ನಾನು ಜೀವನದಲ್ಲೇ ಅನುಶ್ರೀ ಭೇಟಿಯಾಗಿಲ್ಲ – ಕುಮಾರಸ್ವಾಮಿ

Team Newsnap
1 Min Read

ನಾನು ಜೀವನದಲ್ಲೇ ಅನುಶ್ರೀಯನ್ನು ಭೇಟಿಯಾಗಿಲ್ಲ. ಆದರೂ ಮಾಜಿ ಸಿಎಂ ಆಕೆಯ ರಕ್ಷಣೆ ಮಾಡುತ್ತಿದ್ದಾರೆಂದು ನನ್ನ ಕಡೆ ಬೊಟ್ಟು ಮಾಡಿ ತೋರಿಸುವವರ ವಿರುದ್ಧ ಎಚ್ ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಡ್ರಗ್ ಪ್ರಕರಣದಲ್ಲಿ ತನಗೆ ಸಿಸಿಬಿ ನೋಟೀಸ್ ನೀಡುತ್ತಿದ್ದಂತೆಯೇ ನಿರೂಪಕಿ ಅನುಶ್ರೀ ಮಾಜಿ ಸಿಎಂ ಓರ್ವರಿಗೆ ಕರೆ ಮಾಡಿದ್ದರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಎಚ್.ಡಿ.ಕುಮಾರ ಸ್ವಾಮಿ, ಆ ಮಾಜಿ ಸಿಎಂ ಯಾರು ಎಂಬುದನ್ನು ಬಹಿರಂಗಪಡಿಸಲಿ, ಸತ್ಯಾಸತ್ಯತೆ ಹೊರಬರಲಿ ಎಂದು ಒತ್ತಾಯಿಸಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಡ್ರಗ್ಸ್ ಪ್ರಕರಣದಲ್ಲಿ ನಿರೂಪಕಿ ಅನುಶ್ರೀ ಪರ ಮಾಜಿ ಸಿಎಂ ಒಬ್ಬರು ಸಿಸಿಬಿ ತನಿಖೆ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈ ಮೂಲಕ ಅನುಶ್ರೀ ರಕ್ಷಣೆಯಾಗಿದೆ ಎಂದು ಹೇಳಲಾಗುತ್ತಿದೆ. ಅದು ಯಾರು ಎನ್ನುವುದು ಬಹಿರಂಗವಾಗಬೇಕು ಎಂದಿದ್ದಾರೆ.

ರಾಜ್ಯದಲ್ಲಿ ನಾನೂ ಸೇರಿದಂತೆ 6 ಜನ ಮಾಜಿ ಸಿಎಂಗಳಿದ್ದಾರೆ. ಯಾವ ಮಾಜಿ ಸಿಎಂ ಡ್ರಗ್ಸ್ ಪ್ರಕರಣದ ತನಿಖೆಯಾಗದಂತೆ ಒತ್ತಡ ಹೇರುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದಿದ್ದಾರೆ.

ಡ್ರಗ್ಸ್ ಕೇಸ್ ಹಳ್ಳ ಹಿಡಿಯುತ್ತಿದೆ ಎಂದು ನಾನು ಈ ಮೊದಲೇ ಹೇಳಿದ್ದೆ. ಆಕೆಯನ್ನು ಜೀವನದಲ್ಲಿ ಇದುವರೆಗೂ ಭೇಟಿಯಾಗಿಲ್ಲ. ಯಾವ ಮಾಜಿ ಸಿಎಂ ತನಿಖೆ ಮೇಲೆ ಒತ್ತಡ ಹಾಕಿದ್ದಾರೆ ಎಂಬುದನ್ನು ಹೇಳಲಿ. ಅನುಶ್ರೀ ಕಾಲ್ ಲಿಸ್ಟ್ ನಲ್ಲಿ 2 ಬಾರಿ ಮಾಜಿ ಸಿಎಂ ಆದವರು ಎಂದು ಬರುತ್ತಿದೆ ಎನ್ನುತ್ತಿದ್ದಾರೆ. ನಾನು ಕೂಡ ಎರಡು ಬಾರಿ ಸಿಎಂ ಆದವನು. ಜನರು ನಮ್ಮನ್ನು ಕೆಟ್ಟ ಮನೋಭಾವದಿಂದ ನೋಡುವಂತಾಗಿದೆ. ಸತ್ಯಾಸತ್ಯತೆ ಹೊರಬರಲಿ ಎಂದು ಆಗ್ರಹಿಸಿದರು.

ನನಗೆ ಅನುಶ್ರೀ ಬಗ್ಗೆ ಗೊತ್ತಿಲ್ಲ. ಮಾಜಿ ಸಿಎಂ ಅನುಶ್ರೀ ರಕ್ಷಿಸುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಧಿಕಾರಿ ಯಾರು ? ಒಂದು ವೇಳೆ ಇದು ಮಾಧ್ಯಮಗಳ ಕಪೋಲಕಲ್ಪಿತವಾಗಿದ್ದರೆ ಸರ್ಕಾರ ಮಾಧ್ಯಮಗಳ ಮೇಲೆ ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದಾರೆ.

Share This Article
Leave a comment