ಸಂತೋಷ್ ಪಾಟೀಲ್ ಆತ್ಮಹತ್ಯೆ ಸುತ್ತ ಅನುಮಾನದ ಹುತ್ತ – ಸಿ.ಟಿ.ರವಿ

Team Newsnap
1 Min Read

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಬಗ್ಗೆ ಸಾಕಷ್ಟು ಅನುಮಾನವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ , ಈಶ್ವರಪ್ಪ, ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು ರಾಜೀನಾಮೆ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಡಿವೈಎಸ್‍ಪಿ ಗಣಪತಿ, ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಹೋಲಿಕೆ ಮಾಡಲು ಬರುವುದಿಲ್ಲ. ಸಮಾಜದಲ್ಲಿ ಸತ್ತವರ ಪರ ಸ್ವಾಭಾವಿಕವಾಗಿ ಸಿಂಪಥಿ ಇರುತ್ತೆ. ನಾನು ಶಾಸಕನಾಗಿ ರಿಸ್ಕ್ ತೆಗೆದುಕೊಂಡು 5-10 ಲಕ್ಷದ ಕೆಲಸವನ್ನು ಮಾಡಿಸಿದ್ದೇನೆ ಎಂದರು.

ಸಂತೋಷ್ ಪಾಟೀಲ ದೆಹಲಿಗೆ ಹೋಗಿ ಸುದ್ದಿಗೋಷ್ಠಿ ಮಾಡುತ್ತಾರೆ. ಸಾಮಾನ್ಯ ವ್ಯಕ್ತಿಗಳು ದೆಹಲಿಗೆ ಹೋಗಿ ಸುದ್ದಿಗೋಷ್ಠಿ ಮಾಡಲು ಆಗುತ್ತಾ? ಅಷ್ಟೆಲ್ಲಾ ರಾಜಕಾರಣ ಗೊತ್ತಿರುವವನು ಆತ್ಮಹತ್ಯೆಗೆ ಯಾಕೆ ಶರಣಾದ? ನಿಜವಾಗಲೂ ಆತ್ಮಹತ್ಯೆ ನಡೆದಿದ್ಯಾ? ಇಲ್ಲಾ ಇದರ ಹಿಂದೆ ಬೇರೆ ಏನಾದರೂ ಇದ್ಯಾ? ಈ ಎಲ್ಲದರ ಬಗ್ಗೆ ಸಮಗ್ರವಾದ ತನಿಖೆಯಾಗಬೇಕು ಎಂದು ಅನುಮಾನ ವ್ಯಕ್ತಪಡಿಸಿದರು.

ಕೋಟಿಗಟ್ಟಲೆ ಕಾಮಗಾರಿಯನ್ನು ಮಂಜೂರು ಆಗದೇ ಕೆಲಸ ಮಾಡೋಕೆ ಬರುತ್ತಾ? ಸಂತೋಷ್ ಸಾವಿನ ಸುತ್ತ ಅನುಮಾನದ ಹುತ್ತ ಇರೋದು ಸ್ಪಷ್ಟವಾಗಿದೆ ಎಂದರು.

ಸಂತೋಷ್‍ನನ್ನು ನಮ್ಮ ಪಕ್ಷದ ಕಾರ್ಯಕರ್ತ ಅಂತಾನೂ ಹೇಳುತ್ತಾರೆ. ಕೈ ನಾಯಕ ರಾಹುಲ್ ಗಾಂಧಿ ಹೆಸರು ನಕಲು ಮಾಡಿ ಕಾಂಗ್ರೆಸ್ ಜಿಲ್ಲಾ ಪಂಚಾಯಿತಿ ಟಿಕೆಟ್ ತೆಗೆದುಕೊಳ್ಳಲು ಪ್ರಯತ್ನ ಮಾಡಿದ್ದ ಅಂತಾ ಕೂಡ ಹೇಳುತ್ತಾರೆ.

ಆದರೂ ಪಾಟೀಲ್ ಸಾವು ದುರದೃಷ್ಟಕರ, ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಆಗಬೇಕು ಎಂದು ಆಗ್ರಹಿಸಿದರು.

Share This Article
Leave a comment