ನಿರ್ದೇಶಕ ಭಗವಾನ್ ನೆನಪಿನಂಗಳಲ್ಲಿ..…..

Team Newsnap
3 Min Read
In Memoirs of Director Bhagavan..….. ನಿರ್ದೇಶಕ ಭಗವಾನ್ ನೆನಪಿನಂಗಳಲ್ಲಿ..…..

ಸದಭಿರುಚಿಯ ಹತ್ತಾರು ಚಲನಚಿತ್ರಗಳನ್ನು ಕನ್ನಡಕ್ಕೆ ನೀಡಿದ ಎಸ್.ಕೆ.ಭಗವಾನ್ ನಿಧನದಿಂದ ಕನ್ನಡ ಚಿತ್ರರಂಗ ಹಳೆಯ ತಲೆಮಾರಿನ ಪ್ರಮುಖ ಕೊಂಡಿಯನ್ನು ಕಳಚಿಕೊಂಡಿದೆ.

ದೊರೆ-ಭಗವಾನ್ ನಿರ್ದೇಶನದ ಹತ್ತಾರು ಚಿತ್ರಗಳು ಕನ್ನಡಿಗರ ಮನೆ ಮನೆಯ ಕಥೆಗಳಾಗಿ ಛಾಪು ಬೀರಿದ್ದವು. ಅಶ್ಲೀಲತೆಯ ಸೋಂಕು ಇಲ್ಲದ ಪರಿಶುದ್ಧ ಮನರಂಜನೆಯ ಚಿತ್ರಗಳನ್ನು ನೀಡಿದ ನಿರ್ದೇಶಕರಲ್ಲಿ ಅಗ್ರಪಂಕ್ತಿಯಲ್ಲಿದ್ದ ನಿರ್ದೇಶಕರು.

24 ಕನ್ನಡದ ಕಾದಂಬರಿಗಳನ್ನು ಜನಪ್ರಿಯಗೊಳಿಸಿದ ಹೆಗ್ಗಳಿಕೆಯೂ ಇವರದು. ಭಗವಾನ್ ಅವರಿಗೆ ಅಶ್ರುತರ್ಪಣ, ವಿದಾಯದ ಜೊತೆಗೆ ಅವರ ಚಿತ್ರ ಪ್ರಪಂಚದ ನೆನಪುಗಳ ತುಣುಕು.ರೂಪ ವಿರುದ್ಧ ಕೇಸು ದಾಖಲಿಸಲು ನಿರ್ಧಾರ – ಸಿಂಧೂರಿ: ಆಕೆಯ ಕರ್ಮಗಳು ಬಿಡುವುದಿಲ್ಲ – ಕುಸುಮಾ

ದೊರೆ ಭಗವಾನ್ ಜೋಡಿ ನಿರ್ದೇಶಕರಲ್ಲಿ ಒಬ್ಬರಾದ ಎಸ್.ಕೆ.ಭಗವಾನ್ 1933ರ ಜುಲೈ 5ರಂದು ಮೈಸೂರಿನಲ್ಲಿ ಜನಿಸಿದರು. ಎಸ್.ಕೃಷ್ಣಯ್ಯಂಗಾರ್ ಇವರ ತಂದೆ. ಬ್ಯಾಂಕ್ ಅಕೌಂಟೆಂಟ್ ವೃತ್ತಿಯಲ್ಲಿದ್ದರು. ಬಾಲ್ಯದಲ್ಲಿಯೇ ಸಂಗೀತದ ಬಗ್ಗೆ ಆಸಕ್ತಿ. ಪ್ರೌಢಶಾಲೆ ಹಾಗೂ ಕಾಲೇಜು ವ್ಯಾಸಂಗ ಬೆಂಗಳೂರಿನಲ್ಲಿ ನಡೆಯಿತು. ಶಾಲಾ-ಕಾಲೇಜಿನಲ್ಲಿಯೇ ನಾಟಕದ ಬಗ್ಗೆ ಆಸಕ್ತರಾಗಿ ಸ್ತ್ರೀ ಪಾತ್ರಗಳನ್ನು ಮಾಡುತ್ತಿದ್ದರು. ಬೇರೆ ಬೇರೆ ನಾಟಕ ತಂಡಗಳು ನೀಡುತ್ತಿದ್ದ ನಾಟಕಗಳಿಂದ ಭಗವಾನ್ ಆಕರ್ಷಿತರಾದರು. ಹಿರಣಯ್ಯ ಮಿತ್ರ ಮಂಡಲಿಯಲ್ಲಿ ದೇವದಾಸಿ ನಾಟಕದ ವಿಮಲೆ ಪಾತ್ರ ಮಾಡಿದರು. ಕರ್ನಾಟಕ ನಾಟಕ ಸಭಾ ಕಂಪನಿ ಪ್ರದರ್ಶಿಸುತ್ತಿದ್ದ ವಿಶ್ವಾಮಿತ್ರ, ಗುಲೇಬಕಾವಲಿ ನಾಟಕಗಳಲ್ಲಿ ಸ್ತ್ರೀ ಪಾತ್ರಗಳನ್ನು ನಿರ್ವಹಿಸಿದರು.

ಚಲನಚಿತ್ರ ರಂಗದಿಂದ ಆಕರ್ಷಿತಗೊಂಡ ಭಗವಾನ್, ಜಿ.ವಿ.ಅಯ್ಯರ್, ಬಾಲಕೃಷ್ಣ, ನರಸಿಂಹರಾಜು ಪರಿಚಯ ಮಾಡಿಕೊಂಡರು. ಜಿ.ವಿ.ಅಯ್ಯರ್, ಬಾಲಕೃಷ್ಣ ನಾಟಕಗಳಿಗೆ ಬರವಣಿಗೆಯಲ್ಲಿ ಸಹಾಯಕರಾಗಿ ಕೆಲಸ ಮಾಡಿದರು.

ಸಿನಿಮಾ ರೆಪ್ರೆಸೆಂಟೇಟಿವ್ ಆಗಿ ರಾಜ್ಯವಿಡಿ ಸುತ್ತಿದರು. ಭಾಗ್ಯೋದಯ (1956) ಚಿತ್ರಕ್ಕಾಗಿ ಕಣಗಾಲ್ ಪ್ರಭಾಕರ್ ಶಾಸ್ತ್ರಿಗಳ ಚಿತ್ರ ಸಾಹಿತ್ಯ ರಚಿಸುವಾಗ ಭಗವಾನ್ ಅವರಿಗೆ ಸಹಾಯಕರಾಗಿ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಭಗವಾನ್ ಅವರಿಗೆ ದೊರೈರಾಜ್ ಪರಿಚಯವಾಯಿತು. ದೊರೈರಾಜ್ ತಮ್ಮ ಛಾಯಾಗ್ರಹಣದ ಜಗಜ್ಯೋತಿ ಬಸವೇಶ್ವರ ಚಿತ್ರಕ್ಕೆ ಭಗವಾನ್ ಅವರನ್ನು ಸಹಾಯಕ ನಿರ್ದೆಶಕರನ್ನಾಗಿ ನೇಮಿಸಿಕೊಳ್ಳಲು ಶಿಫಾರಸ್ಸು ಮಾಡಿದರು. ಹೀಗೆ ದೊರೈರಾಜ್-ಭಗವಾನ್ ಒಂದಾದರು.

ಮೊದಲು ಭಗವಾನ್ ಅವರು ಎಸ್.ಸಿ.ನರಸಿಂಹಮೂರ್ತಿಯವರೊಂದಿಗೆ ಸಂಧ್ಯಾರಾಗ (1966) ಚಿತ್ರ ನಿರ್ದೇಶಿಸಿದರು. ಅನಂತರ ಇದೇ ಜೋಡಿ ರಾಜದುರ್ಗದ ರಹಸ್ಯ ಚಿತ್ರವನ್ನು ನಿರ್ದೇಶಿಸಿತು. ಕನ್ನಡಕ್ಕೆ ಬಾಂಡ್ ಶೈಲಿಯ ಚಿತ್ರಗಳನ್ನು ಪರಿಚಯಿಸಿದವರಲ್ಲಿ ನಿರ್ದೇಶಕ ದೊರೈ-ಭಗವಾನ್ ಜೋಡಿ ಮೊದಲಿಗರು. ಈ ಇಬ್ಬರೂ ಸೇರಿ ನಿರ್ದೇಶಿಸಿದ ಮೊದಲ ಚಿತ್ರ ಜೇಡರ ಬಲೆ (1965) ಚಿತ್ರದಲ್ಲಿ ರಾಜಕುಮಾರ್-ಜಯಂತಿ ಪ್ರಮುಖ ಪಾತ್ರದಲ್ಲಿದ್ದರು.

ಗೋವಾದಲ್ಲಿ ಸಿಐಡಿ 999 (1968), ಆಪರೇಷನ್ ಜಾಕ್‌ಪಾಟ್‌ನಲ್ಲಿ ಸಿಐಡಿ 999 (1969) ಚಿತ್ರಗಳನ್ನು ಈ ಜೋಡಿ ನಿರ್ದೇಶಿಸಿದರು. ಕಸ್ತೂರಿ ನಿವಾಸ, ಎರಡು ಕನಸು, ಬಯಲುದಾರಿ, ಗಾಳಿಮಾತು, ಚಂದನದ ಗೊಂಬೆ, ಹೊಸಬೆಳಕು, ಬೆಂಕಿಯ ಬಲೆ, ಸಮಯದ ಗೊಂಬೆ, ಯಾರಿವನು?, ಗಗನ, ನೀನು ನಕ್ಕರೆ ಹಾಲು ಸಕ್ಕರೆ, ಜೀವನ ಚೈತ್ರ ಮುಂತಾದವು ಭಗವಾನ್ ಅವರು ದೊರೈ ಅವರೊಂದಿಗೆ ನಿರ್ದೇಶಿಸಿದ ಪ್ರಮುಖ ಚಿತ್ರಗಳು.

ಮಾಂಗಲ್ಯ ಬಂಧನ (1993) ಭಗವಾನ್ ಒಬ್ಬರೇ ನಿರ್ದೇಶಿಸಿರುವ ಚಿತ್ರ. ಇವರು ನಿರ್ದೇಶಿಸಿದ ಮುನಿಯನ ಮಾದರಿ (1981-82) ಹಾಗೂ ಜೀವನ ಚೈತ್ರ (1992-93) ಚಿತ್ರಗಳು ರಾಜ್ಯ ಸರ್ಕಾರದಿಂದ ಪ್ರಶಸ್ತಿಗೆ ಪುರಸ್ಕೃತವಾಗಿವೆ. ರಾಜಕುಮಾರ್ ಅಭಿನಯದ ಹಲವು ಸದಭಿರುಚಿಯ ಚಿತ್ರಗಳು ಹಾಗೂ ಕಾದಂಬರಿ ಆಧರಿಸಿದ ಚಿತ್ರಗಳನ್ನು ನಿರ್ದೇಶಿಸಿದ ಕೀರ್ತಿ ಇವರದು. ನಿರ್ದೇಶನ ಮಾಡಿರುವ ಸುಮಾರು 40 ಚಿತ್ರಗಳಲ್ಲಿ 30 ಚಿತ್ರಗಳು ಕಾದಂಬರಿ ಆಧರಿಸಿದ ಚಿತ್ರಗಳಾಗಿವೆ. ಆದರ್ಶ ಚಲನಚಿತ್ರ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. 1995-96ನೆ ಸಾಲಿನಲ್ಲಿ ಪ್ರತಿಷ್ಠಿತ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ದೊರೈರಾಜ್ ಅವರೊಂದಿಗೆ ಹಂಚಿಕೊಂಡಿದ್ದಾರೆ. 2010ರಲ್ಲಿ ರಾಜಕುಮಾರ್ ಸೌಹಾರ್ದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

– ಅ ನಾ ಪ್ರಹ್ಲಾದ್ ರಾವ್

Share This Article
Leave a comment