆರಂಭಿಸಿದ್ದಾರೆ. ಕೆಲವರು ಕಲ್ಲು ತೂರಾರಟ ನಡೆಸಿದವರ ಮೇಲೆ ಪ್ರತಿಯಾಗಿ ಕಲ್ಲುತೂರಲು ಆರಂಭಿಸಿ ಈವೇಳೆ ಪರಿಸ್ಥಿತಿಯಲ್ಲಿ ನಿಯಂತ್ರಿಸಿಲು ಪೊಲೀಸರ ಲಾಠಿ ಚಾರ್ಜ್ ಮಾಡಿದ್ದಾರೆ.
ಶೋಭಾಯಾತ್ರೆ ಸಾಗುತ್ತಿದ್ದ ರಸ್ತೆಯಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದ್ದೇ ಮತ್ತೆ ವಿದ್ಯುತ್ ಬರುವಷ್ಟರಲ್ಲಿ ಶಾಂತವಾಗಿದ್ದ ಶೋಭಾಯಾತ್ರೆಯಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿ ಹೋಗಿತ್ತು.
ರಸ್ತೆ ಬಳಿ ಇದ್ದ ಜನರೆಲ್ಲಾ ಅಂಗಡಿಗಳನ್ನು ಬಂದ್ ಮಾಡಿ, ಕೆಲವು ಕಿಡಿಗೇಡಿಗಳು ರಸ್ತೆ ಬಳಿ ಇದ್ದ ಬೈಕ್ವೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ರಸ್ತೆ ಬದಿ ಇದ್ದ ಕೆಲವು ಕಾರ್ಗಳ ಮೇಲೆ ಪೊಲೀಸರ ವಾಹನಗಳ ಮೇಲೂ ಕಲ್ಲು ತೂರಾಟ ಮಾಡಿದ್ದಾರೆ. ಕ್ಷಣದಲ್ಲಿ ಎರಡು ಕೋಮಿನ ಜನರ ನಡುವೆ ಸಂಘರ್ಷಕ್ಕೆ ದಾರಿ ಮಾಡುವ ಸಾಧ್ಯತೆ ಇದ್ದ ಹಿನ್ನೆಲೆ ಪರಿಸ್ಥಿತಿಯನ್ನು ನಿಯಂತ್ರಿಸಿದ ಪೊಲೀಸರು ಜನರನ್ನು ಚದುರಿಸಿದ್ದಾರೆ.