ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆತ್ಮನಿರ್ಭರ್ ಭಾರತ 3.0 ಯೋಜನೆಯಡಿ ಗುರುವಾರ ಬೃಹತ್ ಪ್ಯಾಕೇಜ್ ಘೋಷಿಸಿದ್ದಾರೆ.
ಕೊರೊನಾ ಲಾಕ್ಡೌನ್ ನಂತರ ಕೆಲಸ ಕಳೆದುಕೊಂಡ ದೇಶದ ಲಕ್ಷಾಂತರ ಉದ್ಯೋಗಿಗಳಿಗೆ ದೀಪಾವಳಿ ಗಿಫ್ಟ್ ನೀಡಿದ್ದಾರೆ.
ಉದ್ಯೋಗ ಕಡಿತದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ನೌಕರರ ನೆರವಿಗೆ ಕೇಂದ್ರ ಸರಕಾರ ಧಾವಿಸಿದೆ.
ಕಳೆದ ಮಾರ್ಚ್ ನಿಂದ ಸೆಪ್ಟೆಂಬರ್ ವರೆಗೆ ಉದ್ಯೋಗ ಕಳೆದುಕೊಂಡ ನೌಕರರಿಗೆ, ಪಿಎಫ್ ಮೊತ್ತವನ್ನು ಕೇಂದ್ರ ಸರಕಾರವೇ ಭರಿಸುವುದಾಗಿ ಘೋಷಿಸಿದೆ. ಈ ಮೂಲಕ ಉದ್ಯೋಗ ಕಳೆದು ಕೊಂಡವರಿಗೆ ಗುಡ್ ನ್ಯೂಸ್ ನೀಡಿದೆ.
ಹೊಸದಿಲ್ಲಿಯಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್ ಆತ್ಮನಿರ್ಭರ್ ಭಾರತ್-3.0 ಯೋಜನೆಯಡಿ ಬೃಹತ್ ಪ್ಯಾಕೇಜ್ ಘೋಷಿಸಿದರು. ಪ್ಯಾಕೇಜ್ ಭಾಗವಾಗಿ ಉದ್ಯೋಗ ಕಳೆದು ಕೊಂಡಿರುವವರಿಗೆ ಪಿಎಫ್ ಹಣ ಪಾವತಿಸುವುದಾಗಿ ಘೋಷಿಸಿದ್ದಾರೆ.
ಇ ಪಿ ಎಫ್ಓನಲ್ಲಿ ರಿಜಿಸ್ಟರ್ ಆಗಿರುವ ಕಂಪನಿಯ ಹೊಸ ಉದ್ಯೋಗಿಗಳಿಗೆ ಪಿಎಫ್ ಸಬ್ಸಿಡಿಯನ್ನು ಘೋಷಿಸಿದ ಅವರು, ಒಂದು ಸಾವಿರ ಅಥವಾ ಅದಕ್ಕಿಂತ ಕಡಿಮೆ ನೌಕರರಿರುವ ಕಂಪನಿಗಳಿಗೆ ಮುಂದಿನ 2 ವರ್ಷಗಳ ಕಾಲ ಪಿಎಫ್ ಸಬ್ಸಿಡಿ ಸಿಗಲಿದೆ. ವೇತನದ ಶೇ.12ರಷ್ಟು ಪಿಎಫ್ ಹಣವನ್ನು ಕಂಪನಿ ಭರಿಸಿದರೆ, ಶೇ.12ರಷ್ಟು ಹಣವನ್ನು ಕೇಂದ್ರ ಸರಕಾರವೇ ಭರಿಸಲಿದೆ ಎಂದು ಘೋಷಿಸಿದ್ದಾರೆ