ಇಂದು ಅರಬ್ ದೇಶದಲ್ಲಿ ಐಪಿಎಲ್ ನ ೧೩ ನೇ ಸರಣಿಗೆ ಚಾಲನೆ ದೊರೆತಿದ್ದು, ಮೊದಲನೇ ಪಂದ್ಯ ಅಲ್ ಶೇಕ್ ಝಹೇದ್ ಕ್ರೀಡಾಂಗಣದಲ್ಲಿ ನಡೆಯಿತು. ಇಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾದವು. ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲುವಿನ ನಗೆ ಬೀರಿದರೆ, ಮುಂಬೈ ಇಂಡಿಯನ್ಸ್ ತಂಡವು ಮೊದಲ ಮೆಟ್ಟಿಲಲ್ಲೇ ಸೋಲಿನ ರುಚಿ ಅನುಭವಿಸಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ, ಫೀಲ್ಡಿಂಗ್ ನಲ್ಲಿ ತನ್ನ ಛಾಪನ್ನು ತೋರಿಸಿತು. ಬಿಗಿಯಾದ ಫೀಲ್ಡಿಂಗ್ ತಂತ್ರದಿಂದ ಮುಂಬೈ ರನ್ ಗಳಿಸಿಕೊಳ್ಳಲು ಹರಸಾಹಸಪಟ್ಟಿತು. ಆದರೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಕೇವಲ ೧೨ ರನ್ ಗಳಿಗೆ ಔಟಾಗುತ್ತಿದ್ದಂತೆ ಆಟದಲ್ಲಿ ಏನೂ ಸ್ವಾರಸ್ಯ ಉಳಿಯಲಿಲ್ಲ. ಎಲ್ಲರೂ ಒಬ್ಬರ ಹಿಂದೊಬ್ಬರಂತೆ ಔಟಾಗತೊಡಗಿದರು. ರವೀಂದ್ರ ಜಡೇಜಾ ಹಾಗೂ ಲುಂಗಿ ಎನ್ಗಿಡಿ ಅವರ ಬೌಲಿಂಗ್ ಮುಂಬೈ ತಂಡವನ್ನ ಕಕ್ಕಾಬಿಕ್ಕಿಗೊಳಿಸಿತು. ೧೯.೧ ಓವರ್ ಗಳಲ್ಲಿ ೯ ವಿಕೆಟ್ ನಷ್ಟಕ್ಕೆ ಒಟ್ಟು ೧೬೨ ರನ್ ಗಳಲ್ಲಿ ಮುಂಬೈ ಸಮಾಧಾನ ಪಟ್ಟುಕೊಳ್ಳಬೇಕಾಯಿತು.
ಇತ್ತ ಸಿ.ಎಸ್.ಕೆ ತುಂಬು ಉತ್ಸಾಹದಿಂದ ಬ್ಯಾಟಿಂಗ್ ಮಾಡಲು ಪ್ರಾರಂಭ ಮಾಡಿತು. ಆದರೆ ಓಪನರ್ ಬ್ಯಾಟ್ಸ್ ಮನ್ ಎಂ. ವಿಜಯ್ ಅವರು ಕೇವಲ ೧ ರನ್ ಔಟಾದಾಗ ತಂಡ ಆಘಾತವಾಯಿತು. ವಿಜಯ್ ಆಘಾತವನ್ನು ಮರೆಸಿದ್ದು ರಾಯುಡು ಮತ್ತು ಫ್ಲಾಫ್ ಡಿ ಪ್ಲೆಸ್ಸಿಸ್ ರ ಬ್ಯಾಟಿಂಗ್. ರಾಯುಡು ೭೧ (೪೮ ಬಾಲ್) ರನ್, ಹಾಗೂ ಫ್ಲಾಫ್ ಡು ಪ್ಲೆಸ್ಸಿಸ್ ೫೮ (೪೪ ಬಾಲ್) ರನ್ ಗಳಿಸಿ ತಂಡಕ್ಕೆ ದೊಡ್ಡ ಆಸರೆಯಾದರು. ೧೯.೨ ಓವರ್ ಗಳಲ್ಲಿ ೫ ವಿಕೆಟ್ ೧೬೬ ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಮೊದಲನೇ ದಿನದ ಪಂದ್ಯವೇ ಅತ್ಯಂತ ರೋಚಕವಾಗಿ, ಕ್ರಿಕೆಟ್ ಪ್ರೇಮಿಗಳ ಕುತೂಹಲವನ್ನು ಕೆರಳಿಸಿತು.