ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಭಾನುವಾರ ಮೈಸೂರಿನ ಮಕ್ಕಳ ಕೂಟ ಆಸ್ಪತ್ರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್ ಅವರು, ಭಾರತದಲ್ಲಿರುವ ಶೇ.18 ರಿಂದ 19 ರಷ್ಟು ಮಕ್ಕಳಿಗೆ ಪಲ್ಸ್ ಪೋಲಿಯೋ ವನ್ನು ಬೆಳಿಗ್ಗೆಯಿಂದ ಸಂಜೆಯವರೆಗೂ ಹಾಕುವ ಕಾರ್ಯಕ್ರಮ ಆರಂಭವಾಗಿದೆ. ಮೈಸೂರು ಜಿಲ್ಲೆಯಲ್ಲಿರುವ 5 ವರ್ಷದೊಳಗಿನ 2,44,067 ಮಕ್ಕಳಿಗಾಗಿ ಮೈಸೂರು ಜಿಲ್ಲೆಯಲ್ಲಿ 1665 ಬೂತ್ ಗಳನ್ನು ತೆರೆದು ಅವರಿಗೆ ಪೋಲಿಯೋ ನೀಡುವ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದರು.
ಭಾರತವು ವಿಶ್ವದಲ್ಲೆ ಪೋಲಿಯೋ ಮುಕ್ತ ರಾಷ್ಟ್ರಗಳಲ್ಲಿ ಮೊದಲನೆ ಸ್ಥಾನದಲ್ಲಿದೆ ಎಂದು ವಿಶ್ವಸಂಸ್ಥೆಯು ಹೇಳಿದ್ದು, ಪಲ್ಸ್ ಪೋಲಿಯೋದಲ್ಲಿ ಆದ ಕ್ರಾಂತಿಯೇ ಇದಕ್ಕೆ ಕಾರಣ ಎಂದು ಹೇಳಿದರು.
ಕೊವೀಡ್-19 ಇಡೀ ಪ್ರಪಂಚವನ್ನು ಕಾಡಿತ್ತು. ಆದರೆ ಇಂದು ಅದಕ್ಕೆ ಲಸಿಕೆ ಬಂದಿದ್ದು, ಲಸಿಕೆ ಹಾಕಿಸಿಕೊಳ್ಳಲು ಯಾರೂ ಹೆದರಬಾರದು ಎಂದರು.
ಶಾಸಕ ಎಲ್.ನಾಗೇಂದ್ರ ಅವರು ಮಾತನಾಡಿ, ಐದು ವರ್ಷದೊಳಗಿನ ಮಕ್ಕಳಿಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಹೆಚ್ಚು ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪಲ್ಸ್ ಪೋಲಿಯೋ ಮುಕ್ತವಾಗಿರುವ ಭಾರತ ಮುಂದೆ ಕೊರೊನಾ ಮುಕ್ತ ದೇಶವಾಗಲಿ ಎಂದರು.
ಇದೇ ಸಂದರ್ಭದಲ್ಲಿ ಮೈಸೂರು ವಿಭಾಗದ ಉಪನಿರ್ದೇಶಕರಾದ ಆರೋಗ್ಯಾಧಿಕಾರಿ ಡಾ.ಕೆ.ಎಚ್.ಪ್ರಸಾದ್, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಎಚ್.ಮಂಜುನಾಥ್, ನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಜೆ.ಗೋಪಿ, ನಗರ ಪಾಲಿಕೆ ಸದಸ್ಯರಾದ ಪಲ್ಲವಿ ಬೇಗಂ, ಪಾಲಿಕೆ ಆರೋಗ್ಯಾಧಿಕಾರಿ ನಾಗರಾಜು, ಮೈಸೂರು ಮಕ್ಕಳ ಕೂಟ ಅಧ್ಯಕ್ಷರಾದ ನಳಿನಿ ಶ್ರೀಕಂಠ, ಜಿಲಾ ಪಂಚಾಯತ್ ಉಪ ಕಾರ್ಯದರ್ಶಿ ಪ್ರೇಮ್ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.