ಸಭಾಪತಿ ಹೊರಟ್ಟಿ ವಿರುದ್ಧ FIR : ಧಾರವಾಡ ಗ್ರಾಮೀಣ ಇನ್ಸ್‌ಪೆಕ್ಟರ್ ಸಸ್ಪೆಂಡ್

Team Newsnap
1 Min Read

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮೇಲೆ ಎಫ್‍ಐಆರ್ ದಾಖಲು ಮಾಡಿದ್ದ ಧಾರವಾಡ ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್‌ ಶ್ರೀಧರ ಸತಾರೆಯನ್ನು ಡಿಜಿಇ ಅಮಾನತು ಮಾಡಿದ್ದಾರೆ.

ಸರ್ವೋದಯ ಶಿಕ್ಷಣ ಸಂಸ್ಥೆ ಹಾಗೂ ವಾಲ್ಮೀಕಿ ಮಹಾಸಭಾ ನಡುವೆ ಇರುವ ವಿವಾದಕ್ಕೆ ಸಂಬಂಧಿಸಿದಂತೆ ಮುಗದ ಗ್ರಾಮದಲ್ಲಿ ಗಲಾಟೆ ನಡೆದಿತ್ತು. ಈ ಸಂಬಂಧ ಮೋಹನ್ ಗುಡಸಲಮನಿ ಎಂಬಾತ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸರ್ವೋದಯ ಶಿಕ್ಷಣ ಸಂಸ್ಥೆಯ ಶಿಕ್ಷಕರ ಜೊತೆ ಸಭಾಪತಿ ಹೊರಟ್ಟಿಯವರನ್ನು 5ನೇ ಆರೋಪಿಯನ್ನಾಗಿ ಮಾಡಿ ಜನವರಿ 25 ರಂದು ಇನ್ಸ್ ಪೆಕ್ಟರ್ ಸತಾರೆ ಪ್ರಕರಣ ದಾಖಲಿಸಿಕೊಂಡಿದ್ದರು. ಹೊರಟ್ಟಿ ಗಲಾಟೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಅವರ ಮೇಲೆ ದೌಜ೯ನ್ಯ ಪ್ರಕರಣವನ್ನು ಕೂಡ ಹಾಕಲಾಗಿತ್ತು.

ಕಳೆದ ಎರಡು ದಿನಗಳ ಹಿಂದೆ ಮೇಲ್ಮನೆಯಲ್ಲಿ ಈ ಬಗ್ಗೆ ಚರ್ಚೆ ಕೂಡಾ ನಡೆದಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಸಭಾಪತಿ ವಿರುದ್ಧ ಕೇಸ್ ದಾಖಲಿಸಿದ ಬಗ್ಗೆ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.

ಪೊಲೀಸ್ ಇಲಾಖೆ ಇದೀಗ ಹೊರಟ್ಟಿ ವಿರುದ್ಧ ಪ್ರಕರಣ ದಾಖಲು ಮಾಡಿದ ಇನ್ಸ್‌ಪೆಕ್ಟರ್‌ ಶ್ರೀಧರ ಸತಾರೆಯನ್ನು ಅಮಾನತುಗೊಳಿಸಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.

ಸಭಾಪತಿ ವಿರುದ್ಧ ಕೇಸ್ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಮನೆಯಲ್ಲಿ ಸರ್ಕಾರದ ವಿರುದ್ಧ ತೀವ್ರ ಟೀಕೆ ಕೇಳಿಬಂದಿತ್ತು. ಈ ವೇಳೆ ಎಸ್‍ಪಿ ಹಾಗೂ ಇನ್ಸ್‌ಪೆಕ್ಟರ್‌ ಮೇಲೆ ಕ್ರಮಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಆಗ್ರಹಿಸಿದ್ದರು. ಅಲ್ಲದೆ ಗೃಹ ಸಚಿವ ಆರಗ ಜ್ಞಾನೇಂದ್ರ ಎರಡು ಮೂರು ದಿನದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಈ ಹಿನ್ನೆಲೆ ಇಂದು ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್‌ ಶ್ರೀಧರ ಸತಾರೆಯನ್ನು ಅಮಾನತು ಮಾಡಲಾಗಿದೆ.

[ruby_related total=5 layout=5]

Leave a comment