ಸತತ ಎರಡನೇ ಪಂದ್ಯದಲ್ಲೂ ಗೆದ್ದ ರಾಜಸ್ಥಾನ್ ರಾಯಲ್ಸ್

Team Newsnap
1 Min Read

ಇಂದು ದುಬೈನ ಶಾರ್ಜಾ ಕ್ರೀಡಾಂಗಣದಲ್ಲಿ ನಡೆದ ಐಪಿಲ್ 13ನೇ ಸರಣಿಯ 9ನೇ ಪಂದ್ಯದಲ್ಲಿ‌ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಅಭೂತಪೂರ್ವ ಜಯ ಸಾಧಿಸಿತು.

ಟಾಸ್‌ನಲ್ಲಿ ಜಯಗಳಿಸಿ‌ ಬೌಲಿಂಗ್ ಆಯ್ಕೆ ಮಾಡಿಕೊಂಡ ರಾಯಲ್ಸ್ ತಂಡ ಪಂದ್ಯದಲ್ಲಿಯೂ ಭರ್ಜರಿ‌ ಜಯ ಕಂಡಿತು. ಪಂಜಾಬ್ ಪರ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಮೈದಾನಕ್ಕೆ ಎಂಟ್ರಿ ಕೊಟ್ಟ ತಂಡದ ನಾಯಕ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್‌ ಅದ್ಭುತ ಆಟವನ್ನಾಡಿದರು. ಕೆ.ಎಲ್. ರಾಹುಲ್ ಅವರು 54 ಬಾಲ್‌ಗಳಲ್ಲಿ 69 ರನ್ ಗಳಿಸಿದರೆ ಮಯಾಂಕ್ ಅಗರ್ವಾಲ್ 50 ಬಾಲ್‌ಗಳಿಗೆ 106 ರನ್‌ ಗಳಿಸಿ ತಂಡದ ಮೊತ್ತವನ್ನು ಏರಿಸಿದರು. ಈ ಇಬ್ಬರೂ ಕನ್ನಡಿಗರ ಜೊತೆಯಾಟ ಅದ್ಭುತವಾಗಿತ್ತು. 20 ಓವರ್‌ಗಳಿಗೆ ತಂಡ 2 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತು.

ರಾಜಸ್ಥಾನ್ ರಾಯಲ್ಸ್ ತಂಡದ ಪರ ಬ್ಯಾಟಿಂಗ್ ಆರಂಭಿಸಿದ ತಮನಡದ ಉಪನಾಯಕ ಜೆ. ಬಟ್ಲರ್ ಕೇವಲ 4 ರನ್‌ಗಳಿಗೆ ಪೆವಿಲಿಯನ್ ಸೇರಿದಾಗ ಎಲ್ಲರಿಗೂ ನಿರಾಸೆಯಾಯ್ತು‌. ಆದರೆ ನಾಯಕ ಎಸ್. ಸ್ಮಿತ್ ಹಾಗೂ ಎಸ್. ಸ್ಯಾಮ್ಸನ್ ಜೋಡಿ ಮುಳುಗುತ್ತಿದ್ದ ತಂಡವನ್ನು ಎತ್ತಿ ಹಿಡಿದರು. ಎಸ್. ಸ್ಮಿತ್ 27 ಎಸೆತಗಳಲ್ಲಿ 50 ರನ್ ಗಳಿಸಿದರೆ ಎಸ್. ಸ್ಯಾಮ್ಸನ್ 42 ಎಸೆತಗಳಿಗೆ 85 ರನ್‌ಗಳ ಕೊಡುಗೆಯನ್ನು ತಂಡಕ್ಕೆ ನೀಡಿದರು. ಸುಮಾರು 15 ಓವರ್‌ಗಳ ವರೆಗೆ ಎಲ್ಲರೂ ರಾಯಲ್ಸ್ ಗೆಲ್ಲುವುದು ಅನುಮಾನ ಎಂಬ ಭಾವನೆಯಲ್ಲೇ ಇದ್ದರು. ಆಗ ಮೈದಾನಕ್ಕಿಳಿದ ತೇವಾಟಿಯಾ ಅವರು ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. 31 ಬಾಲ್‌ಗಳಿಗೆ 53 ರನ್ ಗಳಿಸಿ ತಂಡವನ್ನು ಗೆಲುವಿನ ದಂಡೆಯವರೆಗೂ ಮುಟ್ಟಿಸಿದ್ದು ಅವರೇ. ಆದರೆ ರಾಯಲ್ಸ್ ತಂಡ ಪಂಜಾಬ್ ತಂಡದ ಮಹಮದ್ ಶಮಿ ಅವರ ಬೌಲಿಂಗ್ ದಾಳಿಯನ್ನು ತೀವ್ರವಾಗಿ ಎದುರಿಸಬೇಕಾಯಿತು. ತಂಡ 19.3 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿ ವಿಜಯಮಾಲೆಯನ್ನು ತನ್ನ ಕೊರಳಿಗೆ ಹಾಕಿಕೊಂಡಿತು.

ಶಾರ್ಜಾ ಮೈದಾನವು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವರವಾಗಿ ಪರಿಣಮಿಸಿದ್ದು, ಸತತ ಎರಡನೇ ಬಾರಿ ಶಾರ್ಜಾ ಸ್ಟೇಡಿಯಮ್‌ನಲ್ಲೇ ಗೆಲುವು ಸಾಧಿಸಿ ಅಭಿಮಾನಿಗಳಲ್ಲಿ ಭರವಸೆ ಮೂಡಿಸಿತು.

Share This Article
Leave a comment