ನ್ಯಾಯಾಂಗ ಬಂಧನದಲ್ಲಿದ್ದ ನಟಿ ಸಂಜನಾ ಜಾಮೀನು ಅರ್ಜಿಯ ವಿಚಾರಣೆ ಶುಕ್ರವಾರ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು.
ಜಾಮೀನು ಅರ್ಜಿಯ ವಿಚಾರಣೆ ಮಾಡಿದ ನ್ಯಾಯಮೂರ್ತಿ ಸೀನಪ್ಪ , ಸಂಜನಾ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ ೩೦ರವರೆಗೆ ವಿಸ್ತರಿಸಿದರು.
ನ್ಯಾಯಾಂಗ ಬಂಧನ ವಿಸ್ತರಣೆಯ ತೀರ್ಪನ್ನು ಕೇಳುತ್ತಿದ್ದಂತೆ ನಟಿ ಸಂಜನಾ ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿ ಜಾಮೀನು ನೀಡಲು ಗೋಗರೆದರು. ‘ನಾನು ೧೮೦ ಜನರಿಗೆ ಕೆಲಸ ನೀಡಿದ್ದೇನೆ. ನಾನು ಜೈಲಿನಲ್ಲಿರುವದರಿಂದ ಅವರಿಗೆ ತೊಂದರೆ ಆಗಲಿದೆ. ಹಾಗಾಗಿ ಜಾಮೀನಿನ ಬಗ್ಗೆ ಆದೇಶ ನೀಡಿ’ ಎಂದು ಗೋಗರೆದಿದ್ದಾರೆ. ಆಗ ನ್ಯಾಯಾಧೀಶರು ‘ನಿಮ್ಮ ವಕೀಲರು ನಿಮ್ಮ ಪರ ಜಾಮೀನು ಕುರಿತು ಅರ್ಜಿ ನೀಡಿದ್ದಾರೆ. ಆಕ್ಷೇಪಣೆಗೋಕಸ್ಕರ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ. ಎರಡೂ ಕಡೆಯ ವಾದ ಆಲಿಸಿ ನಾಳೆ ತೀರ್ಪು ನೀಡುತ್ತೇನೆ’ ಎಂದು ಹೇಳಿದಾಗ, ನಟಿ ಸಂಜನಾ ಆತುರಕ್ಕೆ ಬಿದ್ದು ‘ಜಾಮೀನಿನ ಬಗ್ಗೆ ಇಂದು ಅಥವಾ ನಾಳೆ ನಿರ್ಧಾರವಾಗುತ್ತಾ?’ ಎಂದು ನ್ಯಾಯಾಧೀಶರಿಗೇ ಮರುಪ್ರಶ್ನೆ ಹಾಕಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ನ್ಯಾಯಾಧೀಶರು ‘ಅದರ ಬಗ್ಗೆ ಈಗಲೇ ಹೇಳಲಾಗುವದಿಲ್ಲ’ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.