ಆಯುರ್ವೇದದ ಮೇಲಿನ ವಿಶ್ವಾಸಾರ್ಹತೆ ಹೆಚ್ಚುತ್ತಿದೆ: ಕೇಂದ್ರ ಸಚಿವ ಸೋನೋವಾಲ

Team Newsnap
1 Min Read

ಇತ್ತೀಚೆಗೆ ಆಯುರ್ವೇದದ ಮೇಲಿನ ವಿಶ್ವಾಸಾರ್ಹತೆ ಹೆಚ್ಚುತ್ತಿದೆ. ಜನರಿಗೆ ಈ ಪದ್ಧತಿ ಮೇಲೆ ನಂಬಿಕೆ ಬರುತ್ತಿದೆ ಎಂದು ಕೇಂದ್ರದ ಆಯುಷ್, ಬಂದರು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೋನೋವಾಲ ಹೇಳಿದರು.

ಉಡುಪಿಯ ಕುತ್ಪಾಡಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ರತ್ನಶ್ರೀ ಆರೋಗ್ಯಧಾಮ ಆಯುರ್ವೇದ ಆಸ್ಪತ್ರೆಯನ್ನು ಸಚಿವರು ಉದ್ಘಾಟಿಸಿ ಮಾತನಾಡಿದರು. ದೇಶದ ಯೋಗ, ಆಯುರ್ವೇದ, ನ್ಯಾಚುರೋಪತಿ ವಿಶ್ವಕ್ಕೆ ಮಾದರಿಯಾಗುತ್ತಿದೆ. ಆಯುರ್ವೇದ ಚಿಕಿತ್ಸೆಯನ್ನ ಮೈಗೂಡಿಸಿಕೊಂಡು ನವಭಾರತ ನಿರ್ಮಾಣಕ್ಕೆ ಮುಂದಾಗೋಣ. ಪ್ರಧಾನಿ ನರೇಂದ್ರ ಮೋದಿ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ ಎಂದು ನುಡಿದರು.


ಆಯುರ್ವೇದ ವೈದ್ಯ ಪದ್ಧತಿಯಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಕಳೆದ ಏಳು ವರ್ಷದಲ್ಲಿ ಆಯುಷ್ ಇಲಾಖೆ ಬಹಳ ವಿಸ್ತಾರವಾಗಿ ದೇಶದಾದ್ಯಂತ ಬೆಳೆದಿದೆ. ಎಲ್ಲ ರೋಗಗಳಿಗೆ ಈ ಪದ್ಧತಿಯ ಚಿಕಿತ್ಸೆ ಫಲಕಾರಿ. ಸಂಶೋಧನೆಗಳು, ಪ್ರಯೋಗಗಳು ಹೆಚ್ಚು ಹೆಚ್ಚು ನಡೆಯುತ್ತಿವೆ ಎಂದು ಕೇಂದ್ರ ಸಚಿವರು ವಿವರಿಸಿದರು.


ಮೋದಿ ಆಯುಷ್ ಇಲಾಖೆಗೆ ಶಕ್ತಿ ತುಂಬಿದ್ದಾರೆ.2014 ರ ನಂತರ ಆಯುಷ್ ಇಲಾಖೆ ದೇಶದೆಲ್ಲೆಡೆ ವಿಸ್ತಾರಗೊಂಡಿದೆ. ಆಯುರ್ವೇದ ವಿಷಯದಲ್ಲಿ ಎಸ್‌ಡಿಎಂ ಸಂಸ್ಥೆ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ರಘುಪತಿಭಟ್ಟ ಮತ್ತಿತರ ಪ್ರಮುಖರು ಇದ್ದರು.

Share This Article
Leave a comment