ಹಣದಾಸೆಗೆ ವೃದ್ಧ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿಯನ್ನು ಕೃತ್ಯ ನಡೆದ 24 ತಾಸಿನಲ್ಲೇ ಬಂಧಿಸಿದ ಬಿಡದಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಹೆಚ್ಚಿನ ಕಾರ್ಯಾಚರಣೆ ನಡೆಸಿದ್ದಾರೆ.
ಈಗಲ್ ರೆಸಾರ್ಟ್ನ ವಿಲ್ಲಾದಲ್ಲಿ ವೃದ್ಧ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಿಹಾರ ಮೂಲದ ಆರೋಪಿ ಜೋಗಿಂದರ್ ಸಿಂಗ್ ಎಂಬಾತನನ್ನು ಬಿಡದಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಳೆದ 6 ತಿಂಗಳಿಂದ ವಿಲ್ಲಾದಲ್ಲಿ ಕೆಲಸ ಮಾಡಿಕೊಂಡಿದ್ದ ಜೋಗಿಂದರ್ ಸಿಂಗ್ ಸುತ್ತಿಗೆಯಿಂದ ಹೊಡೆದು ವಾಯುಸೇನೆಯ ನಿವೃತ್ತ ಪೈಲಟ್ ರಘುರಾಜನ್, ಪತ್ನಿ ಆಶಾರನ್ನು ಬರ್ಬರವಾಗಿ ಕೊಲೆಗೈದಿದ್ದ.
ಬಳಿಕ ರಘುರಾಜನ್ ಅಕೌಂಟ್ನಿಂದ ಹಣ ವರ್ಗಾಯಿಸಿಕೊಂಡು ಪರಾರಿಯಾಗಿದ್ದ. ಸದ್ಯ ಪೊಲೀಸರು ಆರೋಪಿ ಜೋಗಿಂದರ್ನನ್ನು ಅರೆಸ್ಟ್ ಮಾಡಿದ್ದಾರೆ.
ತಮಿಳುನಾಡು ಮೂಲದ ರಘುರಾಜನ್, ಏರ್ಪೋರ್ಸ್ನಲ್ಲಿ ಪೈಲಟ್ ಆಗಿ ಕೆಲಸ ಮಾಡಿ ನಿವೃತ್ತಿಯಾದ ಬಳಿಕ ಬಿಡದಿಯ ಈಗಲ್ಟನ್ ರೆಸಾರ್ಟ್ನಲ್ಲಿ ವಿಲ್ಲಾ ಖರೀದಿಸಿ ಕಳೆದ ಐದು ವರ್ಷದಿಂದ ವಾಸವಿದ್ದರು. ಆದರೆ ಸೋಮವಾರ ರಾತ್ರಿ ಸುತ್ತಿಗೆಯಿಂದ ದಂಪತಿಯನ್ನು ಹೊಡೆದು ಆರೋಪಿ ಜೋಗಿಂದರ್ ಕೊಲೆ ಮಾಡಿದ್ದಾನೆ.
ವೃದ್ಧ ದಂಪತಿಗೆ ಇಬ್ಬರು ಮಕ್ಕಳಿದ್ದು, ದೆಹಲಿಯಲ್ಲಿ ಕೆಲಸ ಮಾಡ್ತಿದ್ದಾರೆ. ಇನ್ನು, ಸೋಮವಾರ ತಡರಾತ್ರಿ ರಘುರಾಜಮ್ಗೆ ಪುತ್ರ ಕರೆ ಮಾಡಿದ್ದು, ಫೋನ್ ರಿಸೀವ್ ಮಾಡಿರಲಿಲ್ಲ. ಬಳಿಕ, ಜೋಗಿಂದರ್ಗೆ ಕಾಲ್ ಮಾಡಿದ್ದು ಆತ ಬೆಂಗಳೂರಿಗೆ ಹೋಗಿದ್ದಾರೆ ಅಂದಿದ್ದನಂತೆ. ಇದರಿಂದ ಸಂಶಯಗೊಂಡ ಅವರು ನಿನ್ನೆ ಮಧ್ಯಾಹ್ನ ವಿಲ್ಲಾಗೆ ಹೋಗಿ ಚೆಕ್ ಮಾಡುವಂತೆ ರೆಸಾರ್ಟ್ ಸೆಕ್ಯೂರಿಟಿಗೆ ಹೇಳಿದ್ದಾರೆ.
ಸೆಕ್ಯೂರಿಟಿ ವಿಲ್ಲಾ ಒಳಗೆ ಹೋಗಿ ನೋಡಿದಾಗ, ಮೊದಲ ಮಹಡಿಯಲ್ಲಿ ಪತಿ, ಕೆಳ ಮಹಡಿಯಲ್ಲಿ ಪತ್ನಿ ಕೊಲೆಯಾಗಿ ಬಿದಿದ್ದರು. ಅದೇ ಹೊತ್ತಿಗೆ ಜೋಗಿಂದರ್, ಆತನ ಅಣ್ಣನ ಜತೆ ವಿಲ್ಲಾದ ಹಿಂಬಾಗಿಲಿನಿಂದ ಎಸ್ಕೆಪ್ ಆಗಿದ್ದ. ಸದ್ಯ ಈಗ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದು ಮತ್ತೊಬ್ಬ ಆರೋಪಿಗಾಗಿ ಹುಡುಕಾಡುತ್ತಿದ್ದಾರೆ.