ಕನ್ನಡ ನಿತ್ಯ ಜೀವನದ ಉಸಿರಾಗಲಿ…

Team Newsnap
6 Min Read
1951ರಲ್ಲಿ ದೇಜಗೌ ಅವರ 'ಕನ್ನಡಿಗರೆ ಎಚ್ಚರಗೊಳ್ಳಿ!' ಎಂಬ ಪುಸ್ತಕಕ್ಕೆ ಕವಿ ಕುವೆಂಪು ಬರೆದ ಮುನ್ನುಡಿಯಲ್ಲಿ ಹೇಳಿದ ಮಾತು ಇಂದಿಗೂ ಅರ್ಥಪೂರ್ಣವಾಗಿದೆ.

'ಹೇ ರಾಜಕಾರಣಿ, ಹೇ ಮಂತ್ರಿವರೇಣ್ಯ, ಹೇ ಅಧಿಕಾರಿ ಸರ್ವೋತ್ತಮ, ಹೇ ವಣಿಗ್ವರ, ಹೇ ಶ್ರಮಜೀವಿ, ಹೇ ಅಧ್ಯಾಪಕ ಮಹಾಶಯ, ಓ ನೇಗಿಲಯೋಗಿ, ನೀನು ಯಾರೇ ಆಗಿರು, ಎಲ್ಲಿಯೇ ಇರು, ಕನ್ನಡವನ್ನು ಕೈಬಿಡದಿರು.ನಾಳೆ ಎಂದರಾಗದು; ಮುಂದೆ ಎಂದರಾಗದು; ಇಂದೆ ನೀನು ನಿರ್ಣಯಿಸಬೇಕು ಇಂದೆ ಎತ್ತಿ ಪೊರೆಯಬೇಕು. ಬೆಂಕಿಗೆ ಬಿದ್ದವರನ್ನು ನಾಳೆ ಎತ್ತುತ್ತೇನೆಯೆಂದರೆ ದೊರೆಯುವುದೇನು? ಬೂದಿಯಲ್ಲವೇ! ನೀರಿಗೆ ಬಿದ್ದವರನ್ನು ನಾಳೆ ಎತ್ತುತ್ತೇನೆಂದರೆ ಲಭಿಸುವುದೇನು? ಹೆಣವಲ್ಲವೆ!
ಇದು ನಿನ್ನ ಭಾಷೆ; ಇದು ದೇಶದ ಭಾಷೆ; ಇದು ಸಾವಿರಾರು ವರ್ಷಗಳ ಸುಪುಷ್ಟ ಸಾಹಿತ್ಯ ಭಾಷೆ; ಇದು ಮಹಾಕವಿಗಳನ್ನು ಶಿಲ್ಪಿಗಳನ್ನು ರಾಜಾ ರಾಜರನ್ನು ವೀರಾಧಿವೀರರನ್ನು ರಸಋುಷಿ ದಾರ್ಶನಿಕರನ್ನು ಹಡೆದಿರುವ ಭಾಷೆ; ಏನೋ ನಡುವೆ ನಾಲ್ಕು ದಿನ ವಿಧಿಧಿ ಮುನಿಯೆ ಸಿರಿಯಳಿದು, ಮನೆ ಮುರಿಯೆ ಬೀದಿ ಸೇರಿದ ಮಾತ್ರದಿಂದ ನಿನ್ನ ತಾಯಿ ರಾಣಿಯಾಗಿದ್ದಳೆಂಬುದನ್ನು ಮರೆತುಬಿಡುವೆಯ? ಸ್ವತಂತ್ರನಾದ ಮೇಲೆಯೂ ಆಕೆಯನ್ನು ತೊತ್ತಾಗಿರುಸುವೆಯಾ?

ಕನ್ನಡ ರಾಜ್ಯೋತ್ಸವ ಕನ್ನಡಿಗರ ಸಡಗರ ಸಂಭ್ರಮದ ಹಬ್ಬ. ನಾಡು, ನುಡಿ, ಜಲ ವಿಷಯದಲ್ಲಿ ಭಾವೋದ್ವೇಗ ಭಾವನಾತ್ಮಕತೆ ಮತ್ತು ತಾಯ್ನಾಡಿನ ಮೇಲಿನ ಅಪರಿಮಿತ ಪ್ರೀತಿ ಎಲ್ಲವೂ ಮುಖ್ಯ. ಆದರೆ ಇವೆಲ್ಲವೂ ಆಚರಣೆಯ ಜೊತೆ ಕೈ ತೊಳೆದ ನೀರಿನಂತೆ ಗಟಾರ ಸೇರಬಾರದು. ಇದು ನಿಂದನೆಯ ಮಾತಲ್ಲ. ಬದಲಿಗೆ ಕನ್ನಡ ಉಳಿಸಿ ಕಟ್ಟಿ ಬೆಳೆಸುವ ಮತ್ತು ಬದುಕಿನ ಜೀವನಾಡಿಯಾಗಿಸುವ ನಿಟ್ಟಿನಲ್ಲಿ ನಾವು ನವೆಂಬರ್ ಗೆ ಮಾತ್ರ ಕನ್ನಡಿಗರಾಗದೇ, ವರ್ಷಪೂರ್ತಿ ಒಂದು ಕಾರ್ಯಸೂಚಿ ಹೊಂದಿರುವುದು ಬಹಳ ಮುಖ್ಯ. ಪ್ರಾರಂಭದಲ್ಲಿಯೇ ವರ್ಷವಿಡೀ ಕಾರ್ಯಕ್ರಮ ಕಷ್ಟವೆನಿಸಿದರೆ, ಕನಿಷ್ಠ ನವೆಂಬರ್‌ ತಿಂಗಳ ಕಾರ್ಯಕ್ರಮಗಳಿಗೊಂದು ಕಾರ್ಯಸೂಚಿ ಇಟ್ಟುಕೊಳ್ಳಬಹುದೇ ಎಂಬುದು ಮುಖ್ಯವಾದ ವಿಷಯ.

ನಮಗೆ ತಿಳಿದಿರುವಂತೆ ನವೆಂಬರ್ ಮುಗಿದ ನಂತರ ನಮ್ಮಲ್ಲಿನ ಭಾಷಾ ಪ್ರೇಮ ಕ್ರಮೇಣವಾಗಿ ಕಡಿಮೆಯಾಗುತ್ತಾ ನಿಧಾನವಾಗಿ ಮುಂದಿನ ನವೆಂಬರ್ 1ರವರೆಗೆ ಹಳ್ಳ ಸೇರುತ್ತದೆ. ವರ್ಷದಲ್ಲಿ ಉಳಿದ ಹನ್ನೊಂದು ತಿಂಗಳು ನಮಗೆ ಕನ್ನಡ ಮರೆತೇ ಹೋಗುತ್ತದೆ. ಇದರ ಪರಿಣಾಮ ಹಿಂದಿ ಹೇರಿಕೆ ಮತ್ತು ಆಂಗ್ಲ ಭಾಷೆಯ ಯಜಮಾನಿಕೆ ದಿನೇ ದಿನೇ ಹೆಚ್ಚುತ್ತಿದೆ. ಕನ್ನಡ ತನ್ನ ನೆಲೆಯನ್ನು ಕಳೆದುಕೊಂಡು ತನ್ನ ತವರಿನಲ್ಲಿಯೇ ತಬ್ಬಲಿಯಾಗಬೇಕಾದ ಸ್ಥಿತಿ ಹೆಚ್ಚುತ್ತಿದೆ.

ಸರ್ಕಾರಿ ಶಾಲೆಗಳ ದುಸ್ಥಿತಿ

ಕನ್ನಡ ನಾಡಿನಲ್ಲಿ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿ ದಿನದಿಂದ ದಿನಕ್ಕೆ ಶೋಚನೀಯವಾಗುತ್ತಿದೆ. ಕನ್ನಡದ ಮಕ್ಕಳನ್ನು ಸಾಕಿ ಸಲುಹಿ ವಿದ್ಯಾವಂತರನ್ನಾಗಿ ಮಾಡಿದ ಈ ತೊಟ್ಟಿಲುಗಳಿಗೆ ಮಕ್ಕಳಿಲ್ಲದ ಬಂಜೆತನ ಬಂದೊದಗಿದೆ. ಮತ್ತೊಂದೆಡೆ, ನಮ್ಮ ಕನ್ನಡಿಗರೇ ನಡೆಸುವ ಆಂಗ್ಲ ಶಾಲೆಗಳಲ್ಲಿ ಕನ್ನಡದ ಮಕ್ಕಳು ಅಪ್ಪಿತಪ್ಪಿ ಕನ್ನಡದಲ್ಲಿ ಮಾತನಾಡಿದರೆ ದಂಡತೆರಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಈ ಪರಿಸ್ಥಿತಿಯಿಂದ ಹೊರಬಂದು ಕನ್ನಡವನ್ನು ಉಳಿಸಿ ಬೆಳೆಸಬೇಕಾದರೆ ಒಂದು ಕಾರ್ಯಸೂಚಿಯ ಅಗತ್ಯವಿದೆ.

ಇಂದು ಕನ್ನಡ ನಮ್ಮ ಕುಟುಂಬಗಳಲ್ಲೇ ಅದರಲ್ಲೂ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ನಿರ್ಲಕ್ಷಕ್ಕೆ ಒಳಗಾಗಿದೆ. ಕನ್ನಡ ಮಾತೃ ಭಾಷೆಯ ಕುಟುಂಬಗಳಲ್ಲಿ ಕನ್ನಡ ಕೇವಲ ತಂದೆ-ತಾಯಿ, ಅಜ್ಜ-ಅಜ್ಜಿಯ ಭಾಷೆಯಾಗುತ್ತಿ ದೆ. ಮಕ್ಕಳು ಮೊಮ್ಮಕ್ಕಳು ಪೂರ್ಣವಾಗಿ ಆಂಗ್ಲ ಭಾಷೆಗೆ ಜೋತು ಬಿದ್ದಿದ್ದಾರೆ. ಹಲವು ಸಂದರ್ಭಗಳಲ್ಲಿ ಪಾಲಕರು, ಪೋಷಕರು ತಮ್ಮ ಮಕ್ಕಳಿಗೆ ಅಥವಾ ಮೊಮ್ಮಕ್ಕಳಿಗೆ ಕನ್ನಡ ಭಾಷೆ ಬಾರದಿರುವುದನ್ನು ಮತ್ತು ಆಂಗ್ಲ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವುದನ್ನು ಹೆಮ್ಮೆಯ ವಿಷಯವಾಗಿ ಪರಿಗಣಿಸುತ್ತಾರೆ. ಇದು ತಾಯಿಯನ್ನು ಕೊಲೆ ಮಾಡಿ ಸಂಭ್ರಮಿಸಿದಂತಾಗುತ್ತದೆ. ನಾವು ಪ್ರಜ್ಞಾಪೂರ್ವಕವಾಗಿ ಕನ್ನಡ ಉಳಿಸುವ ಬೆಳೆಸುವ ಕೆಲಸವನ್ನು ಮಾಡಬೇಕು. ಸಾಧ್ಯವಾದಾಗಲೆಲ್ಲ ಉತ್ತಮ ಅಭಿರುಚಿಯ ಕನ್ನಡ ಚಲನಚಿತ್ರ, ನಾಟಕ, ಸಂಗೀತ ಕಛೇರಿ ಮತ್ತು ಕನ್ನಡದ ಸಭೆ ಸಮಾರಂಭಗಳಿಗೆ ಮಕ್ಕಳು, ಮೊಮ್ಮಕ್ಕಳನ್ನು ಕರೆದುಕೊಂಡು ಹೋಗುವ ಹವ್ಯಾಸ ಬೆಳೆಸಿಕೊಳ್ಳಬೇಕು.

ಶಾಲೆಗಳಲ್ಲಿ ಕಡ್ಡಾಯ ಆಚರಣೆ

ರಾಜ್ಯೋತ್ಸವವನ್ನು ಎಲ್ಲಾ ಶಾಲೆಗಳಲ್ಲಿ ಕಡ್ಡಾಯಗೊಳಿಸಬೇಕಿದೆ. ಈಗ ಅದು ಕೇವಲ ಒಂದು ಕೇಂದ್ರೀಕೃತ ಆಚರಣೆಯಾಗಿದ್ದು, ನವಂಬರ್‌ 1ರಂದು ಕಂಠೀರವ ಕ್ರೀಡಾಂಗಣ ಅಥವಾ ಬೇರೊಂದು ಜಾಗದಲ್ಲಿ ಕಾರ್ಯಕ್ರಮ ನಡೆದು ಮುಖ್ಯಮಂತ್ರಿಯವರ ಭಾಷಣ ಮತ್ತು ಸಾಸ್ಕೃತಿಕ ಕಾರ್ಯಕ್ರಮಗಳಲ್ಲಿ ಪರ್ಯಾವಸನಗೊಳ್ಳುತ್ತದೆ. ಇದು ನಡೆಯಲಿ. ಇದರ ಜೊತೆಗೆ ಪ್ರತೀ ಶಾಲೆಯಲ್ಲಿ ಕನ್ನಡದ ಹಬ್ಬ ನವೆಂಬರ್ ನಲ್ಲಿ ನಡೆಯುವಂತಾಗಬೇಕು. ಅಂದು ಸರ್ಕಾರಿ ಕನ್ನಡ ಶಾಲೆಗಳಲ್ಲಿ ಕಲಿತು ಅತ್ಯುನ್ನತ ಪದವಿಗೆ ಏರಿರುವ ಶಾಲೆಯ ಮಾಜಿ ವಿದ್ಯಾರ್ಥಿಯನ್ನು ಅತಿಥಿಯನ್ನಾಗಿ ಆಹ್ವಾನಿಸಿ, ಕನ್ನಡ ಶಾಲೆಗಳ ಬಗ್ಗೆ ಕಳೆದು ಹೋಗಿರುವ ಭರವಸೆಯನ್ನು ಮತ್ತೆ ಮೂಡಿಸಬೇಕು. ವಿಶೇಷವಾಗಿ ಆ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ತಂದೆ-ತಾಯಂದಿರಿಗೆ ಕನ್ನಡದ ಕೀಳರಿಮೆಯನ್ನು ತೊಡೆದು ಸ್ವಾಭಿಮಾನ ಮೂಡಿಸುವಂತ ಕೆಲಸ ವ್ಯವಸ್ಥಿತವಾಗಿ ನಡೆಯಬೇಕಿದೆ.

ಕನ್ನಡ ಮಾಧ್ಯಮೇತರ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಗೌರವಿಸುವ ಮತ್ತು ಕನ್ನಡ ಭಾಷೆಯನ್ನು ಒಂದು ಭಾಷೆಯನ್ನಾಗಿ ಕಲಿಸುವ ಕನ್ನಡ ಕಾಯಕಲ್ಪದ ಹಬ್ಬ ಇದಾಗಬೇಕು. ರಾಜ್ಯದಲ್ಲಿ ಬಹುತೇಕ ಆಂಗ್ಲ ಮಾಧ್ಯಮದ ಶಾಲೆಗಳನ್ನು ನಡೆಸುತ್ತಿರುವವರು ಕನ್ನಡಿಗರೇ. ಇದೇ ಕನ್ನಡಿಗರು, ಮಕ್ಕಳು ಶಾಲೆಯಲ್ಲಿ ಕನ್ನಡ ಮಾತನಾಡಿದರೆ ದಂಡ ವಿಧಿಧಿಸುವ ಮನಸ್ಥಿತಿಗೆ ತಲುಪಿದ್ದಾರೆ. ವ್ಯಾಪಾರ ಏನೇ ಇರಲಿ. ಹೆತ್ತ ತಾಯಿಗೆ ಸಲ್ಲಬೇಕಾದ ಗೌರವ ಸಲ್ಲಲೇಬೇಕು. ಹೀಗಾಗಿ, ಆಂಗ್ಲ ಮಾಧ್ಯಮ ಶಾಲೆಗಳು ತಮ್ಮ ಕನ್ನಡ ವಿರೋಧಿ ಧೋರಣೆಯನ್ನು ಬದಲಾಯಿಸಿಕೊಳ್ಳಬೇಕು. ಕನ್ನಡದ ನೆಲ, ನೀರು, ಸಂಪನ್ಮೂಲ ಇತ್ಯಾದಿ ಬಳಸುವ ನಾವು ಕನ್ನಡ ಭಾಷೆಯನ್ನು ಬೆಳಸದಿರುವುದು ಆತ್ಮವಂಚನೆಗೆ ಸಮ. ಈ ಶಾಲೆಗಳು ಕೂಡ ನಾಡ ಹಬ್ಬವನ್ನು ಆಚರಿಸಿ, ಆ ವೇದಿಕೆಯಿಂದ ಕನ್ನಡ ಬಳಸುವ ಮತ್ತು ಬೆಳೆಸುವ ಸಂಕಲ್ಪ ತೊಡಬೇಕಿದೆ.

ಇಲ್ಲಿದೆ ಭಾಷಾ ಸಮಸ್ಯೆಗೆ ಪರಿಹಾರ

ನಾವು ವಾಸಿಸುವ ಗ್ರಾಮ, ಬೀದಿ, ಓಣಿ, ವಠಾರ, ಮೊಹಲ್ಲಾ, ವಾರ್ಡ್‌ ಇತ್ಯಾದಿಗಳಲ್ಲಿ ಕನ್ನಡ ಪರ ಸಂಘಟನೆಗಳು ಸ್ಥಳೀಯ ಜನಪ್ರತಿನಿಧಿಧಿಗಳ ಸಹಯೋಗದಲ್ಲಿ ‘ಕನ್ನಡ ಕಲಿಯೋಣ, ಕನ್ನಡ ಬಳಸೋಣ’ ಮಾಸಿಕ ಸಪ್ತಾಹದ ಮೂಲಕ, ಅನ್ಯಭಾಷಿಕರಾದ ತಮಿಳು, ತೆಲಗು, ಹಿಂದಿ, ಮಲಯಾಳಂ, ಗುಜರಾತಿ, ರಾಜಸ್ಥಾನಿ, ಉರ್ದು ಇತ್ಯಾದಿ ಸಮುದಾಯಗಳಿಗೆ ಕನ್ನಡ ಕಲಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಒಂದು ತಿಂಗಳಲ್ಲಿ ಕನಿಷ್ಠ ಮಾತನಾಡುವ ಮತ್ತು ನಂತರದ ದಿನಗಳಲ್ಲಿ ವ್ಯವಹರಿಸುವ ಮಟ್ಟಿಗೆ ಕನ್ನಡ ಕಲಿಸುವಂತಾಗಬೇಕು. ಅನೇಕರು ಹಲವಾರು ವರ್ಷಗಳಿಂದ ಕರ್ನಾಟಕದಲ್ಲಿ ನೆಲಸಿ, ಇಲ್ಲೇ ಕಾರ್ಯ ನಿರ್ವಹಿಸುತ್ತಿದ್ದರೂ ಕನ್ನಡ ಕಲಿಯುವ ಗೋಜಿಗೆ ಹೋಗದಿರುವುದು, ಕನ್ನಡ ಬಾರದಿದ್ದರೂ ಕರ್ನಾಟಕದಲ್ಲಿ ಬದಕುಬಹುದು ಎಂಬ ತಾತ್ಸಾರ ಧೋರಣೆಯನ್ನು ಅವರಲ್ಲಿ ಬೆಳಸಿದೆ. ಕರ್ನಾಟಕದಲ್ಲಿ ಕನಿಷ್ಠ ವ್ಯಾವಹಾರಿಕ ಕನ್ನಡ ಕಡ್ಡಾಯ ಎಂಬುದು ಅವರಿಗೆ ಮನವರಿಕೆಯಾಗಬೇಕು.

ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಿ ನಮ್ಮ ಬದುಕಿನ ಭಾಗವಾಗಿಸಿ ಕೊಳ್ಳಬೇಕಾದರೆ ಶಾಲೆ, ಕಾಲೇಜು ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ಕುರಿತಾದ ಚರ್ಚೆ, ವಿಚಾರ ಸಂಕಿರಣ, ಪ್ರಬಂಧ ಸ್ಪರ್ಧೆ ಮತ್ತು ಚರ್ಚಾಕೂಟಗಳನ್ನು ನಿರಂತರವಾಗಿ ಆಯೋಜಿಸಬೇಕು. ಇದು ನವಂಬರ್‌ಗೆ ಮಾತ್ರ ಸೀಮಿತವಾಗದೆ ವರ್ಷವಿಡೀ ನಡೆಯುವ ಕಾರ್ಯಕ್ರಮವಾಗಬೇಕು. ಎಳೆವಯಸ್ಸಿನಲ್ಲಿಯೇ ಕನ್ನಡ ಭಾಷೆಯ ಬಗ್ಗೆ ಸ್ವಾಭಿಮಾನ ಬೆಳೆದು ಹೀಗಿರುವ ಕೀಳರಿಮೆಯನ್ನು ಬುಡ ಸಮೇತ ಕಿತ್ತೊಗೆಯಬೇಕಿದೆ. ಶಿಕ್ಷಣದ ಎಲ್ಲ ಹಂತಗಳಲ್ಲಿ ಕನ್ನಡ ಭಾಷೆಯನ್ನು ಪ್ರಜ್ಞಾಪೂರ್ವಕವಾಗಿ ಬೆಳೆಸದೆ ಇದು ಸಾಧ್ಯವಿಲ್ಲ.

ಆಂಗ್ಲ ಭಾಷೆಯಲ್ಲಿ ಸುದ್ದಿ ಪತ್ರಿಕೆ ಓದುವ ಹವ್ಯಾಸವನ್ನು ಮಕ್ಕಳಲ್ಲಿ ಚಿಕ್ಕಂದಿನಿಂದಲೇ ರೂಢಿ ಮಾಡುವ ಭಾಗವಾಗಿ ಆಂಗ್ಲ ಸುದ್ದಿ ಪತ್ರಿಕೆಗಳು ವಿದ್ಯಾರ್ಥಿ ಆವೃತ್ತಿಯನ್ನು ಹೊರತರುತ್ತಿವೆ. ಅದೇ ಮಾದರಿಯಲ್ಲಿ ಕನ್ನಡ ಭಾಷೆಯನ್ನು ಮೊದಲ, ಎರಡನೆಯ ಮತ್ತು ತೃತೀಯ ಭಾಷೆಯಾಗಿ ಕಲಿಯುತ್ತಿರುವ ಎಲ್ಲ ಮಕ್ಕಳು ಮುಂದೆ ಕನ್ನಡ ಭಾಷೆಯನ್ನು ಸರಾಗವಾಗಿ ಮಾತನಾಡುವ, ಓದುವ ಮತ್ತು ಬರೆಯುವ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಸಹಾಯಕವಾಗುವಂತೆ ಮಕ್ಕಳಿಗೆ ನಿತ್ಯ ಕನ್ನಡ ವಿದ್ಯಾರ್ಥಿ ಆವೃತ್ತಿ ದೊರೆಯುವಂತೆ ನೋಡಿಕೊಳ್ಳಬೇಕು. ಕನ್ನಡ ಆವೃತ್ತಿಯ ಮುಖ್ಯಾಂಶಗಳನ್ನು ಆಯಾ ಶಾಲೆಗಳಲ್ಲಿ ಕಡ್ಡಾಯವಾಗಿ ಬೆಳಗಿನ ಶಾಲಾ ಸಾಮೂಹಿಕ ಪ್ರಾರ್ಥನೆಯ ಸಂದರ್ಭದಲ್ಲಿ ಓದಿಸುವಂತಾಗಬೇಕು. ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಲ್ಲಿ ಇದು ಕಡ್ಡಾಯವಾಗಿ ನಡೆಯಬೇಕು.

ನಾಡು ನುಡಿಯ ಸಂಕ್ಷಿಪ್ತ ಇತಿಹಾಸವನ್ನು ತಿಳಿಸುವ 10-15 ಪುಟಗಳ ವರ್ಣರಂಜಿತ ಕಿರುಹೊತ್ತಿಗೆಯೊಂದು ನಾಡ ಹಬ್ಬಕ್ಕೆ ಕರ್ನಾಟಕ ಮೂಲೆ ಮೂಲೆಗಳಲ್ಲಿರುವ ಪ್ರತಿಯೊಂದು ಮನೆ ಮನೆಗೂ ತಲುಪಿಸುವ ಕೆಲಸವನ್ನು ಕನ್ನಡಿಗರು ಮತ್ತು ಕನ್ನಡ ಸಂಘಟನೆಗಳು ಮಾಡಬೇಕು. ಕನ್ನಡಿಗರೂ ಸೇರಿದಂತೆ ಭಾಷೆ ಯಾವುದೇ ಇರಲ್ಲಿ ಕನ್ನಡ ನಾಡಿನ ಇತಿಹಾಸವನ್ನು ಸಾರುವ ಕಿರುಹೊತ್ತಿಗೆಯೊಂದು ರಾಜ್ಯದ ಮನೆ ಮನೆಯಲ್ಲಿಯೂ ಇರಬೇಕು. ಸಾಧ್ಯವಾದರೆ ನಮ್ಮೆಲ್ಲರ ಪ್ರಜಾಸತ್ತೆಯ ಧರ್ಮ ಗ್ರಂಥವಾದ ಸಂವಿಧಾನದ ಮೂಲಾಂಶಗಳನ್ನು ಕನ್ನಡದಲ್ಲಿ ಸಾರುವ ಕಿರುಹೊತ್ತಿಗೆಯೊಂದನ್ನು ಎಲ್ಲರಿಗೂ ದೊರಕಿಸುವ ಕೆಲಸ ನವೆಂಬರ್‌ನಲ್ಲಿ ನಡೆಯಬೇಕು. ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡಪರ ಸಂಘಟನೆಗಳಿಗೆ ಈ ಕಿರು ಹೊತ್ತಿಗೆಯನ್ನು ಮುದ್ರಿಸಿ ಒದಗಿಸುವ ಕೆಲಸ ಮಾಡಬೇಕು.

ಕನ್ನಡದ ಹಬ್ಬ ಕೇವಲ ಭಾಷಣ, ಕಿರುಚಾಟ ವಾದ್ಯವೃಂದ, ಹಾರ ತುರಾಯಿ, ಕರ್ಕಷವಿಡುವ ಧ್ವನಿವರ್ಧಕದ ಸಂಗೀತಕ್ಕೆ ಸೀಮಿತವಾಗಬಾರದು. ನಿಜ ಅರ್ಥದಲ್ಲಿ ಮತ್ತು ಆಚರಣೆಯಲ್ಲಿ ಕನ್ನಡ ಕಟ್ಟುವ ಬೆಳೆಸುವ ಬಳಸುವ ಮತ್ತು ಮುಂದಿನ 5-10 ವರ್ಷಗಳಲ್ಲಿ ಕನ್ನಡ ನಾಡಿನ ವಾಸಿಸುವ ಪ್ರತಿಯೊಬ್ಬ ಪ್ರಜೆಯೂ ಪ್ರಜ್ಞಾಪೂರ್ವಕವಾಗಿ ಕನ್ನಡವನ್ನು ತನ್ನ ಬದುಕಿನ ಭಾಗವಾಗಿಸಿಕೊಳ್ಳುವ ಮೂಲಕ ನಡೆ ನುಡಿ ಸಂಸ್ಕೃತಿಯಲ್ಲಿ ಕನ್ನಡವನ್ನು ತನ್ನಾದಾಗಿಸಿಕೊಳ್ಳುವ ಒಂದು ವಿಶಾಲ ಕನ್ನಡ ಸಮುದಾಯವನ್ನು ಕಟ್ಟಿಕೊಳ್ಳುವ ಒಂದು ನಿರ್ದಿಷ್ಟ ಕಾರ್ಯ ಸೂಚಿಯಾಗಬೇಕು.

supreetha 1
ಸುಪ್ರೀತಾ ಚಕ್ಕರೆ
Share This Article
Leave a comment