ಸ್ವದೇಶಿ ತಳಿ ಪರಂಗಿ ಹಣ್ಣು ಬೆಳೆಯನ್ನು ಉತ್ತೇಜಿಸುವ ದೃಷ್ಠಿಯಿಂದ ಶೀಘ್ರ ವೈಜ್ಞಾನಿಕ ಸಂರಕ್ಷಣಾ ಘಟಕ, ಸೂಕ್ತ ಮಾರುಕಟ್ಟೆ ಮತ್ತು ದೇಶ ಹಾಗೂ ವಿದೇಶಗಳಿಗೆ ರಫ್ತು ಮಾಡಲು ಅಗತ್ಯ ಕ್ರಮ ವಹಿಸುವ ಸಂಬಂಧ ನಬಾಡ್ ೯ ರಾಜ್ಯ ಪ್ರಾದೇಶಿಕ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ನೀರಜ್ ಕುಮಾರ್ ವರ್ಮ ರೈತರೊಂದಿಗೆ ಚರ್ಚಿಸಿದರು.
ತಾಲೂಕಿನ ಬೊಮ್ಮೂರು ಅಗ್ರಹಾರ ಹೊರವಲಯದ ಕಾವೇರಿ ಕನ್ಯಾಗುರುಕುಲದಲ್ಲಿನ ಕೃಷಿ ವಿಜ್ಞಾನಿ ಕೆ.ಕೆ.ಸುಬ್ರಮಣಿ ಮತ್ತು ಪರಂಗಿ ಬೆಳಗಾರರರೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪರಂಗಿ ಬೆಳೆಯ ಮಾದರಿ ಪರಿಶೀಲಿಸಿ ರೈತರೊಂದಿಗೆ ಚರ್ಚೆ ನಡೆಸಿದರು.
ಕೃಷಿ ವಿಜ್ಞಾನಿ ಕೆ.ಕೆ ಸುಬ್ರಮಣಿ ಮಾತನಾಡಿ, ದಕ್ಷಿಣ ಭಾರತದಲ್ಲಿ ಯಾವುದೇ ಕೃಷಿ ಮಾಡಲು ಇಲ್ಲಿನ ವಾತಾವರಣ, ಭೂಮಿ ಯೋಗ್ಯಕರದಿಂದ ಕೂಡಿದೆ. ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿ ಹೆಚ್ಚು ರೈತರು ಪರಂಗಿ ಬೆಳೆಯುತ್ತಿರುವ ಕಾರಣ ಸಧ್ಯ ಕರ್ನಾಟಕದ ರೈತರು ಈ ಕೃಷಿಯತ್ತ ಮುಖಮಾಡಿ ಚಾಮರಾಜನಗರ, ಮೈಸೂರು, ಮಂಡ್ಯ ಸೇರಿದಂತೆ ಇತರೆಡೆಯು ಬೆಳೆಯತ್ತಿದ್ದಾರೆ ಎಂದರು.
ಈ ಹಿಂದೆ ನಮ್ಮಲ್ಲಿದ್ದ ದೇಶಿ ತಳಿಯ ಪರಂಗಿ ಬೀಜ ಹಲವು ಕಾರಣಗಳಿಂದ ನಾಶವಾಗಿ ಪ್ರಸ್ತುತ ಥೈವಾನ್ ದೇಶದ ರೆಡ್ ಲೇಡಿ ಎಂಬ ತಳಿಯ ಪರಂಗಿಗೆ ವಿಶ್ವದಲ್ಲಿ ಬಹು ಬೇಡಿಕೆ ಹೊಂದಿದ್ದು, ನಮ್ಮವರು ಅದನ್ನೇ ಅವಲಂಬಿತರಾಗಿದ್ದರು.
ಆದರೆ ಇತ್ತೀಚೆಗೆ ನಮ್ಮ ದೇಶಿಯ ವಾತಾವರಣ ಹಾಗೂ ಭೂಮಿಯ ಫಲವತ್ತೆಗೆ ತಕ್ಕಂತೆ ಹಲವು ಆವಿಷ್ಕಾರಗಳ ಬಳಿಕ ರೆಡ್ಗ್ಲೋರಿ ( ರೆಡ್ ಪ್ರಿನ್ಸ್ ) ಎಂಬ ಗೋಲಾಕಾರ ಹಾಗೂ ಉದ್ದವಿರುವ ೨ ಬಗೆ ತಳಿಯ ಪರಂಗಿಯನ್ನು ಬೆಳೆದು ಮಾರುಕಟ್ಟೆಗೆ ಬಿಡಲಾಗಿದೆ ಎಂದರು.
ಇದೀಗ ದೇಶ ಹಾಗೂ ವಿದೇಶದ ಜನರು ಕೊಳ್ಳಲು ರುಚಿಕರ ಹಾಗೂ ಸ್ವಾಧಿಷ್ಟವಿರುವ ಈ ಹಣ್ಣಿಗೆ ಬೇಡಿಕೆ ಇಟ್ಟಿದ್ದಾರೆ. ಇಷ್ಟಿದ್ದರು ವೈಜ್ಞಾನಿಕವಾಗಿ ಸಂರಕ್ಷಿಸಿ ಸೂಕ್ತ ಸಮಯದಲ್ಲಿ ಸರಿಯಾದ ಮಾರುಕಟ್ಟೆಗೆ ತಲುಪಿಸಲು ಸೌಲಭ್ಯವಿಲ್ಲದೆ ತಿಳಿಯದ ಕಾರಣ ೩ ರಿಂದ ೪ ಲಕ್ಷ ರು. ವ್ಯಯಿಸಿ ಕೃಷಿ ಮಾಡಿದ ರೈತ ಕೇವಲ ೮ ರಿಂದ ೧೦ ರು. ಕಡಿಮೆ ಬೆಲೆಗೆ ಮಧ್ಯವರ್ತಿಗಳಿಗೆ ಮಾರಿ ಪರಂಗಿ ಬೆಳೆಯಿಂದ ನಷ್ಟ ಹೊಂದುತ್ತಿದ್ದಾನೆ. ಆದರೆ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳು ಗ್ರಾಹಕರಿಕೆ ೪೫ ರಿಂದ ೫೦ ರು. ಗಳಿಗೆ ಮಾರುತ್ತಿದ್ದಾರೆ ಎಂದು ರೈತರೊಂದಿಗೆ ನೇರವಾಗಿ ಚರ್ಚಿಸಿ ವಿವರಿಸಿದರು.
ಬಳಿಕ ನಬಾರ್ಡ್ ರಾಜ್ಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ನೀರಜ್ ಕುಮಾರ್ ವರ್ಮ ಮಾತನಾಡಿ, ಕೃಷಿಯಲ್ಲಿ ಪ್ರಸ್ತುತ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಆಯಾ ವ್ಯಾಪ್ತಿಯಲ್ಲಿ ಒಗ್ಗಿರುವಂತೆ ಒಂದೇ ಬೆಳೆ ಅಥವಾ ಅವಲಂಬಿಸಿರುವ ಕೃಷಿ ಮಾದರಿಯನ್ನು, ಬಿಟ್ಟು ಹೊಸ ಪ್ರಯೋಗಕಾರಿ ಕೃಷಿಗೆ ಸರ್ಕಾರದಿಂದ ಆದ್ಯತೆ ನೀಡಲಾಗುವುದು, ಈ ನಿಟ್ಟಿನಲ್ಲಿ ತಾವು ಸರ್ಕಾರಕ್ಕೆ ಅಗತ್ಯ ಮಾಹಿತಿ ಒದಗಿಸುವುದಾಗಿ ಭರವಸೆ ನೀಡಿದರು.
ನಬಾರ್ಡ್ ರಾಜ್ಯ ಪ್ರಾದೇಶಿಕ ಸಹಾಯಕ ವ್ಯವಸ್ಥಾಪಕಿ ಶಿವಾನಿ ಚರ್ಚೆಯಾದ ವಿಷಯಗಳನ್ನು ಗುರುತಿಸಿ ಸರ್ಕಾರಕ್ಕೆ ಅವಶ್ಯ ಪಟ್ಟಿ ಸಿದ್ದಗೊಳಿಸಲಾಗುವುದು ಎಂದರು.
ಈ ವೇಳೆ ಮಂಡ್ಯದ ವಿಕಸನ ಸಂಸ್ಥೆಯ ಮುಖ್ಯಸ್ಥ ಮಹೇಶ್ ಚಂದ್ರ ಗುರು, ಪರಂಗಿ ಬೆಳೆಗಾರರರಾದ ನಾಗಮಂಗಲದ ದಯಾನಂದ್, ಮಳವಳ್ಳಿಯ ಡಾ.ಅನೀಲ್ ಕುಮಾರ್, ಚಾಮರಾಜನಗರದ ಮಂಜುನಾಥ್, ನಂಜನಗೂಡಿನ ರೇವಣ್ಣ, ಮಂಡ್ಯದ ಮಂಚೇಗೌಡ, ನವೀನ್ ಕುಮಾರ್ ಸೇರಿದಂತೆ ಇತರರು ಈ ವೇಳೆ ಭಾಗಿಯಾದ್ದರು.