ಎಲ್ಲಿ ಸ್ತ್ರೀ ಯನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ನಂಬಿಕೆ ಇರುವ ದೇಶ ಭಾರತ. ಆದರೆ ವಾಸ್ತವದಲ್ಲಿ ಭಾರತ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ಎನ್ನುವಂಥ ಅಪಖ್ಯಾತಿಯನ್ನು ಜಾಗತಿಕ ಮಟ್ಟದಲ್ಲಿ ಪಡೆಯುತ್ತಿದೆ. ಅದಕ್ಕೆ ಕಾರಣ ಇತ್ತೀಚೆಗೆ ನಡೆಯುತ್ತಿರುವ ಭೀಕರ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು.ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಹೊಂದಿರುವ ಹಾಗೂ ಬಾಹ್ಯಾಕಾಶ ವಿಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಭಾರತ ಮಹಿಳಾ ಸುರಕ್ಷತೆ ವಿಷಯದಲ್ಲಿ ಮಾತ್ರ ಇಡೀ ವಿಶ್ವದ ಮುಂದೆ ತಲೆ ತಗ್ಗಿಸುವಂತಾಗಿದೆ.ಉತ್ತರ ಪ್ರದೇಶದಲ್ಲಿ ನಡೆದ ಹೇಯ ಘಟನೆಗಳು ಸಮಸ್ತ ನಾಗರಿಕರನ್ನು ಆತಂಕಕ್ಕೆ ತಳ್ಳಿವೆ. ಭಾರತ ವಿಶ್ವಗುರುವಾಗುವುದಕ್ಕೂ ಮೊದಲು ಮಹಿಳಾ ಸುರಕ್ಷತೆಗೆ ಆದ್ಯತೆ ನೀಡಬೇಕೆಂಬ ಒಕ್ಕೊರಲಿನ ಅಭಿಪ್ರಾಯ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿನ ಮಹಿಳಾ ದೌರ್ಜನ್ಯ, ಈವರೆಗೆ ಸರ್ಕಾರ ಕೈಗೊಂಡ ಕ್ರಮಗಳ ಮೇಲೆ ಬೆಳಕು ಚೆಲ್ಲುವ ಲೇಖನ ಇದಾಗಿದೆ.
ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಮಾಣದಲ್ಲಿ ಗರಿಷ್ಠ ಪ್ರಮಾಣದ ಏರಿಕೆಯಾಗಿರುವುದು ಖೇಧಕರ ಸಂಗತಿ.
2011ರಲ್ಲಿ ಲೈಂಗಿಕ ದೌರ್ಜನ್ಯ, ಪತಿ ಅಥವಾ ಆತನ ಸಂಬಂಧಿಗಳ ಕಿರುಕುಳ, ಅಪಹರಣ, ಮಾರಾಟ ಸೇರಿದಂತೆ ಮಹಿಳೆಯರ ಮೇಲೆ ನಡೆದ ಅಪರಾಧ ಪ್ರಕರಣಗಳ ಸಂಖ್ಯೆ 2,61,0000 ಹೆಚ್ಚಿವೆ. 2020 ರ ಸೆಪ್ಟೆಂಬರ್ 29 ರಂದು ಬಿಡುಗಡೆಯಾದ ಇತ್ತೀಚಿನ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಭಾರತವು 2019 ರಲ್ಲಿ ಪ್ರತಿದಿನ ಸರಾಸರಿ 87 ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಿದೆ ಮತ್ತು ವರ್ಷದಲ್ಲಿ ಮಹಿಳೆಯರ ವಿರುದ್ಧ ಒಟ್ಟು 4,05,861 ಅಪರಾಧ ಪ್ರಕರಣಗಳು ದಾಖಲಾಗಿವೆ, ಇದು 2018 ರಿಂದ 7% ಕ್ಕಿಂತ ಹೆಚ್ಚಾಗಿದೆ.
5 ವರ್ಷದ ನಂತರ ಇತ್ತೀಚೆಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ ಬಿಡುಗಡೆ ಮಾಡಿರುವ ಮಾಹಿತಿಯೂ ಬೆಚ್ಚಿಬೀಳಿಸುವಂತಿವೆ.
ಎನ್ಸಿಆರ್ಬಿ ವರದಿ ಪ್ರಕಾರ ಅತ್ಯಾಚಾರ ಪ್ರಕಣಗಳಲ್ಲಿ ಆರೋಪಿಗಳಾಗಿರುವವರಲ್ಲಿ ರಾಜಕಾರಣಿಗಳು, ಕಾನೂನು ರೂಪಕರು, ಸ್ವಘೋಷಿತ ದೇವಮಾನವರು, ಭದ್ರತಾ ಸಿಬ್ಬಂದಿಗಳೇ ಹೆಚ್ಚಿದ್ದಾರೆ ಎನ್ನುವುದು ಮತ್ತೊಂದು ಆತಂಕದ ವಿಚಾರ. ದೇಶದ ಸುಮಾರು 48 ಸಂಸದರು ಮತ್ತು ಶಾಸಕರ ಮೇಲೆ ಮಹಿಳಾ ದೌರ್ಜನ್ಯದ ಆರೋಪ ದಾಖಲಾಗಿದೆ.
ನಿರ್ಭಯಾ ಪ್ರಕರಣ ಬಳಿಕ ದೇಶದ ಶಿಕ್ಷೆಯಿಂದ ಪಾರಾಗುತ್ತಿದ್ದಾರೆ. ನಿರ್ಭಯ ನಿಧಿ ಅಡಿ ರಾಜ್ಯಗಳಿಗೆ ಮಹಿಳಾ ಸುರಕ್ಷತೆಗೆ ಕ್ರಮಗಳಿಗಾಗಿ ಕೇಂದ್ರ ನೆರವು ನೀಡಿದ್ದು, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಡೆಗಾಗಿ ಫೋಸ್ಕೊ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ವಿಶೇಷ ಕೋರ್ಟ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. 112 ಎಂಬ ಪ್ಯಾನ್ ಇಂಡಿಯಾ ಸಹಾಯವಾಣಿ ಆರಂಭಿಸಲಾಗಿದೆ. ಆದರೆ ಹಲವು ರಾಜ್ಯಗಳಲ್ಲಿ ಇದು ಕಾರ್ಯ ನಿರ್ವಹಿಸುತ್ತಿಲ್ಲ.
ನಿರ್ಭಯಾ ಪ್ರಕರಣದ ಬಳಿಕ 2013ರಲ್ಲಿ ಕೇಂದ್ರ ಸರ್ಕಾರ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗೆ ಸಂಬಂದಪಟ್ಟ ಯೋಜನೆಗಳ ಅನುಷ್ಠಾನಕ್ಕೆ ನಿರ್ಭಯಾ ನಿಧಿ ಸ್ಥಾಪಿಸಿ 1813 ಕೋಟಿ ರೂ. ಮೀಸಲಿಟ್ಟಿತ್ತು. ಆದರೆ ಈ ಹಣದಲ್ಲಿ 91%ಗೂ ಹೆಚ್ಚು ಹಣ ಬಳಕೆಯೇ ಆಗಿಲ್ಲ. 2016-17ರಲ್ಲಿ, ವಿವಿಧ ಅಪರಾಧಗಳಿಗೆ ಬಲಿಯಾದವರಿಗೆ ವಿಶೇಷವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರಿಗೆ ಅಥವಾ ಅವರ ಕುಟುಂಬಕ್ಕೆ ನೆರವಾಗಲೆಂದು ಈ ಹಣವನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಾಗಿತ್ತು. ಆದರೆ 21 ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದೂ ಕೂಡ ಒಬ್ಬ ಸಂತ್ರಸ್ತೆಗೂ ಪರಿಹಾರ ಧನ ನೀಡಿಲ್ಲ. ಅಧಿಕೃತ ಮಾಹಿತಿ ಪ್ರಕಾರ ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನ ಸೇರಿ 11 ರಾಜ್ಯಗಳು ನಿರ್ಭಯಾ ನಿಧಿಗೆ ಮೀಸಲಿಟ್ಟಹಣದಲ್ಲಿ ಒಂದು ರು .ವನ್ನೂ ಬಳಕೆ ಮಾಡಿಕೊಂಡಿಲ್ಲ.
–ಸುಪ್ರೀತ ಚಕ್ಕೆರೆ
More Stories
“ಸ್ತ್ರೀ ಶಕ್ತಿ”
ಮನೆತನದ ಜೀವ ಮನುಜಕುಲದ ದೈವ
ಮಾನಿನಿಯ ಮನದ ಧ್ವನಿ