ಪಾಲಿಟೆಕ್ನಿಕ್ ಮೂಲಕ ಎಂಜಿನಿಯರಿಂಗ್ ಗೆ ಹೆಚ್ಚಿನ ಅವಕಾಶ: ಸಚಿವ ಡಾ. ಅಶ್ವತ್ಥನಾರಾಯಣ ಅಭಿಮತ

Team Newsnap
1 Min Read

ಎಂಜಿನಿಯರಿಂಗ್ ಓದುವ ಆಕಾಂಕ್ಷೆ ಇರುವವರು ಎಸ್‌ಎಸ್‌ಎಲ್‌ಸಿ ನಂತರ ಪಾಲಿಟೆಕ್ನಿಕ್‌ಗೆ ಸೇರಿ ಆನಂತರ ಎಂಜಿನಿಯರಿಂಗ್ ಸೇರುವುದಕ್ಕೆ ಹೆಚ್ಚಿನ ಅವಕಾಶಗಳಿವೆ ಎಂದು ಕೌಶಲಾಭಿವೃದ್ಧಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟವರು.


ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಮೋದಿ ಜನ್ಮದಿನೋತ್ಸವ ಹಾಗೂ ಆಡಳಿತಾವಧಿಯ 20 ವರ್ಷಗಳ ಪೂರೈಕೆ ನಿಮಿತ್ತ ಹಮ್ಮಿಕೊಂಡಿರುವ 20 ದಿನಗಳ ಸೇವಾ ಕಾರ್ಯಕ್ರಮಗಳ ಭಾಗವಾಗಿ ಸೋಮವಾರ “ಉದ್ಯೋಗ ಮೇಳ’ಕ್ಕೆ ಚಾಲನೆ ನೀಡಿ ಸಚಿವರು ಮಾತನಾಡಿದರು.


ಎಂಜಿನಿಯರಿAಗ್ ಓದುವ ಆಸಕ್ತಿ ಇರುವವರು ಪಿಯುಸಿಗೇ ಮುಗಿಬೀಳುತ್ತಾರೆ. ಎಷ್ಟೋ ವಿದ್ಯಾರ್ಥಿಗಳಿಗೆ ಪಾಲಿಟೆಕ್ನಿಕ್ ಮೂಲಕವೂ ಎಂಜಿನಿಯರಿಂಗ್ ಸೇರಬಹುದು ಎನ್ನುವುದು ಗೊತ್ತಿರುವುದಿಲ್ಲ. ವಾಸ್ತವವಾಗಿ ಪಾಲಿಟೆಕ್ನಿಕ್‌ನಲ್ಲಿ ಪಿಯುಸಿಗಿಂತ ಹೆಚ್ಚು ಪ್ರಾಯೋಗಿಕ ಜ್ಞಾನಕ್ಕೆ ಒತ್ತು ಕೊಟ್ಟು ಕಲಿಸಲಾಗುತ್ತದೆ ಎಂದು ವಿವರಿಸಿದರು.


ರಾಜ್ಯದ ಪಾಲಿಟೆಕ್ನಿಕ್‌ಗಳಲ್ಲಿ ಪ್ರತಿ ವರ್ಷ 70 ಸಾವಿರ ವಿದ್ಯಾರ್ಥಿಗಳು ಕಲಿಯಲು ಅವಕಾಶವಿದೆ. ಪ್ರತಿ ವಿದ್ಯಾರ್ಥಿಯ ಕಲಿಕೆಗೆ ಸರ್ಕಾರ ಸರಾಸರಿ 3 ರಿಂದ 4 ಲಕ್ಷರೂ.ಖರ್ಚು ಮಾಡುತ್ತಿದೆ. ಆದರೂ ಪ್ರತಿ ವರ್ಷ ಪಾಲಿಟೆಕ್ನಿಕ್‌ಗಳಲ್ಲಿ 40 ಸಾವಿರ ಸೀಟುಗಳು ಖಾಲಿ ಉಳಿಯುತ್ತಿವೆ ಎಂದು ಸಚಿವರು ಹೇಳಿದರು.


ಪಾಲಿಟೆಕ್ನಿಕ್,ಐಟಿಐ ಜಿಟಿಟಿಸಿಗಳಲ್ಲಿ ಸಮಾಜಕ್ಕೆ ಏನು ಬೇಕೋ ಅಂತಹ ಕೋರ್ಸ್ ಗಳನ್ನು ಸೇರಿಸಲಾಗಿದೆ. ಮಕ್ಕಳನ್ನು ಕೌಶಲಗಳ ಬಲದಿಂದ ಸಶಕ್ತಗೊಳಿಸಬೇಕು ಎಂದು ಡಾ.ಅಶ್ವತ್ಥನಾರಾಯಣ ಸಲಹೆ ನೀಡಿದರು. ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಮಕ್ಕಳಿಗೆ ಶಾಲಾ ಹಂತದಲ್ಲೇ ಕೌಶಲಗಳನ್ನು ಕಲಿಸಲು ಒತ್ತು ಕೊಡಲಾಗುತ್ತದೆ ಎಂದರು.
ಶಾಸಕ ಎಸ್.ಎ. ರಾಮದಾಸ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Share This Article
Leave a comment