ಸಿದ್ದರಾಮಯ್ಯ ಕಾಂಗ್ರೆಸ್ ನಾಶ ಮಾಡುತ್ತಾರೆ – ಕುಮಾರಸ್ವಾಮಿ

Team Newsnap
1 Min Read

ಕಾಂಗ್ರೆಸ್‌ನ ಸರ್ವನಾಶ ಸಿದ್ಧರಾಮಯ್ಯನವರಿಂದಲೇ’ ಎಂದು ಜೆಡಿಎಸ್‌ ಪಕ್ಷದ ನಾಯಕ ಕುಮಾರಸ್ವಾಮಿಯವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ‌.

ರಾಜ್ಯದಲ್ಲಿ ಉಪಚುಣಾವಣೆಯ ಕದನ ರಂಗೇರುತ್ತಿದ್ದು ರಾಜಕೀಯ ಪಕ್ಷಗಳ ಮಧ್ಯೆ ಜಟಾಪಟಿಯೂ ಪ್ರಾರಂಭವಾಗಿದೆ. ಉಪಚುಣಾವಣೆಯಲ್ಲಿ‌ ಜೆಡಿಎಸ್ ಬಿಜೆಪಿ‌ ಜೊತೆ ಒಳ ಒಪ್ಪಂದ ಮಾಡಿಕೊಂಡಿದೆ. ಜೆಡಿಎಸ್‌ನದ್ದು ಅಳುಬುರುಕು ರಾಜಕಾರಣ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಕುಮಾರಸ್ವಾಮಿ ಆಕ್ರೋಶಗೊಂಡಿದ್ದರು.

‘ಸಿದ್ದರಾಮಯ್ಯನವರು ಮೊದಲು ಚಿಲ್ಲರೆ ರಾಜಕಾರಣ ಮಾಡುವದನ್ನು ನಿಲ್ಲಿಸಬೇಕು. ಸಿದ್ದರಾಮಯ್ಯನವರ ಇತಿಹಾಸ ನೋಡಿದರೆ ಅವರ ಸಂಸ್ಕೃತಿ ಎಂತಹದ್ದೆಂದು ಗೊತ್ತಾಗಲಿದೆ. ತಾವು ಬೆಳೆದು ಬಂದ ಪಕ್ಷದ ನಾಶದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರಿಂದಲೇ ಕಾಂಗ್ರೆಸ್ ಸರ್ವನಾಶವಾಗುತ್ತಿದೆ’ ಎಂದರು.

ಡಿಕೆಶಿ ಅವರ ಮೇಲಿನ ಸಿಬಿಐ ದಾಳಿಯ ಬಗ್ಗೆ ಮಾತನಾಡಿದ ಅವರು ‘ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಹೆದರುವ ಅವಶ್ಯಕತೆ ಇಲ್ಲ. ನಮ್ಮ ಕೆಲಸ ಪ್ರಾಮಾಣಿಕವಾಗಿದ್ದರೆ ಯಾವುದೇ ರೀತಿಯ ತನಿಖೆ ಎದುರಿಸಲು ಸನ್ನದ್ಧರಾಗಿರಬೇಕು. ಸರ್ಕಾರದ ಸ್ವಾಯತ್ತ ಸಂಸ್ಥೆಗಳ ಮೇಲೆ ನನಗೆ ಗೌರವವಿದೆ. ಇಂತಹ ಸಮಯದಲ್ಲಿನ ರಾಜಕೀಯ ಪ್ರೇರಿತ ಎಂದೆನ್ನಿಸಬಹುದು’ ಎಂದು ಕಾಂಗ್ರೆಸ್‌ನ್ನು ಪರೋಕ್ಷವಾಗಿ‌ ತಿವಿದರು.

Share This Article
Leave a comment