ಆಭರಣದ ಅಂಗಡಿಗೆ ಬಂಗಾರ ಕೊಳ್ಳುವ ನೆಪದಲ್ಲಿ ನುಗ್ಗಿ, ಮಾಲೀಕನ ಕೈಕಾಲು ಕಟ್ಟಿಹಾಕಿ ಮೂರುವರೆ ಕೆಜಿಯಷ್ಟು ಬಂಗಾರವನ್ನು ದೋಚಿದ ಘಟನೆ ಬೆಂಗಳೂರಿನ ಬಿಇಲ್ ಸರ್ಕಲ್ ಬಳಿಯ ಎಂಇಎಸ್ ರಸ್ತೆಯಲ್ಲಿನ ವಿನೋದ ಬ್ಯಾಂಕರ್ಸ್ ಅಂಡ್ ಜ್ಯುವೆಲರ್ಸ್ ಆಭರಣದಂಗಡಿಯಲ್ಲಿ ನಡೆದಿದೆ.
ಅಂಗಡಿಗೆ ಯಾರೂ ಇಲ್ಲದ ಹೊತ್ತಿನಲ್ಲಿ ಆಭರಣ ಕೊಳ್ಳುವ ಸೋಗುಹಾಕಿಕೊಂಡು ಅಂಗಡಿಗೆ ಬಂದಿರುವ ಕಳ್ಳರು ಮೊದಲಿಗೆ ಚಿನ್ನದ ಸರವನ್ನು ಕೇಳಿದ್ದಾರೆ. ನಂತರ ಚಿನ್ನದ ಸರ ಬೇಡ, ಉಂಗುರ ತೋರಿಸಿ ಎಂದು ಕೇಳಿದ್ದಕ್ಕೆ, ಅಂಗಡಿಯ ಮಾಲೀಕ ಉಂಗುರ ತರಲು ಒಳಗಡೆ ಕೋಣೆಗೆ ಹೋಗಿದ್ದಾರೆ. ಮಾಲೀಕನನ್ನು ಹಿಂಬಾಲಿಸಿದ ದುಷ್ಕರ್ಮಿಗಳು ಪಿಸ್ತೂಲ್ ತೋರಿಸಿ ಆತನ ಕೈಕಾಲು ಕಟ್ಟಿಹಾಕಿ ಸುಮಾರು ೧ ಕೋಟಿ ಮೌಲ್ಯದ ಮೂರುವರೆ ಕೆಜಿ ಬಂಗಾರವನ್ನು ಕದ್ದಿದ್ದಾರೆ.
ಸ್ವಲ್ಪ ಹೊತ್ತಿನ ನಂತರ ಕಟ್ಟಿದ್ದ ಹಗ್ಗವನ್ನು ಬಿಡಿಸಿಕೊಂಡ ಮಾಲೀಕರು ಪೋಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಜಾಲಹಳ್ಳಿ ಠಾಣೆಯ ಪೋಲೀಸರು ದೂರು, ಸಿಸಿಟಿವಿ ಫೂಟೇಜ್ ಪಡೆದು ತನಿಖೆ ಆರಂಭಿಸಿದ್ದಾರೆ.