ಮುಂದಿನ ಎಂಟು ತಿಂಗಳವರೆಗೆ ಯಾವುದೇ ಅನುದಾನವನ್ನು ಕೇಳಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಸಕರಿಗೆ ಮನವಿ ಮಾಡಿದ್ದಾರೆ .
ಜು. 7ರಂದು ಬಜೆಟ್ ಮಂಡನೆಗೂ ಮುನ್ನ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ಮಾತನಾಡಿ, ಚುನಾವಣೆಗೂ ಮುನ್ನ ನಾವು ನೀಡಿದ್ದ ಐದು ಗ್ಯಾರಂಟಿಗಳನ್ನು ನಾವು ಜಾರಿಗೊಳಿಸಲೇಬೇಕಿದ್ದು, ಅದಕ್ಕಾಗಿ ಬದ್ಧತೆಯನ್ನು ತೋರಿಸಬೇಕಿದೆ.
ಗ್ಯಾರಂಟಿಗಳ ಯೋಜನೆಗೆ ಸಾವಿರಾರು ಕೋಟಿ ರೂ.ಗಳು ಬೇಕಿರುವುದರಿಂದ ಸಂಪನ್ಮೂಲ ಕ್ರೋಢೀಕರಣವು ನಮ್ಮ ಮುಂದಿನ ಬಹುದೊಡ್ಡ ಸವಾಲಾಗಿದೆ ಎಂದರು.
ಕೆಲವು ಉಳಿತಾಯಗಳನ್ನೂ ಮಾಡಬೇಕಿದ್ದು ಆ ನಿಟ್ಟಿನಲ್ಲಿ, ಶಾಸಕರಿಗೆ ನೀಡಬೇಕಾದ ಅನುದಾನವನ್ನು ಮುಂದಿನ ಎಂಟು ತಿಂಗಳವರೆಗೆ ಶಾಸಕರು ಕೇಳದೇ ಇದ್ದರೆ ಗ್ಯಾರಂಟಿಗಳ ಅನುಷ್ಠಾನಕ್ಕೆ ಹೆಚ್ಚಿನ ಬೆಂಬಲ ಕೊಟ್ಟಂತಾಗುತ್ತದೆ.
ಸವಾಲನ್ನು ಸುಲಭವಾಗಿ ಮೆಟ್ಟಲು ಸಾಕಷ್ಟು ದಾರಿಗಳೂ ನಮ್ಮ ಮುಂದಿವೆ ಎಂದು ಅವರು ವಿವರಿಸಿದ್ದು, ಗ್ಯಾರಂಟಿಗಳ ಜಾರಿಗೆ ಬೇಕಾದ ಹಣವನ್ನು ಹೊಂದಿಸಲು ನಾವು ಹಲವಾರು ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದೆ ಎಂದು ಅವರು ಹೇಳಿದರು.