ಐದು ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ- ಶೀಘ್ರವೇ ಅಧಿಕೃತ ಆದೇಶ – ಸಿಎಂ ಸಿದ್ಧರಾಮಯ್ಯ

Team Newsnap
2 Min Read

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಿದ್ಧರಾಮಯ್ಯ , ಡಿಸಿಎಂ ಡಿಕೆ ಶಿವಕುಮಾರ್, 8 ಮಂದಿ ಸಚಿವರೊಂದಿಗೆ ಮೊದಲ ಸಚಿವ ಸಂಪುಟ ಸಭೆಯನ್ನು ನಡೆಸಿದರು. ಈ ಬಳಿಕ ಪ್ರಣಾಳಿಕೆಯಲ್ಲಿ ಘೋಷಿಸಿದ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ.

5 ಗ್ಯಾರಂಟಿ ಯೋಜನೆಗಳನ್ನು ತತ್ಷಣದ ಲೆಕ್ಕಾಚಾರದಂತೆ 50 ಸಾವಿರ ಕೋಟಿ ರೂಪಾಯಿಗಳು ಬೇಕಾಗುತ್ತದೆ. ನಮ್ಮ ರಾಜ್ಯದ ಬಜೆಟ್ 3 ಲಕ್ಷದ 10 ಸಾವಿರ ಕೋಟಿ ರೂಪಾಯಿಗಳು. ಪ್ರತಿ ವರ್ಷ ಹತ್ತು ಪರ್ಸೆಂಟ್ ಗಿಂತ ಹೆಚ್ಚಾಗಿ ಬಜೆಟ್ ನ ಗಾತ್ರ ಜಾಸ್ತಿ ಆಗುತ್ತಾ ಹೋಗುತ್ತದೆ. ಜೊತೆಗೆ ತೆರಿಗೆಯನ್ನು ಕಟ್ಟು ನಿಟ್ಟಾಗಿ ವಸೂಲಿ ಮಾಡುವುದರಿಂದ ಇನ್ನಷ್ಟು ಆದಾಯ ಹೆಚ್ಚಿಸಲು ಸಾಧ್ಯವಾಗುತ್ತದೆ. ಕೆಲವು ಇಲಾಖೆಗಳಲ್ಲಿ ತೆರಿಗೆ ಹೆಚ್ಚಾಗಿ ಮಾಡವುದಕ್ಕೆ ಆಗದಿದ್ದರೂ, ನಮ್ಮ ಟಾರ್ಗೆಟ್ ರೀಚ್ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.

ನಾವು ಪ್ರಮುಖವಾಗಿ ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಅನೇಕ ಭರವಸೆಗಳನ್ನು ಕೊಟ್ಟಿದ್ದೇವೆ. ಆ ಎಲ್ಲಾ ಭರವಸೆಗಳು ಒಂದೇ ವರ್ಷದಲ್ಲಿ ಈಡೇರಿಸುವಂತದ್ದಲ್ಲ. ಐದು ವರ್ಷದ ನಮ್ಮ ಸರ್ಕಾರದ ಅವಧಿಯಲ್ಲಿ ಈಡೇರಿಸುವಂತವುಗಳು. ಅವುಗಳಲ್ಲಿ ಪ್ರಮುಖವಾಗಿ ಐದು ಗ್ಯಾರಂಟಿಗಳನ್ನು ಜನರಿಗೆ ವಾಗ್ಧಾನಗಳ ರೂಪದಲ್ಲಿ ಕೊಟ್ಟಿದ್ದೆವು. ನಾವು ಜನತೆಗೆ ಅವುಗಳನ್ನು ಹೇಳುವಾಗ ನಾವು ಮೊದಲ ಸಚಿವ ಸಂಪುಟ ಸಭೆಯಲ್ಲೇ ಆ ಎಲ್ಲಾ ಗ್ಯಾರಂಟಿಗಳಿಗೆ ಸಚಿವ ಸಂಪುಟದಲ್ಲಿ ಒಪ್ಪಿಗೆಯನ್ನು ಪಡೆದು, ಅದಕ್ಕೆ ಸಂಬಂಧಪಟ್ಟಂತ ಆದೇಶವನ್ನು ಹೊರಡಿಸುವುದಾಗಿ ಹೇಳಿದ್ದೆವು ಎಂದರು.

  1. ಗೃಹ ಜ್ಯೋತಿ 200 ಯೂನಿಟ್ ವಿದ್ಯುತ್ ಫ್ರೀಯಾಗಿ ಕೊಡುತ್ತೇವೆ. ಅದು ಸುಮಾರು ಒಂದು ತಿಂಗಳಿಗೆ ಸುಮಾರು ಸಾವಿರದ ಇನ್ನೂರು ಕೋಟಿ ಆಗಬಹುದು.
  2. ಗೃಹ ಲಕ್ಷ್ಮೀ ಗ್ಯಾರಂಟಿಯಡಿ ಪ್ರತಿ ಮನೆಯ ಒಡತಿಗೆ 2000 ರೂಪಾಯಿಗಳನ್ನು ಅವರ ಅಕೌಂಟ್ ಗೆ ಪ್ರತಿ ತಿಂಗಳು ಹಾಕುತ್ತೇವೆ.
  3. ಅನ್ನಭಾಗ್ಯ ಸ್ಕೀಮ್. ನಾವು ಹಿಂದೆ 7 ಕೆಜಿ ಅಕ್ಕಿ ಕೊಡುತ್ತಿದ್ದೆವು. 10 ಕೆಜಿ ಮಾಡುತ್ತೇವೆ ಅಂತ ಹೇಳಿದ್ದೆವು.
  4. ಈ ವರ್ಷ ಯಾರು ಪದವೀಧರ ನಿರುದ್ಯೋಗಿ ಯುವಕರು ಇರುತ್ತಾರೆ ಅವರಿಗೆ ಎರಡು ವರ್ಷದವರೆಗೆ ತಿಂಗಳಿಗೆ 3,000 ಕೊಡುತ್ತೇವೆ ಎಂದು ಘೋಷಿಸಿದರು.ಡಿಪ್ಲೋಮಾ ಪಾಸ್ ಮಾಡಿದಂತ ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 1,500 ನೀಡುತ್ತೇವೆ.
  5. ಸರ್ಕಾರಿ ಬಸ್ಸಿನಲ್ಲಿ ಓಡಾಡುವಂತ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತದೆ. ಅದು ಕರ್ನಾಟಕದ ಮಹಿಳೆಯರಿಗೆ ಮಾತ್ರವಾಗಿದೆ. ಬೇರೆ ರಾಜ್ಯದ ಮಹಿಳೆಯರಿಗೆ ಇದು ಅನ್ವಯವಾಗುವುದಿಲ್ಲ.

ಎಷ್ಟೇ ದುಡ್ಡು ಆಗಲಿ ಈ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುತ್ತದೆ. ಮುಂದಿನ ಕ್ಯಾಬಿನೆಟ್ ವೇಳೆಗೆ ಜಾರಿಗೊಳಿಸಲಾಗುತ್ತದೆ ಎಂದು ಘೋಷಿಸಿದರು.

ಸೋಮವಾರ, ಮಂಗಳವಾರ, ಬುಧವಾರ ಮೂರು ದಿನ ಸಂಸತ್ ಅಧಿವೇಶನವನ್ನು ಕರೆಯಲಾಗುತ್ತಿದೆ. 24ನೇ ತಾರೀಕಿನ ಒಳಗಾಗಿ ಹೊಸ ಸಂಪುಟ ಅನುಮೋದನೆ ಪಡೆಯಲಾಗುತ್ತಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ಆದೇಶವನ್ನು ಹೊರಡಿಸಲಾಗುತ್ತದೆ ಎಂಬುದಾಗಿ ಘೋಷಿಸಿದರು.

Share This Article
Leave a comment