ಪರಿಸರ ವೃದ್ಧಿಗೆ ಮುಂದಿನ ರಾಜ್ಯ ಬಜೆಟ್ನಲ್ಲಿ ವಿಶೇಷ ಯೋಜನೆ ರೂಪಿಸುವ ಉದ್ದೇಶ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ಇಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪರಿಸರ ನಷ್ಟ ತಪ್ಪಿಸಲು ಇದೇ ಮೊದಲ ಬಾರಿಗೆ ಯೋಜನೆ ತರುವ ಆಶಯವಿದೆ ಎಂದರು.
ಪರಿಸರ ನಷ್ಟ ತಪ್ಪಿಸಬೇಕಾದರೆ ಪರಿಸರದ ವಾರ್ಷಿಕ ಅಧ್ಯಯನ ನಡೆಸಬೇಕು. ಇತ್ತೀಚೆಗೆ ಪರಿಸರ ನಷ್ಟ ಜಾಸ್ತಿಯಾಗುತ್ತಿದೆ. ಮುಂದಿನ ಪೀಳಿಗೆಗಾಗಿ ನಾವು ಪರಿಸರ, ಅರಣ್ಯ ಸಂರಕ್ಷಣೆ ಮಾಡಬೇಕಿದೆ ಎಂದು ಸಿಎಂ ಅಭಿಪ್ರಾಯಪಟ್ಟರು.
ಕಾಡು ಉಳಿಸುವ ಕೆಲಸ ಅತ್ಯಂತ ದಕ್ಷತೆಯಿಂದ ಆಗಬೇಕು. ಸರ್ಕಾರವೂ ಇತ್ತ ಗಮನ ನೀಡಲಿದೆ. ಕಾಡಿನ ಜತೆ ಪ್ರಾಣಿಗಳ ಬಲಿ ಕಡಿಮೆಯಾಗಬೇಕು. ಪ್ರಾಣಿಗಳಿಂದ ಮನುಷ್ಯರ ಪ್ರಾಣ ಉಳಿಸುವುದೂ ಮುಖ್ಯ. ಪ್ರಾಣಿಗಳ ದಾಳಿಯಿಂದ ಮರಣ ಹೊಂದಿದ ಜನರು ಹುತಾತ್ಮರು ಎಂದು ತಿಳಿಸಿದರು.
ಅರಣ್ಯ ಮತ್ತು ಪರಿಸರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಹಾಗೂ ಇತರ ಹಿರಿಯ ಅಧಿಕಾರಿಗಳು ಇದ್ದರು. ಸಮಾರಂಭಕ್ಕೂ ಮುನ್ನ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಬೊಮ್ಮಾಯಿ ಪುಷ್ಪನಮನ ಸಲ್ಲಿಸಿದರು.