February 18, 2026

Newsnap Kannada

The World at your finger tips!

25BGMYSUGAR

ಬಿಳಿ ಆನೆ ಸಾಕಲು ಮತ್ತೆ ಸಜ್ಜಾದ ರೋಗಗ್ರಸ್ತ ಮೈಷುಗರ್ !

Spread the love

ರೋಗಗ್ರಸ್ತ ಮೈಸೂರು ಸಕ್ಕರೆ ಕಾರ್ಖಾನೆಗೆ ಹೊಸ ಅಧಿಪತಿ ನೇಮಕ ಮಾಡಿರುವ ಸರ್ಕಾರ ಮತ್ತೊಂದು ಬಿಳಿ ಆನೆಯನ್ನು ಸಾಕಲು ಸಜ್ಜಾಗಿದೆ.

ಈ ಬಿಜೆಪಿ ಸರ್ಕಾರಕ್ಕೆ ಒಂದು ಚೂರು ರೈತರ ಪರ ಕಾಳಜಿ ಇಲ್ಲ. ಮೈಷುಗರ್ ಕಾರ್ಖಾನೆಗೆ ಸಂಬಂಧಿಸಿದಂತೆ ಯಾವುದೇ ನಿರ್ಧಿಷ್ಟ ನಿರ್ಧಾರ ಕೈಗೊಳ್ಳುವ ಮೊದಲು ಕಾರ್ಖಾನೆಗೆ ಹೊಸ ಅಧ್ಯಕ್ಷರ ನೇಮಕಾತಿ ಮಾಡುವ ಅಗತ್ಯವಿತ್ತೆ ಎನ್ನುವ ಚರ್ಚೆಗಳು ಆರಂಭವಾಗಿವೆ.

ಯಾರು ಕೇಳಿದ್ದರು ಮೈಷುಗರ್ ಕಾರ್ಖಾನೆಗೆ ಒಬ್ಬ ಅಧ್ಯಕ್ಷ ಬೇಕು ಅಂತ? ಒಬ್ಬ ದಕ್ಷ, ಪ್ರಾಮಾಣಿಕ ಎಂಡಿ ಬೇಕು ಎಂಬ ಕೂಗು ಪ್ರತಿ ಸರ್ಕಾರದಲ್ಲೂ ಅರಣ್ಯ ರೋಧನವಾಗುತ್ತಲೇ ಇದೆ. ಈ ವೇಳೆಗೆ ಹೊಸ ಅಧ್ಯಕ್ಷರ ನೇಮಕಾತಿ ವಿವಾದಕ್ಕೆ ಕಾರಣವಾಗಲಿದೆ.

ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಅದಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆಗಳೂ ಆರಂಭವಾಗಿದೆ. ಆದರೆ ಈ ಮೊದಲೇ ಅಧ್ಯಕ್ಷರ ನೇಮಕದ ನಿರ್ಧಾರ ತಪ್ಪು ಹೆಜ್ಜೆ ತುಳಿದಂತಾಗಿದೆ.

  1. ಮೈಷುಗರ್ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವ ರೈತರು ಅತಂತ್ರವಾಗಿದ್ದಾರೆ ಜೊತೆಗೆ ಗೊಂದಲದಲ್ಲೂ ಇದ್ದಾರೆ.
  2. 4 ವರ್ಷಗಳಿಂದ ಹಿಡಿ ಕಬ್ಬನ್ನು ಅರೆದಿಲ್ಲ. ಇನ್ನೂ ರೈತರಿಗೆ ಪೇಮೆಂಟ್ ಬಾಕಿ ಇದೆ.
  3. ಕಾರ್ಖಾನೆಯ ಮಿಷನ್ ಗಳೆಲ್ಲವೂ ತುಕ್ಕು ಹಿಡಿದು ಹೋಗಿವೆ. ಕ್ಲೀನ್ ಮಾಡುವವರೂ ದಿಕ್ಕಿಲ್ಲ.
  4. ಮೈಷುಗರ್ ಪುನಶ್ಚೇತನಕ್ಕಾಗಿ ನೀಡಿದ್ದ 420 ಕೋಟಿ ರು ಗಳ ವರೆಗಿನ ಅನುದಾನ ಸಾರ್ಥಕ ಆಗಲೇ ಇಲ್ಲ.
  5. ಕಾರ್ಖಾನೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ಮಾಡಿ ಹಣವನ್ನು ನುಂಗಿ ನೀರು ಕುಡಿದ ಅನೇಕ ಅಧಿಕಾರಿಗಳು ಹಾಗೂ ಕೆಲವು ಮಾಜಿ ಅಧ್ಯಕ್ಷರುಗಳು ಇಂದಿಗೂ ಸತ್ಯ ಹರಿಶ್ಚಂದ್ರನ ರೀತಿಯಲ್ಲಿ ಮಾತನಾಡಿ, ಬಚಾವ್ ಆಗುತ್ತಲೇ ಬಂದಿದ್ದಾರೆ.
  6. ಭ್ರಷ್ಟಾಚಾರ ನಡೆಸಿದವರ ವಿರುದ್ಧ ಈವರೆಗೆ ತನಿಖೆ ಆಗಿಲ್ಲ ಎಂದರೆ ಶಿಕ್ಷೆಯ ಮಾತು ದೂರವೇ ಉಳಿಯಿತು.
  7. ಮೈಷುಗರ್ ಅಧೀನದಲ್ಲಿರುವ ಕೋಟ್ಯಾಂತರ ರುಗಳ ಆಸ್ತಿ ಕಾಪಾಡುವ ತಾಕತ್ತು ಸರ್ಕಾರಕ್ಕೆ ಇಲ್ಲ.
  8. ಕಾರ್ಮಿಕರ ಸ್ಥಿತಿ ಅಧೋಗತಿಯಾಗಿದೆ. ಸಂಬಳ, ಸ್ವಯಂ ನಿವೃತ್ತಿ ಯೋಜನೆ ಯಾವುದೂ ಸರಿಯಾದ ರೀತಿಯಲ್ಲಿ ಅನುಷ್ಠಾನಗೊಂಡಿಲ್ಲ ಎನ್ನುವುದು ಕಾರ್ಮಿಕ ವರ್ಗದ ದೂರು.
  9. ಮೈಷುಗರ್ ಮಂಡ್ಯ ರೈತರ ಜೀವನಾಡಿ. ಸರ್ಕಾರಿ ಸ್ವಾಮ್ಯದ ಏಕೈಕ ಕಾರ್ಖಾನೆ. ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಹಿಂದಿನ ಅಥವಾ ಈಗಿನ ಸರ್ಕಾರಕ್ಕೆ ಯಾವುದೇ ಪ್ರಾಮಾಣಿಕತೆ ಇಲ್ಲ.
  10. ಜಿಲ್ಲಾ ಬಿಜೆಪಿ ಅನೇಕ ನಾಯಕರನ್ನು ಹೊರಗಿಟ್ಟು ಮೈಷುಗರ್ ಕಾರ್ಖಾನೆಗೆ ಹೊಸ ಅಧ್ಯಕ್ಷರನ್ನು ಸಿಎಂ ನೇಮಕ ಮಾಡಿದ್ದಾರೆ. ಬಿಜೆಪಿಯಲ್ಲಿ ಪರ ವಿರೋಧದ ಮಾತುಗಳು ಕೇಳಿ ಬಂದಿವೆ .
  11. ರೈತ ಸಂಘದ ಹಲವಾರು ಬಣಗಳು, ಕಾಂಗ್ರೆಸ್ ಮತ್ತು ಜೆಡಿಎಸ್ ಮೌನ ಮುರಿದು ಒಗ್ಗಟ್ಟಿನಿಂದ ಮೈಷುಗರ್ ಪುನಶ್ಚೇತನಕ್ಕೆ ಹೋರಾಟ ಮಾಡದೇ ಹೋದರೆ ಮಂಡ್ಯದ ರೈತರ ಸ್ಥಿತಿ ಮಾತ್ರ ಅಧೋಗತಿಗೆ ಹೋಗುತ್ತದೆ.
ಮೈಷುಗರ್ ಕಾರ್ಖಾನೆಗೆ ಹೊಸ ಅಧಿಪತಿ: ಶಿವಲಿಂಗೇಗೌಡ ಅಧ್ಯಕ್ಷ
f37190da c10b 4fe2 9260 0318ca5ff47b 1


ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ಪಾಂಡವಪುರ ತಾಲೂಕಿನ ಕನಕನಮರಡಿಯ ಶಿವಲಿಂಗೇಗೌಡರನ್ನು ಮೈಷುಗರ್ ಕಾರ್ಖಾನೆಯ ನೂತನ ಅಧ್ಯಕ್ಷರಾಗಿ ಸರ್ಕಾರ ನೇಮಕ ಮಾಡಿದೆ.

ec99ab87 b223 4599 b182 c4e679027097
error: Content is protected !!