ಸರ್ಕಾರದ ಸಚಿವಾಲಯದ ನೌಕರರ ಸಂಘ ಮೇ 27ರಂದು ಸಚಿವಾಲಯ ಬಂದ್ಗೆ ಕರೆ ನೀಡಿದೆ. ಹೀಗಾಗಿ ಒಂದು ದಿನದ ಮಟ್ಟಿಗೆ ವಿಧಾನಸೌಧದಲ್ಲಿ ಕೆಲಸಗಳು ಸ್ಥಗಿತಗೊಳ್ಳುವ ನಿರೀಕ್ಷೆ ಇದೆ.
ಸಚಿವಾಲಯದ 542 ಕಿರಿಯ ಸಹಾಯಕ ಹುದ್ದೆಗಳನ್ನು ಕಡಿತಗೊಳಿಸುವ ಪ್ರಸ್ತಾವನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 27ರ ಶುಕ್ರವಾರ ಸಚಿವಾಲಯ ಬಂದ್ಗೆ ನಿರ್ಧರಿಸಲಾಗಿದೆ.
ಕರ್ನಾಟಕ ಸರ್ಕಾರದ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಪಿ. ಗುರುಸ್ವಾಮಿ ಈ ಕುರಿತು ಮಾಹಿತಿ ನೀಡಿದ್ದಾರೆ.ಆಡಳಿತ ಸುಧಾರಣೆ ನೆಪದಲ್ಲಿ ಸಚಿವಾಲಯದ ಹಲವು ಶಾಖೆಗಳನ್ನು ವಿಲೀನ ಅಥವಾ ರದ್ದುಗೊಳಿಸಲು ಸರ್ಕಾರ ಮುಂದಾಗಿದೆ ಎಂದು ಹೇಳಿದ್ದಾರೆ.
ನೌಕರರ ಬೇಡಿಕೆಗಳು
- ನಿವೃತ್ತಿಯಾದ ಅಧಿಕಾರಿ, ನೌಕರರ ಮರು ನೇಮಕಾತಿ ರದ್ದು ಮಾಡಬೇಕು
- 542 ಕಿರಿಯ ಸಹಾಯಕರ ಹುದ್ದೆಗಳ ಕಡಿತ ಪ್ರಸ್ತಾವನೆ ಕೈಬಿಡಬೇಕು
- ಸಚಿವಾಲಯದ ಅಧಿಕಾರಿಗಳು ನಿಯೋಜನೆ ಮೇರೆಗೆ ಇತರ ಇಲಾಖೆಗೆ ಹೋಗುವ ಅವಕಾಶ ನೀಡಬೇಕು
- ಯಾವುದೇ ಹುದ್ದೆಗಳ ಕಡಿತ ಪ್ರಸ್ತಾವನೆಗಳನ್ನು ಕೈಬಿಡಬೇಕು
ಈ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದರೆ ಸ್ಪಂದಿಸದ ಹಿನ್ನಲೆಯಲ್ಲಿ ಸಚಿವಾಲಯ ಬಂದ್ ಮಾಡಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಪಿ. ಗುರುಸ್ವಾಮಿ ಹೇಳಿದ್ದಾರೆ.
ಇದನ್ನು ಓದಿ : ಮಂಗಳ ಮುಖಿ ಸರ್ಕಾರ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಬೇಸರ
ವಿಧಾನಸೌಧ ರಾಜ್ಯದ ಆಡಳಿತದ ಶಕ್ತಿಕೇಂದ್ರ ಪ್ರತಿದಿನ ಇಲ್ಲಿಗೆ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ರಾಜ್ಯದ ಮೂಲೆಮೂಲೆಯಿಂದ ಜನರು ಆಗಮಿಸುತ್ತಾರೆ. ಶುಕ್ರವಾರ ನೌಕರರು ಬಂದ್ ಕರೆ ನೀಡಿರುವುದರಿಂದ ವಿಧಾನಸೌಧದ ಕೆಲಸಗಳು ಒಂದು ದಿನದ ಮಟ್ಟಿಗೆ ಸ್ಥಗಿತಗೊಳ್ಳುವ ನಿರೀಕ್ಷೆ ಇದೆ.