ಹಣ ದುರುಪಯೋಗ ಆರೋಪ ಹಿನ್ನೆಲೆಯಲ್ಲಿ ಪಾಂಡವಪುರ ತಾಲ್ಲೂಕು ಜಕ್ಕನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಪಿ.ಶಿವಣ್ಣ ಹಾಗೂ ಎಸ್.ಡಿ.ಎ.ಎ. ಲೀಲಾವತಿ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಸಿಇಓ ಜಿ.ಆರ್.ಜೆ. ದಿವ್ಯಾ ಪ್ರಭು ಆದೇಶಿಸಿದ್ದಾರೆ.
ಅಧಿಕಾರ ದುರುಪಯೋಗ, ನಿಯಮಾವಳಿಗಳ ಉಲ್ಲಂಘನೆ, ನಿರ್ಲಕ್ಷ್ಯತೆ ಹಾಗೂ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಆರೋಪಿತ ನೌಕರರನ್ನು ಅಮಾನತ್ತುಗೊಳಿಸಿ, ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ.
15ನೇ ಹಣಕಾಸು ಯೋಜನೆಯಡಿ ಗ್ರಾಮ ಪಂಚಾಯತ್ ಅಧ್ಯಕ್ಷರ ಡಾಂಗಲ್ ಕೀ ಅನ್ನು ದುರುಪಯೋಗಪಡಿಸಿಕೊಂಡು ಹಣ ಸೆಳೆದಿದ್ದಾರೆ ಎನ್ನುವ ದೂರು ಸ್ವೀಕೃತವಾಗಿತ್ತು. ಈ ಹಿನ್ನೆಲೆಯಲ್ಲಿ ಪಾಂಡವಪುರ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ಲೆಕ್ಕಾಧಿಕಾರಿ, ವ್ಯವಸ್ಥಾಪಕರು ಹಾಗೂ ಪ್ರಥಮ ದರ್ಜೆ ಸಹಾಯಕರನ್ನು ಒಳಗೊಂಡ ತಂಡ ರಚಿಸಿ ತನಿಖೆ ನಡೆಸಿದ್ದರು.
ಇದನ್ನು ಓದಿ :ಮಂಡ್ಯದ ವಿಕಲಾಂಗನ ಸಮಸ್ಯೆಗೆ ಎರಡೇ ದಿನಕ್ಕೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ
ಉಪ ಕಾರ್ಯದರ್ಶಿ (ಆಡಳಿತ) ಅವರ ನೇತೃತ್ವದ ತಂಡವು ಪ್ರತ್ಯೇಕವಾಗಿ ತನಿಖೆ ಕೈಗೊಂಡಿತ್ತು. ತಂಡಗಳು ಗ್ರಾಮ ನೈರ್ಮಲ್ಯ ಮತ್ತು ಇತರೆ ಸಾಮಾಗ್ರಿಗಳ ಖರೀದಿಯಲ್ಲಿ ಯಾವುದೇ ದಾಖಲಾತಿಗಳನ್ನು ನಿರ್ವಹಿಸದಿರುವುದು ಮತ್ತು ನೇರವಾಗಿ ಹಣ ಪಾವತಿ ಮಾಡಿರುವುದನ್ನು ಪತ್ತೆ ಹಚ್ಚಿತ್ತು. ಸುಮಾರು 19,91,642 ರುಗಳ ಹಣ ದುರುಪಯೋಗ ಆಗಿರುವ ಬಗ್ಗೆ ವರದಿ ಸಲ್ಲಿಸಿತ್ತು.
ದೂರು ದಾಖಲು :
ಹಣ ದುರುಪಯೋಗಕ್ಕೆ ಕಾರಣದ ಪಿಡಿಓ ಮತ್ತು ಎಸ್.ಡಿ.ಎ.ಎ. ವಿರುದ್ಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪಾಂಡವಪುರ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿರವರು ದೂರು ದಾಖಲಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿರವರಿಗೆ ವರದಿ ಸಲ್ಲಿಸಿದ್ದರು.
ಆರೋಪಿತ ನೌಕರರ ವಿರುದ್ಧ ಕಲಂ-406,408, 409 ಹಾಗೂ 34 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿದೆ.