ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ದೊಡ್ಡದಾದ ಉದ್ಯಾನ ನಿರ್ಮಾಣಕ್ಕೆ ಚಿಂತನೆ ನಡೆದಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಲಾಲ್ಬಾಗ್ ಮತ್ತು ಕಬ್ಬನ್ ಪಾರ್ಕ್ ಬಿಟ್ಟರೆ ದೊಡ್ಡದಾದ ಉದ್ಯಾನವಿಲ್ಲ. ಹಾಗಾಗಿ ಮೂರನೇ ದೊಡ್ಡ ಉದ್ಯಾನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಯೋಚನೆ ಮಾಡುತ್ತಿದೆ ಎಂದು ಅವರು ಕೋಲಾರದಲ್ಲಿ ನಡೆದ ೭೫ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರಿಗೆ ತಿಳಿಸಿದರು.
ಮರ್ನಾಲ್ಕು ಶತಮಾನಗಳಿಂದ ರಾಜಧಾನಿಯ ಎರಡು ಆಕರ್ಷಕ ಉದ್ಯಾನ ಬಿಟ್ಟರೆ ಮತ್ತೊಂದು ನಿರ್ಮಾಣವಾಗಿಲ್ಲ. ವಿಶ್ವದಾದ್ಯಂತ ಬೆಂಗಳೂರು ಸಿಲಿಕಾನ್ಸಿಟಿ ಎಂದು ಖ್ಯಾತಿಗಳಿಸಿದೆ. ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿ ದೊಡ್ಡ ಉದ್ಯಾನ ಬಂದರೆ ಚೆನ್ನಾಗಿರುತ್ತೆ ಎಂಬುದು ತಮ್ಮ ಆಶಯ ಎಂದರು.