ಮಾಧ್ಯಮಗಳು ಸದಾ ಪ್ರತಿಪಕ್ಷದಂತೆ ಕಾರ್ಯನಿರ್ವಹಿಸಬೇಕು: ಸಿದ್ಧರಾಜು

Team Newsnap
2 Min Read
  • ಕೆಯುಡಬ್ಲ್ಯೂಜೆ ವತಿಯಿಂದ ‘ಮನೆಯಂಗಳದಲ್ಲಿ ಮನದುಂಬಿ ನಮನ’ ಕಾರ್ಯಕ್ರಮ

ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳು ಪ್ರಬಲ ವಿರೋಧ ಪಕ್ಷವಾಗಿರಬೇಕು. ಸದಾ ಕಾವಲು ನಾಯಿಯಂತೆ ಕಾರ್ಯನಿರ್ವಹಿಸಬೇಕು. ಆಗ ಮಾತ್ರ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಸಿದ್ಧರಾಜು‌ ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಹಮ್ಮಿಕೊಂಡಿದ್ದ ‘ಹಿರಿಯ ಪತ್ರಕರ್ತರ ಮನೆಯಂಗಳದಲ್ಲಿ ಮನದುಂಬಿ ನಮನ’ ಕಾರ್ಯಕ್ರಮದಲ್ಲಿ ಕೆಯುಡಬ್ಲ್ಯೂಜೆ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ತೊಂಬತ್ತು ವಸಂತ ತುಂಬಿರುವ ಕೆಯುಡಬ್ಲ್ಯೂಜೆ ವೃತ್ತಿ ಪರವಾದ ಕೆಲಸ ಮಾಡುತ್ತಿರುವುದು ಅಭಿನಂದನೀಯ. ಇಂತಹ ವೃತ್ತಿಪರ ಸಂಘಟನೆಯಿಂದ ತಾನು ಗೌರವ-ಸನ್ಮಾನ ಪಡೆಯುತ್ತಿರುವುದು ನಿಜಕ್ಕೂ ಅಭಿಮಾನ ಮತ್ತು ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಸುದ್ದಿ ಸಂಸ್ಥೆಗಳು ಹಿಂದಿನಿಂದಲೂ ಉಳಿಸಿಕೊಂಡು ಬಂದಿರುವ ವಿಶ್ವಾಸಾರ್ಹತೆಯನ್ನು ಇಂದು ಎಲ್ಲಾ ಮಾಧ್ಯಮಗಳು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಹೊಂದಿದೆ. ಸಾಮಾಜಿಕ ಹೊಣೆಗಾರಿಕೆಯಿಂದ ಮಾಧ್ಯಮ ವಿಮುಖವಾಗಬಾರದು ಎಂದೂ ಹೇಳಿದರು.

ಸಿಎಂ ಕೂಡ ಕಾಯ್ದಿದ್ದರು:

ಆ ಕಾಲದಲ್ಲಿ ವಿಧಾನಸೌಧಕ್ಕೆ ನಾವೇ ಏಳೆಂಟು ಪತ್ರಕರ್ತರು ಸುದ್ದಿಗಾಗಿ ಹೋಗುತ್ತಿದ್ದೆವು. ಮಂತ್ರಿಗಳಿಗಿಂತ ಹೆಚ್ಚಾಗಿ ಮುಖ್ಯಮಂತ್ರಿಗಳೇ ಪ್ರೆಸ್ ಮೀಟ್ ಮಾಡುತ್ತಿದ್ದರು. ಒಮ್ಮೆ ಸಿಎಂ ವೀರೇಂದ್ರ ಪಾಟೀಲ್ ಪ್ರೆಸ್ ಮೀಟ್. ಎಲ್ರಿ ಆ ಪಿಟಿಐ ವರದಿಗಾರ? ಎಂದು ಕೇಳಿ, ನಾ ಬರುವ ತನಕ ಕಾಯ್ದು ಪ್ರೆಸ್ ಮೀಟ್ ಮಾಡಿದ ಘಟನೆಯನ್ನು ಮರೆಯುವಂತಿಲ್ಲ. ಆಗ ಪತ್ರಕರ್ತರಿಗೆ ಇದ್ದ ಕಿಮ್ಮತ್ತೆ ಅಂತಾದ್ದು. ಅದನ್ನು ಪ್ರತಿಯೊಬ್ಬ ಪತ್ರಕರ್ತರು ಉಳಿಸಿಕೊಳ್ಳಬೇಕು ಎಂದು ಹಳೇ ಘಟನೆಗಳನ್ನು ಮೆಲುಕು ಹಾಕಿದರು.

ಅನೋನ್ಯ ಬಾಂಧವ್ಯ:

ಕೆ.ಜಿ.ರಸ್ತೆ ಕಲ್ಲು ಬಿಲ್ಡಿಂಗ್ ನಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಇದ್ದ ಸಂದರ್ಭದಿಂದ ಆ ಸಂಘದ ಜೊತೆಗೆ ಒಡನಾಟವಿದೆ. ಹಿರಿಯ ಪತ್ರಕರ್ತ ಜಯಶೀಲರಾಯರು ಅಧ್ಯಕ್ಷರಾಗಿದ್ದ ಅವಧಿಯಿಂದಲೂ ಪ್ರೀತಿ-ಗೌರವಗಳನ್ನು ಇರಿಸಿಕೊಂಡಿದ್ದೇನೆ ಎಂದರು

ಹೆಚ್ಚು ಕ್ರಿಯಾಶೀಲತೆ:

ನಾಲ್ಕೈದು ವರ್ಷಗಳಲ್ಲಿ ಶಿವಾನಂದ ತಗಡೂರು ಅವರು ಅಧ್ಯಕ್ಷರಾದ ಮೇಲೆ ಕೆಯುಡಬ್ಲ್ಯೂಜೆ ಇನ್ನೂ ಹೆಚ್ಚಿನ ಕ್ರಿಯಾಶೀಲತೆಯನ್ನು ಪಡೆದುಕೊಂಡಿದೆ.
ಕೋವಿಡ್ ಸಂದರ್ಭದಲ್ಲಿ ಸಮಸ್ಯೆಯಲ್ಲಿದ್ದ ಪತ್ರಕರ್ತರ ಕುಟುಂಬದ ಪರವಾಗಿ ನಿಂತು ಪರಿಹಾರ ಕೊಡಿಸಿದ್ದು ನಿಜಕ್ಕೂ ಶ್ಲಾಘನೀಯ ಕೆಲಸ. ಕೆಯುಡಬ್ಲ್ಯೂಜೆ ಬಗ್ಗೆ
ಕಾಳಜಿ ವಹಿಸಿ ತಗಡೂರು ಸವಾಲು ಮೆಟ್ಟಿ ನಿಂತು ಕಾರ್ಯ ನಿರ್ವಹಿಸಿದ್ದು ಅಭಿನಂದನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಸಂಘವು ಕಳೆದ ವರ್ಷ ಸ್ವಾತಂತ್ರ್ಯೋತ್ಸವದಂದು ಆರಂಭಿಸಿದ ‘ಹಿರಿಯ ಪತ್ರಕರ್ತರ ಮನೆಯಂಗಳದಲ್ಲಿ ಮನದುಂಬಿ ನಮನ’ ಕಾರ್ಯಕ್ರಮದ‌ ಎರಡನೇ ಭಾಗ ಮುಂದುವರಿಸಲಾಗುತ್ತಿದೆ. ಹಿರಿಯ ಪತ್ರಕರ್ತರನ್ನು‌ ಅವರ ಮನೆಯ ಅಂಗಳದಲ್ಲಿ ಗೌರವಿಸುವುದು ಸಂಘದ ಪಾಲಿಗೆ ನಿಜಕ್ಕೂ ಸಂತಸ ಮತ್ತು ಹೆಮ್ಮೆಯ ವಿಷಯ ಎಂದರು.

ಹಿರಿಯ ಪತ್ರಕರ್ತರ ಅನುಭವದ ಸಾರವನ್ನು ಇಂದಿನ ಯುವಪತ್ರಕರ್ತರು ಮೈಗೂಡಿಸುವುದೂ ಅಗತ್ಯ. ಹಿರಿಯ ಪತ್ರಕರ್ತರ ಸನ್ಮಾನ ಸರಣಿಯನ್ನು ಶೀಘ್ರವಾಗಿ ಪುಸ್ತಕ ರೂಪದಲ್ಲಿ ಹೊರ ತರಲಾಗುವುದು ಎಂದೂ ಅವರು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಸ್ವಾಗತಿಸಿದರು, ಕೊನೆಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಸೋಮಶೇಖರ ಗಾಂಧಿ ವಂದಿಸಿದರು.ಸ್ವಾತಂತ್ರ್ಯ ದಿನಾಚರಣೆ – ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ

ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಆರ್.ದೇವರಾಜ್, ಬೆಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಉಪಾಧ್ಯಕ್ಷರಾದ ಜಿಕ್ರಿಯಾ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a comment