ಮೈಸೂರು ಅರಮನೆ ಆವರಣದಲ್ಲಿ ಒಡೆಯರ್ ಕೊಡುಗೆಗಳ ಬಗ್ಗೆ ಹಂಸಲೇಖ ರೂಪಕಕ್ಕೆ ರಾಜಮಾತೆ‌ ಪ್ರಮೊದಾದೇವಿ ಇಂಗಿತ

Team Newsnap
2 Min Read

ಬೆಂಗಳೂರು : ಮುಂದಿನ ದಸರಾ ಸಂಭ್ರಮಾಚರಣೆಯ ಮೊದಲೇ, ಮೈಸೂರು ನಗರದ ವಿಶ್ವ ವಿಖ್ಯಾತ ಅರಮನೆ ಆವರಣ ಹೊಸ ಪ್ರಯತ್ನವೊಂದಕ್ಕೆ ಸಾಕ್ಷಿಯಾಗಲಿದೆ. ಜನಪರ ಆಡಳಿತಗಾರ, ಆಧುನಿಕ ಭಾರತದ ಕನಸುಗಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೀವನ-ಸಾಧನೆ- ಕೊಡುಗೆ ಬಗ್ಗೆ ನಾದ ಬ್ರಹ್ಮ ಶ್ರೀ ಹಂಸಲೇಖ ರಚಿಸಲಿರುವ ರೂಪಕವೊಂದು ಅಲ್ಲಿ ಪ್ರದರ್ಶನಗೊಳ್ಳಲಿದೆ.

ಈ ಘೋಷಣೆಗೆ ಸಾಕ್ಷಿಯಾಗಿದ್ದು, ನಗರದ ಬೆಂಗಳೂರು ಸಿಟಿ ಇನ್ಸಿಟ್ಯೂಟ್ ನಲ್ಲಿ ಶುಕ್ರವಾರ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಂಸ್ಮರಣೆ ಹಾಗು ನಾಲ್ವಡಿ ಕುರಿತ ಕಿರು ಚಿತ್ರ ಪ್ರದರ್ಶನ ಕಾರ್ಯಕ್ರಮ. ಬೆಂಗಳೂರು ಸಿಟಿ ಇನಸ್ಟಿಟ್ಯೂಟ್ ನೀಡಿರುವ ಗೌರವ ಸದಸ್ಯತ್ವವನ್ನು ಸ್ವೀಕರಿಸಿ ಮಾತನಾಡಿದ ರಾಜಮಾತೆ ಗೌರವಾನ್ವಿತ ಡಾ ಪ್ರಮೋದಾದೇವಿ ಒಡೆಯರ್ ಅವರು ಈ ಸಂಬಂಧ ಮುಂದಿಟ್ಟ ಕೋರಿಕೆಗೆ ಅಲ್ಲೆ ಒಪ್ಪಿಗೆ ಸೂಚಿಸಿದ ನಾದ ಬ್ರಹ್ಮ ಶ್ರೀ ಹಂಸಲೇಖ ಈ ರೂಪಕವನ್ನು ರಚಿಸಿ, ಕನ್ನಡಿಗರಿಗೆ ಅರ್ಪಿಸುದಾಗಿ ಪ್ರಕಟಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆ, ಈ ನಾಡಿಗೆ ಅವರ ಕೊಡುಗೆ ಅದ್ವಿತೀಯ. ಕರ್ನಾಟಕದ ಮನೆ-ಮನಗಳಲ್ಲೂ ಪ್ರಾತಸ್ಮರಣಿಯರಾಗಿರುವ ನಾಲ್ವಡಿಯವರ ಸ್ಮರಿಸಿ ಮಾತನಾಡಿದ ರಾಜಮಾತೆ ಗೌರವಾನ್ವಿತ ಡಾ ಪ್ರಮೋದಾದೇವಿ ಒಡೆಯರ್ ಈ ದೇಶದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ವಿಶ್ವಕ್ಕೆ ಮಾದರಿ ಎಂದು ಬಣ್ಣಿಸಿದರು.

“ನಾವೆಲ್ಲರೂ, ಈ ದೇಶ ಸೇವೆಗೆ ನಮ್ಮ ಬದುಕನ್ನು ಮುಡಿಪಾಗಿಡಬೇಕು,” ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.

ಇದೆ ಸಂದರ್ಭದಲ್ಲಿ ರಾಜಮಾತೆ ಗೌರವಾನ್ವಿತ ಡಾ ಪ್ರಮೋದಾದೇವಿ ಒಡೆಯರ್ ಹಾಗು ಹಂಸಲೇಖ ಅವರಿಗೆ ಬೆಂಗಳೂರು ಸಿಟಿ ಇನ್ಸಿಟ್ಯೂಟ್ ಗೌರವ ಸದಸ್ಯತ್ವ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಹಂಸಲೇಖ ನಾಲ್ವಡಿ ಅವರ ಸಾಧನೆ ನಮಗೆಲ್ಲರಿಗೂ ಆದರ್ಶಪ್ರಾಯ ಎಂದು ಬಣ್ಣಿಸಿದರು.

ಕನ್ನಡ ಭಾಷೆ-ಆಡಳಿತದ ಬಗ್ಗೆ ಮಾತನಾಡಿದ ಅವರು, ಕನ್ನಡವನ್ನು ಕೇವಲ ಭಾಷೆಯೆಂದು ಪರಿಗಣಿಸದೆ ಅದನ್ನು ನಮ್ಮ ಹಕ್ಕಿನ ಪತ್ರ ಎಂದು ತಿಳಿದುಕೊಳ್ಳಬೇಕು. ಈ ಹಕ್ಕು ನಮ್ಮೆಲ್ಲರಿಗೂ ದಕ್ಕುವಂತೆ ಆಗಬೇಕು ಎಂದು ತಿಳಿಸಿದರು. “ಈ ಬಗ್ಗೆ ನಾವು ಸದಾ ಎಚ್ಚರದಿಂದಿರಬೇಕು,” ಎಂದು ಅವರು ತಿಳಿಸಿದರು

ಬೆಂಗಳೂರಿನಲ್ಲಿ ಕನ್ನಡ -ಕನ್ನಡಿಗರ ಕುಸಿತದ ಬಗ್ಗೆ ಅವರು ಈ ಸಂದರ್ಭದಲ್ಲಿ ಕಳವಳ ವ್ಯಕ್ತಪಡಿಸಿದರು.

ಸಿಟಿ ಇನ್ಸಿಟ್ಯೂಟ್ ಅಧ್ಯಕ್ಷ ಶ್ರೀ ಕೆ ಸುಕುಮಾರ್, ಉಪಾಧ್ಯಕ್ಷ ಎಸ್ ಸಿ ಚಂದ್ರಶೇಖರ್, ಗೌರವ ಕಾರ್ಯದರ್ಶಿ ಲಕ್ಷ್ಮೀಶ ಚಂದ್ರ, ಗೌರವ ಖಜಾಂಚಿ ವಿರೂಪಾಕ್ಷ ಬಿ ಪಿ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಲೋಕ ಚುನಾವಣೆಗೆ ಬಿಜೆಪಿ ಭರದ ಸಿದ್ದತೆ: ವಿವಿಧ ರಾಜ್ಯಗಳಿಗೆ ಉಸ್ತುವಾರಿ ನೇಮಕ

ಸಭಾ ಕಾರ್ಯಕ್ರಮದ ಬಳಿಕ, ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳ ಭರಪೂರ ಮನೋರಂಜನೆ ಕಾರ್ಯಕ್ರಮ ನೋಡುಗರನ್ನು ಮುದಗೊಳಿಸಿತು. ಮುಂಬೈ, ಕೋಲ್ಕೊತಾ, ಚೆನ್ನೈನ ಖ್ಯಾತ ನೃತ್ಯ ತಂಡಗಳ ಪ್ರದರ್ಶನ, ಕನ್ನಡದ ಹೆಮ್ಮೆಯ ಬಾಲ ಕಲಾವಿದ ಅರ್ಜುನ್ ಇಟಗಿ ಹಾಡು, ನೋಡುಗರನ್ನು ಮನೋರಂಜನಾ ಲೋಕದಲ್ಲಿ ತೇಲಾಡಿಸಿತು.

Share This Article
Leave a comment