ಬೆಂಗಳೂರು, ಮೈಸೂರು, ಮಂಡ್ಯ ಸೇರದಂತೆ ಹಲವು ಜಿಲ್ಲೆಯಲ್ಲಿ ಭಾರಿ ಮಳೆ – ಅವಾಂತರ

Team Newsnap
2 Min Read

ಬೆಂಗಳೂರು :
ಹಿಂಗಾರು ಮಳೆ ರಾಜ್ಯದಲ್ಲಿ ಅಬ್ಬರಿಸಿದೆ. ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರು, ಮೈಸೂರು ಮಂಡ್ಯ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಅವಾಂತರ ಸೃಷ್ಠಿಯಾಗಿದೆ.

ಮೈಸೂರು, ಮಂಡ್ಯ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ . ಮಂಡ್ಯದ ಸಮೀಪದ ಹುಲ್ಲುಕೆರೆ ಸುರಂಗ ಮಾರ್ಗದ ನಾಲೆ ಮಣ್ಣು ಕುಸಿದಿದೆ.

ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಹಿಂಗಾರು ಬಿತ್ತನೆಗೆ ರೈತರು ಒಲವು ತೋರಿದ್ದಾರೆ.

ಬೆಂಗಳೂರು ವರದಿ

  • ಬೆಂಗಳೂರು ರಸ್ತೆಯಲ್ಲಿ ನುಗ್ಗಿದ ಡ್ರೈನೇಜ್‌ ನೀರು ವಾಹನ ಸವಾರರ ಪರದಾಟ
  • ಮಳೆಯಿಂದಾಗಿ ಕೆರೆಯಂತಾದ ಶ್ರೀರಾಂಪುರ ಅಂಡರ್ ಪಾಸ್
  • ಮಲ್ಲೇಶ್ವರಂ, ಶಾಂತಿನಗರ, ವಿಜಯನಗರ ಸೇರಿ ಹಲವೆಡೆ ಮಳೆ


ಬೆಂಗಳೂರಿನಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ.

ಮಲ್ಲೇಶ್ವರಂ, ಶಾಂತಿನಗರ, ಮೈಸೂರು ಬ್ಯಾಂಕ್, ಟೌನ್ ಹಾಲ್, ವಿಜಯನಗರ, ರಾಜಾಜಿನಗರ ಸೇರಿ ಹಲವೆಡೆ ಧಾರಕಾರ ಮಳೆಯಾಗಿದೆ. ಇತ್ತ ಭಾರೀ ಮಳೆಗೆ ಕುರುಬರ ಹಳ್ಳಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಒಂದು ಗಂಟೆಯಲ್ಲೇ ತಗ್ಗು ಪ್ರದೇಶಗಳು ಜಲಾವೃತವಾಗಿವೆ.

ಬಾಣಸವಾಡಿ ಬಳಿಯ ಲಿಂಗರಾಜಪುರಂ ಫ್ಲೈ ಓವರ್ ಕೆಳಗಿನ ಅಂಡರ್ ಪಾಸ್ ಹಾಗೂ ಶ್ರೀರಾಂಪುರ ಅಂಡರ್ ಪಾಸ್ ಸಂಪೂರ್ಣ ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು. ಬಳಿಕ ಧಾರಾಕಾರವಾಗಿ ಮಳೆ ಸುರಿದಿದೆ. ಧಾರಾಕಾರವಾಗಿ ಸುರಿದ ಭಾರೀ ಮಳೆಗೆ ಹಲವೆಡೆ ಮರಗಳು ಧರೆಗುರುಳಿವೆ. ನಗರದ ಪೂರ್ವವಲಯದಲ್ಲಿ 1 ಮರ, ಮಹದೇವಪುರ ವಲಯದಲ್ಲಿ ಒಂದು ಮರ, ಹಾಗೂ ಬೆಂಗಳೂರು ದಕ್ಷಿಣದಲ್ಲಿ ಎರಡು ಮರಗಳು ಧರೆಗುರುಳಿವೆ. ನಗರದ ಏಳು ವಲಯಗಳ ಪೈಕಿ 18 ಕಡೆ ಡ್ರೈನೇಜ್ ನೀರು ರಸ್ತೆಗೆ ಬಂದಿದ್ದು ವಾಹನ ಸವಾರರು ಪರದಾಡುವಂತಾಗಿದೆ.

ಎಲ್ಲಿ ಎಷ್ಟು ಮಳೆ ? :

ಜಕ್ಕೂರಿನಲ್ಲಿ 113.50 ಮಿಲಿಮೀಟರ್ ಮಳೆಯಾಗಿದೆ. ಹಂಪಿನಗರದಲ್ಲಿ 86 ಮಿಲಿಮೀಟರ್, ನಾಗಪುರದಲ್ಲಿ 82.50 ಮಿಲಿಮೀಟರ್, ನಂದಿನಿ ಲೇಔಟ್ ನಲ್ಲಿ 70.60, ವಿಶ್ವನಾಥ್ ನಾಗೇನಹಳ್ಳಿಯಲ್ಲಿ 71 ಮಿಲಿಮೀಟರ್, ರಾಜಮಹಲ್ ಗುಟ್ಟಹಳ್ಳಿಯಲ್ಲಿ 69.50 ಮಿಲಿಮೀಟರ್, ಗಾಳಿ ಆಂಜನೇಯ ದೇವಸ್ಥಾನ ಬಳಿ 68 ಮಿಲಿಮೀಟರ್, ಕೊಟ್ಟಿಗೆಪಾಳ್ಯದಲ್ಲಿ 64 ಹಾಗೂ ಅಗ್ರಹಾರ ದಾಸರಹಳ್ಳಿಯಲ್ಲಿ 64 ಮಿಲಿಮೀಟರ್ ಮಳೆ ಸುರಿದಿದೆ.

Share This Article
Leave a comment