ಕಾವೇರಿ ಜಲಾಶಯಗಳಿಂದ ನಿರಂತರ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಜಾತ್ಯಾತೀತ ಜನತಾದಳ ಪಕ್ಷದ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಿಂದ ಕಾವೇರಿ ಉಳಿಸಿ ರೈತರನ್ನು ರಕ್ಷಿಸಿ, ಕಾವೇರಿ ಉಳಿಸಿ ಕುಡಿಯುವ ನೀರು ಸಂರಕ್ಷಿಸಿ ಘೋಷವಾಕ್ಯದೊಂದಿಗೆ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
![kaveri dam krs dam karnataka](https://kannada.thenewsnap.com/wp-content/uploads/2023/09/kaveri-dam-krs-dam-karnataka-1024x680.jpeg)
ಮಾಜಿ ಸಚಿವರಾದ ಜಿ.ಟಿ.ದೇವೇಗೌಡ, ಸಿ ಎಸ್ ಪುಟ್ಟರಾಜು ನೇತೃತ್ವದಲ್ಲಿ ರೈತರ ಹಿತ ಕಡೆಗಣಿಸಿ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ,ಕೆ ಶಿವಕುಮಾರ್ ಹಾಗೂ ರಾಜ್ಯದ ಸಂಸದರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶಿಸಿ ಕಾವೇರಿ ವಿಚಾರದಲ್ಲಿ ಅನ್ಯಾಯವಾಗಿದ್ದರೂ ವಿರೋಧಿಸದ ಬೆಂಗಳೂರಿನ ಜನರ ವಿರುದ್ಧವೂ ಸಹ ಕಿಡಿಕಾರಿದರು.
ಕರ್ನಾಟಕ ಕಾವೇರಿ ಜಲಾನಯನ ಭಾಗದಲ್ಲಿ ಶೇಕಡ 51 ಹೆಚ್ಚಿನ ಭಾಗ ಮಳೆಯ ಕೊರತೆಯಾಗಿದೆ ಇದರಿಂದ ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಹಾಸನದ ರೈತರು ಅತ್ಯಂತ ಸಂಕಷ್ಟಕ್ಕೆ ಸಿಲುಕಿದ್ದಾರೆ.
![kaveri water issue mandya news](https://kannada.thenewsnap.com/wp-content/uploads/2023/09/kaveri-water-issue-mandya-news-1024x680.jpeg)
ಕರ್ನಾಟಕ ಸರ್ಕಾರ ಕಾವೇರಿ ಜಲಾನಯನ ಪ್ರದೇಶದ ವಾಸ್ತವ ಪರಿಸ್ಥಿತಿಯನ್ನು ಕಾವೇರಿ ಪ್ರಾಧಿಕಾರ ಮತ್ತು ನಿಯಂತ್ರಣ ಮಂಡಳಿ ಮತ್ತು ಸುಪ್ರೀಂ ಕೋರ್ಟ್ಗೆ ಮನವರಿಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ. ಇದರಿಂದ ರಾಜ್ಯದ ರೈತರು ಸಂಕಷ್ಟ ಎದುರುಸುತ್ತಿದ್ದಾರೆ.
ಮೊದಲನೇ ಬೆಳೆಯನ್ನು ನಾವು ನಾಟಿ ಮಾಡುವ ಹಂತದಲ್ಲಿದ್ದೇವೆ. ಬೆಳೆದು ನಿಂತ ಕಬ್ಬಿನ ರಕ್ಷಣೆ ಆಗಬೇಕಾಗಿದೆ. ಅದಕ್ಕಾಗಿ ನೀರಿನ ತುರ್ತು ಅಗತ್ಯತೆ ಇದೆ.
ತಮಿಳುನಾಡು ಈಗಾಗಲೇ ಎರಡು ಬೆಳೆಗಳನ್ನು ಬೆಳೆದಿದೆ. ಕುರುವೈ ಬೆಳೆಯನ್ನು ಬೆಳೆಯಲು ಹೊರಟಿದೆ, ರಾಜ್ಯದಲ್ಲಿ ಮಳೆಗಾಲ ಹೆಚ್ಚು-ಕಡಿಮೆ ಮುಗಿದಿದ್ದು, ತಮಿಳುನಾಡಿಗೆ ಮಳೆ ಬರುವ ಸಾಧ್ಯತೆ ಇದೆ. ಆದರೂ ಸಹ ಸಂಕಷ್ಟಕಾಲದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ಹೆಚ್ಚಿನ ಪ್ರಮಾಣದ ನೀರು ಹರಿಸುತ್ತಿದೆ ಎಂದು ಹೇಳಿದರು .
![kaveri fight mandya](https://kannada.thenewsnap.com/wp-content/uploads/2023/09/kaveri-fight-mandya-1024x680.jpeg)
ಈಗಾಗಲೇ 13 ಟಿ.ಎಂ.ಸಿ.ನೀರನ್ನು ಹರಿಸಲಾಗಿದೆ. ಜೊತೆಗೆ ಕಳೆದ ನಾಲ್ಕು ದಿನಗಳಿಂದ ಪ್ರತಿನಿತ್ಯ ನೀರು ಹರಿಸುತ್ತಾ ಬಂದಿದೆ ಇದರಿಂದ ಕೆ ಆರ್ ಎಸ್ ನಲ್ಲಿ ನೀರಿನ ಮಟ್ಟ 99 ಅಡಿಗೆ ಕುಸಿದಿದೆ.
ತಮಿಳುನಾಡು ಸರ್ಕಾರ ಕೇಂದ್ರ ಜಲಾನಯನ ಇಲಾಖೆ, ಕಾವೇರಿ ನಿಯಂತ್ರಣ ಮಂಡಳಿ ಮತ್ತು ಕಾವೇರಿ ಪ್ರಾಧಿಕಾರಯ ಅನುಮತಿ ಇಲ್ಲದೆ ಹಾಗೂ ಕರ್ನಾಟಕ ಸರ್ಕಾರದ ಅನುಮತಿ ಪಡೆಯದೆ 3300 ಕೋಟಿ ವೆಚ್ಚದಲ್ಲಿ ಹೊಸ ನಾಲೆಗಳನ್ನು ಮಾಡಿ ಖುಷ್ಟಿ ನೀರಾವರಿ ಜಮೀನುಗಳನ್ನು ಒಳಪಡಿಸಿದೆ.
ದಕ್ಷಿಣ ತಮಿಳುನಾಡು ಭಾಗದಲ್ಲಿ 14400 ಕೋಟಿ ವೆಚ್ಚದಲ್ಲಿ ಕಾವೇರಿ ನದಿಗೆ ವಗೈ, ವೆಲ್ಲಾರೂ ಹಾಗೂ ಗುಂಡಾರು ನದಿಗಳನ್ನು ಜೋಡಿಸುವ ಕಾರ್ಯಕ್ರಮಕ್ಕೆ ಚಾಲನೆಯಲ್ಲಿದೆ. ಇದರಿಂದ 109264 ಎಕರೆಗೆ ಹೊಸದಾಗಿ ನೀರು ನೀಡಬಹುದಾಗಿದೆ ಅಷ್ಟೇ ಅಲ್ಲದೆ 1094 ಕೆರೆಗಳಿಗೆ ಹೊಸದಾಗಿ ನೀರನ್ನು ಪೂರೈಕೆ ಮಾಡುವಂತಹ ಬೃಹತ್ ಯೋಜನೆಯಾಗಿದೆ. ಈಗಿದ್ದರೂ ಸಹ ಕರ್ನಾಟಕ ಸರ್ಕಾರ ಸುಮ್ಮನೆ ಕುಳಿತಿದೆ ಎಂದು ಆರೋಪಿಸಿದರು.
ಮೇಕೆದಾಟು ಸಮತೋಲನ ಜಲಾಶಯದ ನಿರ್ಮಾಣಕ್ಕೆ ತಮಿಳುನಾಡು ನಿರಂತರ ಅಡ್ಡಿಪಡಿಸುತ್ತಿದೆ. ಆದರೆ ಕರ್ನಾಟಕ ಸರ್ಕಾರದ ಅನುಮತಿ ಇಲ್ಲದೇ ತಮಿಳುನಾಡು ಕೈಗೆತ್ತಿಕೊಂಡಿರುವ ಯೋಜನೆಗಳನ್ನು ವಿರೋಧಿಸಲು ಕರ್ನಾಟಕ ಸರ್ಕಾರ ಮುಂದಾಗಿಲ್ಲ, ಸರ್ಕಾರ ಮನಸ್ಸು ಬಂದಂತೆ ತಮಿಳುನಾಡಿಗೆ ನೀರನ್ನು ಹರಿಸುತ್ತಿದ್ದಾರೆ. ಇದರಲ್ಲಿ ಯಾವ ಉದ್ದೇಶ ಅಡಕವಾಗಿದೆ ಎನ್ನುವುದು ಅರ್ಥವಾಗುತ್ತಿಲ್ಲ. ಕರ್ನಾಟಕ ರೈತರನ್ನು, ಜನರನ್ನು ಬಲಿ ಕೊಡುವ ಕೆಲಸ ಮಾಡುತ್ತಿದೆ ಎಂದು ದೂರಿದರು.ಭಾರತದ ಪ್ರಥಮ ಸೂರ್ಯ ಯಾನ ಉಪಗ್ರಹ ಯಶಸ್ವಿ ಉಡಾವಣೆ | Aditya L1
ಮಾಜಿ ಶಾಸಕರಾದ ಡಾ. ಕೆ. ಅನ್ನದಾನಿ. ಸುರೇಶ ಗೌಡ, ಕೆ.ಟಿ.ಶ್ರೀಕಂಠೇಗೌಡ, ರವೀಂದ್ರ ಶ್ರೀಕಂಠಯ್ಯ ಪಕ್ಷದ ಜಿಲ್ಲಾಧ್ಯಕ್ಷ ಡಿ ರಮೇಶ್ ನೇತೃತ್ವ ವಹಿಸಿದ್ದರು.