ಮಂತ್ರಾಲಯ ರಾಘವೇಂದ್ರ ಸ್ವಾಮಿ ಪವಾಡ; ಘಟನೆ ಬಿಚ್ಚಿಟ್ಟ ನಟ ಜಗ್ಗೇಶ್!

Team Newsnap
2 Min Read

ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ. ನವರಸನಾಯಕ ಒಂದಲ್ಲೊಂದು ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಸದಾ ಹಂಚಿಕೊಳ್ಳುತ್ತಿರುತ್ತಾರೆ. ದೇವರಲ್ಲಿ ಅಪಾರ ನಂಬಿಕೆ ಹೊಂದಿರುವ ಜಗ್ಗೇಶ್ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಅಪ್ಪಟ ಭಕ್ತರು.

ರಾಘವೇಂದ್ರ ಸ್ವಾಮಿಗಳನ್ನು ಆರಾಧಿಸುವ ಜಗ್ಗೇಶ್ ಪ್ರತೀದಿನ ಬೃಂದಾವನ ರಾಯರ ಅಲಂಕಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೂ ದರ್ಶನ ನೀಡುತ್ತಾರೆ. ಇತ್ತೀಚಿಗೆ ಜಗ್ಗೇಶ್ ಅಧ್ಯಾತ್ಮ ಕಡೆ ಹೆಚ್ಚು ವಾಲುತ್ತಿದ್ದಾರೆ. ಅಲ್ಲದೆ ಅಧ್ಯಾತ್ಮದ ಕುರಿತು ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪೋಸ್ಟ್ ಗಳನ್ನು ಶೇರ್ ಮಾಡುತ್ತಿದ್ದಾರೆ. ಇದೀಗ ಮಂತ್ರಾಲಯದ ರಾಯರು ಮತ್ತು ಜಗ್ಗೇಶ್ ನಡುವೆ ನಡೆದ ಮರೆಯಲಾಗದ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.

ಮರೆಯಲಾಗದ ಘಟನೆ ವಿವರಿಸಿದ ಜಗ್ಗೇಶ್

‘ನೆನೆದವರ ಮನದಲ್ಲಿ ಗುರುರಾಯ. ಸ್ನೇಹಿತರೆ ಇಂದು ನನ್ನ ರಾಯರ ನಡುವೆ ನಡೆದ ಮರೆಯಲಾಗದ ಘಟನೆ. ಪರಿಮಳ 9ಗಂಟೆಗೆ ನನ್ನ ಏಕಾಂತ ಜಾಗದಲ್ಲಿ ಊಟ ಬಡಿಸಿ online ಕೆಲಸಕ್ಕೆ ತನ್ನ ಹಾಲಿಗೆ ಹೋದಳು. ನಾನು ಊಟ ಮುಗಿಸಿ ಒಂದು ಬಾರಿ ಸ್ಮರಣೆ ಸಾಲದೆ ಹಾಡು ಕೇಳುತ್ತಾ ರಾಯರ ಚಿತ್ರಪಟ ನೋಡುತ್ತ ಮಂತ್ರಮುಗ್ಧನಾಗಿ ಧ್ಯಾನದಲ್ಲಿ ಕೂತುಬಿಟ್ಟೆ. ಆಗ ನನ್ನ ಮನಸ್ಸಿನಲ್ಲಿ ರಾಯರ ಜೊತೆ ಸಂಭಾಷಣೆ ಶುರುವಾಯಿತು.’

ರಾಯರ ಮುಂದೆ ಕೂತು ಹಾಡಲು ಆಶೀರ್ವಾದಿಸಿ- ಜಗ್ಗೇಶ್

‘ರಾಯರೆ ನಾನು ಬದುಕಲ್ಲಿ ಕೇಳಿದ್ದೆಲ್ಲಾ ಕೊಟ್ಟಿದ್ದೀರಿ ಕೊಡುತ್ತಿದ್ದೀರಿ ನಿಮ್ಮ ಭಿಕ್ಷೆಯಿಂದ ನಾನು ಕೋಟ್ಯಾಂತರ ಪ್ರೀತಿಸುವ ಯೋಗ ಪಡೆದಿರುವೆ. ಆದರೆ ಪಾಪಿಯಾದ ನಾನು ನಿಮ್ಮ ಶಾಸ್ತ್ರೋಕ್ತವಾಗಿ ಭಜಿಸುವ ವಿಧ್ಯೆ ಪಡೆಯಲಿಲ್ಲ. ಕಲಿಯುವ ವಯಸ್ಸಿನಲ್ಲಿ ಅಪ್ಪ ಬಿಡಲಿಲ್ಲ. ಅಲ್ಪಸ್ವಲ್ಪ ಚಿತ್ರ ಗೀತೆ ಹಾಡುವೆ. ದಯಮಾಡಿ ನಿಮ್ಮ ಮುಂದೆ ಕೂತು ಹಾಡಲು ಆಶೀರ್ವಾದಿಸಿ. ಮನತುಂಬಿ ಹಾಡುವಾಸೆ ದಯಮಾಡಿ ಕರುಣಿಸಿ ಎಂದು ಪ್ರಾರ್ಥಿಸುತ್ತಿದ್ದೆ.’

ಮನೆಯಲ್ಲೇ ಕುಳಿತು ರಾಯರ ದರ್ಶನ ಪಡೆದ ಜಗ್ಗೇಶ್

ಸ್ನೇಹಿತರೆ ಮಿಂಚಿನಂತೆ ಮಂತ್ರಾಲಯ ಆತ್ಮೀಯ ಸಹೋದರ ಮಠದ ಪಿ ಆರ್ ಓ ನರಸಿಂಹ ಆಚಾರ್ ರವರ ವಾಟ್ಸ್ ಆಪ್ ವೀಡಿಯೋ ಕಾಲ್ ಬಂತು ಕರೆ ಸ್ವೀಕರಿಸಿದಾಗ ಬೃಂದಾವನ ದರ್ಶನ ಆಯಿತು. ಅಳು ತಡೆಯಲಾಗಲಿಲ್ಲ ಮನಬಿಚ್ಚಿ ರಾಯರಿಗೆ ಹೇಳಿದೆ ನನ್ನ ಮಾತು ಬೃಂದಾವನಕ್ಕೆ ಕೇಳುವ ಸೌಭಾಗ್ಯ ನನಗೆ ನೀಡಿದ ನಿಮ್ಮ ಕರುಣೆ ಸಾಕು ಈ ಜನ್ಮಕ್ಕೆ ಇನ್ನೆಂದಿಗೂ ನನಗೆ ಮನು ಜನ್ಮ ಬೇಡ ನಿಮ್ಮ ಪಾದದಡಿಯ ದೂಳಾಗಿ ಜನ್ಮಕೊಡಿ ಸಾಕು ಎಂದು ಪ್ರಾರ್ಥಿಸಿ. ನರಸಿಂಹ ಆಚಾರ್ ಅವರಿಗೆ ಕೇಳಿದೆ. ಈ ಸರಿಹೊತ್ತಲ್ಲಿ ರಾಯರ ಬೃಂದಾವನ ದರ್ಶನ ನನಗೆ ಮಾಡಿಸಲು ಏನು ಪ್ರೇರಣೆ ಆಯಿತು ಎಂದೆ.’

ತಾಯಿಯಂತೆ ಮಕ್ಕಳು ಬಯಸಿದಾಗ ಯಾರು ಬಂದು ಬಿಡುವರು

‘ಅವರು ಬೃಂದಾವನ ಅಲಂಕಾರ ತೆಗೆಯಬೇಕಾದರೆ ಅಲ್ಲೆ ನಿಂತಿದ್ದೆ ಇದ್ದಕ್ಕಿದ್ದಂತೆ ಜಗ್ಗೇಶನಿಗೆ ಬೃಂದಾವನ ತೋರಿಸುವಂತೆ ರಾಯರ ಪ್ರೇರಣೆ ಆಯಿತು ಎಂದರು. ಈ ಬರವಣಿಗೆಯಲ್ಲು ಕಣ್ಣೀರು ನಿಂತಿಲ್ಲಾ. ಜನ್ಮಪಾವನ ಹಾಗು ರಾಯರ ಪರಿಚಯಿಸಿ ಕಣ್ಣಿಗೆ ಕಾಣದ ಊರಿಗೆ ಹೋದ ನನ್ನ ದೇವತೆ ಅಮ್ಮನಿಗೆ ಉಸಿರು ನಿಲ್ಲುವವರೆ ಧನ್ಯವಾದ. ಮಾತೃದೇವೋಭವ ಗುರುದೇವೊಭವ. ಕೋಟಿ ಬಾರಿ ಪ್ರಮಾಣಿಸಿ ಹೇಳುವೆ ರಾಯರು ತಾಯಿಯಂತೆ ಮಕ್ಕಳು ಬಯಸಿದಾಗ ಬಂದುಬಿಡುವರು.’

Share This Article
Leave a comment