ಗ್ರಾಮೀಣ ಪತ್ರಕರ್ತರ ಮನವಿಗೆ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಆದ್ಯತೆ

Team Newsnap
2 Min Read
  • ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ

ಬೆಂಗಳೂರು: ಹಳ್ಳಿಯಿಂದ ಪತ್ರಕರ್ತರಾಗಿ ಹೊರ ಹೊಮ್ಮಿ, ಕೋಲಾರದಂತಹ ಗಡಿನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಸುತ್ತಾಡಿ ಸುದ್ದಿ ಸಂಗ್ರಹ ಮಾಡುವಲ್ಲಿ ಅತೀವ ಬವಣೆ ಪಟ್ಟಿರುವ ಹಿರಿಯ ಪತ್ರಕರ್ತ ಕೆ.ವಿ.ಪ್ರಭಾಕರ್ ಅವರ ಪ್ರಯತ್ನದ ಫಲವಾಗಿ ಇದೀಗ ರಾಜ್ಯದ ಎಲ್ಲ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯ ದೊರೆಯುವಂತಾಗಿದೆ.

ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸಿದ 15ನೇ ಬಜೆಟ್ ನಲ್ಲಿ ಗ್ರಾಮೀಣ ವೃತ್ತಿನಿರತ ಪತ್ರಕರ್ತರಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸಲು ಉಚಿತ ಬಸ್ ಪಾಸ್ ಸೌಲಭ್ಯ ಒದಗಿಸಿದ್ದಾರೆ. ಅದರಂತೆ ಸಾಮಾಜಿಕ ನ್ಯಾಯದ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಪತ್ರಕರ್ತರಿಗೆ “ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ” ಸ್ಥಾಪಿಸಿ ಪ್ರತಿವರ್ಷ ನೀಡಲು ಬಜೆಟ್ ನಲ್ಲಿ ಘೋಷಿಸಿದ್ದಾರೆ. ಪತ್ರಕರ್ತರ ಬದುಕು, ಬವಣೆಗಳನ್ನು ಸ್ವತಃ ಪತ್ರಕರ್ತರಾಗಿ ಅನುಭವಿಸಿರುವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರ ಪ್ರಯತ್ನದ ಫಲವಾಗಿಯೇ ಪ್ರಸಕ್ತ ವರ್ಷದಿಂದ ಪತ್ರಕರ್ತರಿಗೆ ಬಸ್‍ಪಾಸ್ ಸೌಲಭ್ಯ ದೊರೆಯಲಿದೆ. ಈ ಹಿಂದೆ ಹಲವಾರು ಪತ್ರಕರ್ತರು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿದ್ದರೂ ಕೂಡ ಅನೇಕ ವರ್ಷಗಳಿಂದ ಬೇಡಿಕೆಯಲ್ಲಿದ್ದ ಬಸ್ ಪಾಸ್ ಸೌಲಭ್ಯವನ್ನು ಈಡೇರಿಸಿರಲಿಲ್ಲ. ಸ್ವತಃ ಗ್ರಾಮೀಣ ಪ್ರದೇಶದಿಂದ ಬಂದ ಕೆ.ವಿ.ಪ್ರಭಾಕರ್ ಪತ್ರಕರ್ತರಿಗೆ ಆಗುತ್ತಿರುವ ಸಮಸ್ಯೆಗಳನ್ನು ಆಲಿಸಿ ಈ ಬಸ್ ಪಾಸ್ ಸೌಲಭ್ಯ ಒದಗಿಸುವಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಸಮಾಲೋಚನೆ ನಡೆಸಿ ಕೊನೆಗೂ ಯಶಸ್ವಿಯಾಗಿದ್ದಾರೆ.

ಗ್ರಾಮೀಣ ಪತ್ರಕರ್ತರ ಬಹುದಿನಗಳ ಬೇಡಿಕೆಯನ್ನು ಆದ್ಯತೆಯಾಗಿ ಪರಿಗಣಿಸಿದ್ದ ಕೆ.ವಿ.ಪ್ರಬಾಕರ್ ಅವರು ಮುಖ್ಯಮಂತ್ರಿಗಳಿಗೆ ಪತ್ರಕರ್ತರ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಟ್ಟಿದ್ದರು. ಈ ಸಂಬಂಧ ವಿವಿಧ ಸಂದರ್ಭಗಳಲ್ಲಿ ಗ್ರಾಮೀಣ ಪತ್ರಕರ್ತರೂ ಸಹ ಮನವಿಗಳನ್ನು ನೀಡಿದ್ದರು. ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಬಸ್ ಪಾಸ್ ಬೇಡಿಕೆ ಈಡೇರಿಸಲು ಸ್ಪಂದಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಎಲ್ಲಾ ಹಂತದಲ್ಲಿಯೂ ಸಹಕಾರ ನೀಡಿದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೂ ಪತ್ರಕರ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ರಾಜ್ಯ ಬಜೆಟ್ ನಲ್ಲಿ ಕೃಷಿಗೆ ವಿಶೇಷ ಆಧ್ಯತೆ – ಕೃಷಿ ಸಚಿವರ ಹರ್ಷ

ಬಜೆಟ್ ನಲ್ಲಿ ಘೋಷಣೆ ಮಾಡಿರುವ ಬಸ್ ಪಾಸ್ ಯೋಜನೆಯನ್ನು ಕ್ರಮಬದ್ಧವಾಗಿ ಕೂಡಲೇ ಜಾರಿಗೆ ತರಲು ವಾರ್ತಾ ಇಲಾಖೆ ಮುಂದಾಗಬೇಕು ಎಂದು ಪತ್ರಕರ್ತರು ವಿನಂತಿಸಿದ್ದಾರೆ. ಪತ್ರಕರ್ತರ ಪಾಲಿಗೆ ಮಾಧ್ಯಮ ರಾಮಯ್ಯರಾಗಿರುವ ಸಾಮಾಜಿಕ ನ್ಯಾಯದ ಹರಿಕಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಪತ್ರಕರ್ತರ ನೋವಿಗೆ ಸ್ಪಂದಿಸಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದ ಇಂದಿನ ತನಕ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಯಾವುದೇ ಸರ್ಕಾರಗಳು ನೇರವಾಗಿ ಪತ್ರಕರ್ತರ ನೋವಿಗೆ ಸ್ಪಂದಿಸಿರಲಿಲ್ಲ. ಪತ್ರಕರ್ತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದವು. ರಾಜ್ಯ ಕಾಂಗ್ರೆಸ್ ಸರ್ಕಾರದ ನೇತೃತ್ವ ವಹಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಾತುಕೊಟ್ಟಂತೆ ನಡೆದುಕೊಂಡಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ರಾಜ್ಯದ ಪತ್ರಕರ್ತರು ಹೇಳಿದ್ದಾರೆ.

Share This Article
Leave a comment