ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ಇಂಗ್ಲೀಷ್ ಕಲಿಕೆಯ/ ಹೇರಿಕೆಯ ನೀತಿ ಸರಿಯೇ ? ತಪ್ಪೇ ?

Team Newsnap
2 Min Read

ಎಂದಿನಂತೆ ಈ ವಿಷಯದಲ್ಲೂ ಬೆಂಬಲಿಸಲು ಮತ್ತು ವಿರೋಧಿಸಲು ಸಾಕಷ್ಟು ಕಾರಣಗಳು ಸಿಗುತ್ತದೆ…….

ಒಂದು,
ಬಡವರ ಮಕ್ಕಳಿಗೆ ಇಂಗ್ಲೀಷ್ ನಿರಾಕರಿಸಿ ಕನ್ನಡ ರಕ್ಷಿಸುವ ಸಂಪೂರ್ಣ ಜವಾಬ್ದಾರಿ ಅವರ ತಲೆಯ ಮೇಲೆ ಹೊರಿಸುವುದು.

ಎರಡು,
ಎಲ್ಲರಿಗೂ ಇಂಗ್ಲೀಷನ್ನೇ ಬೋಧಿಸಿ ನಿಧಾನವಾಗಿ ಕನ್ನಡದ ಕತ್ತು ಹಿಸುಕಿ ಕೊಲ್ಲುವುದು………

ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ನೀಡುವುದರಿಂದ ಮಕ್ಕಳ ಸ್ವಾಭಾವಿಕ ಕ್ರಿಯಾತ್ಮಕ ಬೆಳವಣಿಗೆ ಉತ್ತಮ ಮಟ್ಟದಲ್ಲಿ ಇರುತ್ತದೆ ಎಂಬುದು ವಿಶ್ವದ ಎಲ್ಲಾ ತಜ್ಞರ ಅನುಭವದ ಅಭಿಮತ.

ಆದರೆ,
ಶಿಕ್ಷಣ ಖಾಸಗೀಕರಣಗೊಂಡು ಹೆಚ್ಚು ಹೆಚ್ಚು ಜನಪ್ರಿಯತೆ ಪಡೆದ ನಂತರ ಮಧ್ಯಮ ಮತ್ತು ಶ್ರೀಮಂತ ವರ್ಗದ ಎಲ್ಲರೂ ಇಂಗ್ಲೀಷ್ ಮಾಧ್ಯಮ ಶಾಲೆಗೆ ಮಕ್ಕಳನ್ನು ಸೇರಿಸಿದರು.
ಅದೇ ಸಮಯಕ್ಕೆ ವಿದ್ಯಾಭ್ಯಾಸ ಮಾಡುವುದೇ ಉದ್ಯೋಗ ಪಡೆಯಲು ಎಂಬ ಭಾವನೆ ಬಹುತೇಕ ಎಲ್ಲಾ ಪೋಷಕರಲ್ಲೂ ಬೆಳೆಯಿತು. ಜನಸಂಖ್ಯೆಯ ಸ್ಪೋಟದೊಂದಿಗೆ ಬದುಕಲು ಉದ್ಯೋಗ ಅನಿವಾರ್ಯವಾಯಿತು. ಖಾಸಗಿ ಕಂಪನಿಗಳಿಗೆ ಇಂಗ್ಲೀಷ್ ಮತ್ತು ಅಂಕಗಳೇ ಉದ್ಯೋಗ ನೀಡುವ ಮಾನದಂಡಗಳಾದವು.
ಅಲ್ಲಿಗೆ ಕನ್ನಡದ ಮಹತ್ವ ಕಡಿಮೆಯಾಗತೊಡಗಿತು.

ಸರ್ಕಾರಿ ಶಾಲೆಗಳಲ್ಲಿ ಕಡು ಬಡವರು ಮಾತ್ರ ಓದುವುದು ಎಂಬ ಸ್ಥಿತಿ ನಿರ್ಮಾಣವಾಯಿತು. ಸಹಜವಾಗಿ ಕನ್ನಡವೇ ಅವರ ಶಿಕ್ಷಣ ಮಾಧ್ಯಮವಾಗಿದ್ದುದರಿಂದ ಕ್ರಿಯಾತ್ಮಕ ಚಿಂತನೆಯಲ್ಲಿ ಉತ್ತಮವಾಗಿದ್ದರೂ ಭಾಷೆ ಮತ್ತು ಮಾಹಿತಿ ಆಧಾರಿತ ‌ಸಾಮಾನ್ಯ ಜ್ಞಾನದ ವಿಷಯಗಳಲ್ಲಿ ಹಿಂದುಳಿದು ಉನ್ನತ ಹುದ್ದೆಗಳಿಂದ ವಂಚಿತರಾದರು. ಅದರಲ್ಲಿ ಅತಿ ಹೆಚ್ಚು ಹಿಂದುಳಿದವರು ಮತ್ತು ದಲಿತರಿಗೇ ಅನ್ಯಾಯವಾಗಿದೆ ಎಂಬ ಅಭಿಪ್ರಾಯವೂ ಬಲವಾಗಿದೆ.

ಈಗ ಯೋಚಿಸುವ ಸರದಿ ನಮ್ಮದು.

ಕನ್ನಡ ಭಾಷೆ ಉಳಿಸುವುದು ಮಹತ್ವವೇ ?
ಅಥವಾ,
ಎಲ್ಲರಿಗೂ ಸಮಾನ ಶಿಕ್ಷಣ ಮತ್ತು ಉದ್ಯೋಗದ ಅವಕಾಶ ನಿರ್ಮಿಸುವುದು ಮಹತ್ವವೇ ?
ಅಥವಾ
ಎರಡೂ ವಿಷಯಗಳಲ್ಲಿ ಸಮನ್ವಯ ಸಾಧಿಸುವ ಉಪಾಯದ ಹುಡುಕಾಟ ಮಾಡಬೇಕಿದೆಯೇ ?

ಮಾತೃಭಾಷೆ ಎಷ್ಟು ಮುಖ್ಯವೋ ಸಮಾನತೆಯೂ ಅಷ್ಟೇ ಮುಖ್ಯ. ಅದಕ್ಕಾಗಿ…..

ಮೊದಲನೇ ಸಾಧ್ಯತೆ….

ಇಡೀ ದೇಶದಲ್ಲಿ ೪ನೆಯ ತರಗತಿಯ ವರೆಗೆ ಮಾತೃಭಾಷೆಯನ್ನೇ ಎಲ್ಲರಿಗೂ ಶಿಕ್ಷಣ ಮಾಧ್ಯಮವನ್ನಾಗಿ ಕಡ್ಡಾಯಗೊಳಿಸಬೇಕು. ಅದರಿಂದ ಭಾರತದ ಭಾಷಾ ವೈವಿಧ್ಯತೆ ಮತ್ತು ಸಂಸ್ಕೃತಿ ಉಳಿಯುತ್ತದೆ.

ಇದೇ ಸಂಧರ್ಭದಲ್ಲಿ ಜಾಗತೀಕರಣದ ಪ್ರಭಾವದಿಂದ ನಾವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವಾದುದರಿಂದ ಅದರ ಪೈಪೋಟಿ ಎದುರಿಸಬೇಕಾಗಿದೆ. ಈ ನಿಯಮ ಅದಕ್ಕೆ ಸ್ವಲ್ಪ ಹಿನ್ನೆಲೆ ಉಂಟುಮಾಡಬಹುದು.

ಎರಡನೆಯದಾಗಿ,
ಮಾತೃಭಾಷೆಯನ್ನು ಒಂದು ವಿಷಯವಾಗಿ ಪ್ರಾಥಮಿಕ ಹಂತದಲ್ಲಿ ಕಡ್ಡಾಯ ಮಾಡಿ ಉಳಿದ ವಿಷಯಗಳ ಕಲಿಕೆಗೆ ಅವರವರ ಇಷ್ಟದ ಸ್ವಾತಂತ್ರ್ಯ ನೀಡಬಹುದು. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಇದು ಉತ್ತಮ.

ಆದರೆ ಇಲ್ಲಿ ಮಾತೃಭಾಷೆ ಅವನತಿಯತ್ತ ಸಾಗುವ ಸಾಧ್ಯತೆಯೇ ಹೆಚ್ಚು.

ಶಿಕ್ಷಣ ಮತ್ತು ಉದ್ಯೋಗದ ನಿಕಟ ಸಂಬಂಧ, ಜನಸಂಖ್ಯೆ ಸ್ಪೋಟ, ಜಾಗತೀಕರಣದ ಸ್ಪರ್ಧೆ, ಮಾತೃಭಾಷೆಯ ಮೇಲಿನ ನಿರಭಿಮಾನ, ಇಂಗ್ಲೀಷ್ ಮೇಲಿನ ಮೋಹ ಎಲ್ಲವೂ ಒಟ್ಟಿಗೆ ಸೇರಿ ಈ ವಿಷಯದಲ್ಲಿ ಖಚಿತ ತೀರ್ಮಾನ ತುಂಬಾ ಕಷ್ಟವಾಗಿದೆ.

ಇದಕ್ಕೆ ಸಿಗಬಹುದಾದ ನಿಜ ಪರಿಹಾರವೆಂದರೆ,
ಆಡಳಿತದ ವಿವಿಧ ಸ್ತರಗಳಲ್ಲಿ, ಜನರ ಅವಶ್ಯಕತೆ ಮತ್ತು ಅನಿವಾರ್ಯತೆಯ ಪರಿಸ್ಥಿತಿಯ ಅವಲೋಕನ, ಮಗುವಿನ ಬೆಳವಣಿಗೆಯಲ್ಲಿ ಮಾತೃಭಾಷೆಯ ಮಹತ್ವದ ಮನವರಿಕೆ, ಭಾಷೆಯ ಸಾಂಸ್ಕೃತಿಕ ಸಂಘಟನೆಗಳ ಕ್ರಿಯಾಶೀಲತೆ ಹೆಚ್ಚಿಸುವುದು ಮುಂತಾದ ಕ್ರಮಗಳು ಅತಿ ಮುಖ್ಯವಾಗುತ್ತದೆ.

ಇದು ಸರಳ ವಿವರಣೆ.
ಪರಿಣಾಮ ಫಲಿತಾಂಶಗಳನ್ನು ನೋಡಿಕೊಂಡು ಇನ್ನೂ ಆಳ ಮತ್ತು ತೀಕ್ಷ್ಣ ಕ್ರಮಗಳ ಅವಶ್ಯಕತೆ ಇದೆ.

ಏಕೆಂದರೆ…….
” ತಾಯಿ ಭಾಷೆಯ ಅಳಿವಿನೊಂದಿಗೆ ಬದುಕು ಮತ್ತು ಮಾನವೀಯ ಮೌಲ್ಯಗಳು ವಿನಾಶದತ್ತ ಸಾಗುತ್ತದೆ,
ಬಹುತೇಕ ಪರಿಸರ ನಾಶದ ಪರಿಣಾಮದಂತೆ.

  • ವಿವೇಕಾನಂದ ಎಚ್ ಕೆ
Share This Article
Leave a comment