ಮಂಡ್ಯ ಜಿಲ್ಲೆಯ ಅಪರೂಪದ ರಾಜಕಾರಣಿ, ಅಜಾತಶತ್ರು ಮಾಜಿ ಸಚಿವ ನಾಗಮಂಗಲದ ಎಚ್ ಟಿ ಕೃಷ್ಣಫ್ಪ (93) ಅವರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.
ಕೃಷ್ಣಪ್ಪನವರ ನಿಧನದಿಂದ ಅಪರೂಪದ, ಪ್ರಾಮಾಣಿಕ ರಾಜಕಾರಣದ ಕೊಂಡಿಯೊಂದು ಕಳಚಿದಂತಾಗಿದೆ.
ಕೃಷ್ಣಪ್ಪ ಅವರು ಪುತ್ರ ಸೇರಿದಂತೆ ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ. ಶುಕ್ರವಾರ ಮಧ್ಯಾಹ್ನ 12 30 ರ ವೇಳೆ ಪಾರ್ಥಿವ ಶರೀರವನ್ನು ನಾಗಮಂಗಲ ಕ್ಕೆ ತಂದು ಸಾರ್ವಜನಿಕ ದರ್ಶನದ ನಂತರ ನಾಗಮಂಗಲದ ಅವರ ತೋಟದ ಮನೆಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ಹೇಳಿವೆ.
ನಾಗಮಂಗಲ ವಿಧಾನ ಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದರು. ಎರಡು ಬಾರಿ ಮಂತ್ರಿಗಳಾಗಿ ಸೇವಾ ಸಲ್ಲಿಸಿದ್ದರು.
ಅತ್ಯಂತ ಶಿಸ್ತು ಪ್ರಾಮಾಣಿಕತೆ ರಾಜಕಾರಣಿಯಾಗಿ ಪ್ರಸಿದ್ಧ ರಾಗಿದ್ದ ಕೃಷ್ಣಪ್ಪ ನವರು, ತತ್ವ ಸಿದ್ದಾಂತ ಬಿಟ್ಟು ಹೊರ ಬಂದವರೇ ಅಲ್ಲ. ಕಳೆದ ಎರಡು ದಶಕಗಳಿಂದ ಕಲುಷಿತಗೊಂಡಿರುವ ಈ ರಾಜಕಾರಣದಿಂದ ದೂರ ಉಳಿದಿದ್ದರು.
ರಾಮಕೃಷ್ಣ ಹೆಗಡೆ ಅಬ್ದುಲ್ ನಸೀರ್ ಸಾಬ್ , ನಂಜೇಗೌಡರು ಸೇರಿದಂತೆ ಸಾಕಷ್ಟು ಪ್ರಬುದ್ಧ ರಾಜಕಾರಣಿ ಗಳ ನಿರಂತರ ಒಡನಾಟ ಇಟ್ಟುಕೊಂಡು ಸಿದ್ದಾಂತ ದಲ್ಲೇ ರಾಜಕಾರಣ ಮಾಡಿದ ಜಿಲ್ಲೆಯ ಅಪರೂಪದ ರಾಜಕಾರಣಿ.
ಕೃಷ್ಣಪ್ಪನವರ ನಿಧನಕ್ಕೆ ಮಾಜಿ ಮಂತ್ರಿ ಎನ್ ಚಲುವರಾಯಸ್ವಾಮಿ, ಮಾಜಿ ಸಂಸದ ಶಿವರಾಮೇಗೌಡ , ಶಾಸಕ ಸುರೇಶ್ ಗೌಡ, ತೂಬಿನಕೆರೆ ಜವರೇಗೌಡ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.