ಮೋದಿ, ಬಿಎಸ್‌ವೈ ಶಿಕ್ಷಣರಂಗದ ಹೊಸ ಚಿಂತನೆ, ಯೋಜನೆಯ ರೂಪಕರು-ಸಚಿವ ಸೋಮಣ್ಣ

Team Newsnap
2 Min Read

ಪ್ರಧಾನಿ‌ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರು ಶಿಕ್ಷಣ ರಂಗದ ಹೊಸ ಚಿಂತನೆ, ಯೋಜನೆಯನ್ನು ರೂಪಿಸಿದ್ದಾರೆ‌ ಎಂದು ಬೆಂಗಳೂರು ಬಸವೇಶ್ವರ ನಗರದಲ್ಲಿ ಶಿಕ್ಷಕರ ಕ್ಷೇತ್ರದ ಚುಣಾವಣೆಯ ಅಂಗವಾಗಿ‌ ಹಮ್ಮಿಕೊಂಡಿದ್ದ ಸಭೆಯಲ್ಲಿ ವಸತಿ‌ ಸಚಿವ ವಿ. ಸೋಮಣ್ಣ ಹೇಳಿದರು.

ಬಸವೇಶ್ವರನಗರದ ಗಂಗಮ್ಮ ತಿಮ್ಮಯ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಸೋಮಣ್ಣ ಅವರು ‘ನಮ್ಮ ಸರ್ಕಾರವು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತದೆ. ವಿದ್ಯಾರ್ಥಿ ಗಳಿಗೆ‌ ಪ್ರಾಥಮಿಕ‌ ಹಾಗೂ ಮಾಧ್ಯಮಿಕ ಹಂತದಲ್ಲಿ ಉತ್ತಮ ಶಿಕ್ಷಣ ದೊರೆತರೆ ಮುಂದೆ ಅವರು ದೇಶಕ್ಕೆ ಉತ್ತಮ ಪ್ರಜೆಯಾಗುತ್ತಾರೆ. ಉತ್ತಮ‌ ಪ್ರಜೆಗಳನ್ನು ರೂಪಿಸುವ ಶಿಕ್ಷಕ,
ತಂದೆ, ತಾಯಿಗಿಂತ ಹೆಚ್ಚಾಗಿ ಗುರುವಿನ‌ ಸ್ಥಾನದಲ್ಲಿ ನಿಲ್ಲುತ್ತಾನೆ’ ಎಂದರು.

ಆನೆ ಬಲ ಬಂದಿದೆ

ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುಣಾವಣೆಯ ಬಿ.ಜೆ.ಪಿ. ಅಭ್ಯರ್ಥಿ ಪುಟ್ಟಣ್ಣನವರು ಮಾತನಾಡಿ ‘ನನಗೆ ಬಿಜೆಪಿ‌ ಬಲ ಸಿಕ್ಕಿರುವುದು ಆನೆ ಬಲ ಸಿಕ್ಕಂತಾಗಿದೆ. ಶಿಕ್ಷಕರ 100 ರಷ್ಟು ಕೆಲಸವನ್ನು ಈಗಾಗಲೇ‌ ಮಾಡಿದ್ದೇನೆ. ಬಡ್ತಿ, ವಿಮಾ ಸೌಲಭ್ಯ, ವೇತನ‌ ಹೆಚ್ಚಳದ ಬಗ್ಗೆ ಕ್ರಮ ಕೈಗೊಳ್ಳುವಂತೆ ಸರ್ಕಾರದ ಎದುರು‌ ಪ್ರಸ್ತಾಪಿಸಲಾಗುವುದು. ಶಿಕ್ಷಕರ ಸಂಕಷ್ಟದ ಬಗೆಗೆ ಪರಿಹಾರ ನೀಡಲು ಮುಖ್ಯಮಂತ್ರಿಗಳ ಹತ್ತಿರ ಪ್ರಸ್ತಾವನೆ ಸಲ್ಲಿಸಲಾಗುವುದು. ಪಾತದರ್ಶಕತೆಯಿಂದ ಶಿಕ್ಷಕರ ಸಮಸ್ಯೆಗಳ ಹಾಗೂ ನೇಮಕಾತಿಯ ಪರವಾಗಿ ಚಳುವಳಿ, ಹೋರಾಟಗಳನ್ನು ಮಾಡಿಕೊಂಡು ಬಂದಿರುವೆ. ಮೋದಿಯವರು, ಯಡಿಯೂರಪ್ಪನವರು, ಸಚಿವ ಸೋಮಣ್ಣನವರು ಹಾಗೂ ಶಿಕ್ಷಕರ ಆಶೀರ್ವಾವಾದದಿಂದ ನಾನು‌ ಗೆದ್ದೇ ಗೆಲ್ಲುತ್ತೇನೆ’ ಎಂದು ಹೇಳಿದರು.

ಬಿಜೆಪಿ ಸದಾ ಶಿಕ್ಷಕರ ಪರ

ಸಭೆಯಲ್ಲಿ ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್. ಆರ್. ರಮೇಶ್ ಮಾತನಾಡಿ‌ ‘ಬಿಜೆಪಿ ಯಾವಾಗಲೂ ಶಿಕ್ಷಕರ ಪರವಾಗಿರುತ್ತದೆ. ಪುಟ್ಟಣ್ಣನವರು ಯಾವಾಗಲೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುತ್ತಾರೆ. ಮೋದಿ, ಬಿಎಸ್‌ವೈ ಅವರ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಪರ ಚಿಂತನೆಗಳು ಪ್ರಸ್ತುತ ಸಮಾಜಕ್ಕೆ ಸಹಕಾರಿಯಾಗಿವೆ. ಬಿಬಿಎಂಪಿಯ‌ ಹೊರಗುತ್ತಿಗೆಯಲ್ಲಿ ಸೇವೆ ಸಲ್ಲಿಸುತ್ತಿರುವ 637 ಶಿಕ್ಷಕರಿಗೆ ಸಮಾನ ವೇತನದಡಿಯಲ್ಲಿ 35,000 ರೂ ಗಳನ್ನು ನೀಡಬೇಕೆಂದು ಕೌನ್ಸಿಲ್ ಸಭೆ ತೀರ್ಮಾನಿಸಿದೆ’ ಎಂದು ಮಾಹಿತಿ ಹಂಚಿಕೊಂಡರು.

ಸಭೆಯಲ್ಲಿ
ವಿಧಾನಪರಿಷತ್ ಸದಸ್ಯರಾದ ಅ.ದೇವೇಗೌಡರು, ಬಿಬಿಎಂಪಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿ, ಬಿಬಿಎಂಪಿ ಸದಸ್ಯರುಗಳಾದ ಶ್ರೀಮತಿ ಶಾಂತಕುಮಾರಿ ಡಾ||ಎಸ್.ರಾಜು ,ಮೋಹನ್ ಕುಮಾರ್ ,ಬಾಬಿ ವೆಂಕಟೇಶ್ ,ಶಿಲ್ಪ ಶ್ರೀಧರ್, ದಾಸೇಗೌಡ ಮತ್ತು ಗೋವಿಂದರಾಜನಗರ ಮಂಡಲ ಅಧ್ಯಕ್ಷರಾದ ವಿಶ್ವನಾಥಗೌಡ ಮುಂತಾದವರು ಉಪಸ್ಥಿತರಿದ್ದರು.

Share This Article
Leave a comment