ನೈಸ್ ಸಂಸ್ಥೆ ಹೂಡಿದ್ದ ಮಾನನಷ್ಟ ಪ್ರಕರಣದಲ್ಲಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಎರಡು ಕೋಟಿ ರೂಪಾಯಿ ನಷ್ಟ ಪರಿಹಾರ ನೀಡಲು ಸಿಟಿ ಸಿವಿಲ್ ಕೋರ್ಟ್ ಆದೇಶ ಹೊರಡಿಸಿದೆ.
ದೇವೇಗೌಡರ ವಿರುದ್ಧ 27 ಜೂನ್, 2012 ರಲ್ಲಿ ಮಾನನಷ್ಟ ಮೊಕದ್ದಮೆ ಕೇಸ್ ಹಾಕಲಾಗಿತ್ತು. 8 ವರ್ಷ, 11 ತಿಂಗಳು, 20 ದಿನಗಳ ನಂತರ ಈ ಆದೇಶ ಹೊರಬಿದ್ದಿದೆ.
ಸಂದರ್ಶನ ಒಂದರಲ್ಲಿ ದೇವೇಗೌಡರು, ನೈಸ್ ಸಂಸ್ಥೆಗೆ ಧಕ್ಕೆಯಾಗುವ ರೀತಿಯಲ್ಲಿ ಮಾತನಾಡಿದ್ದರು ಅಂತ ಆರೋಪಿಸಲಾಗಿತ್ತು. ಈ ಸಂಬಂಧ ದೇವೇಗೌಡರ ವಿರುದ್ಧ ನೈಸ್ ಸಂಸ್ಥೆ ಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿತ್ತು. ಅರ್ಜಿಯಲ್ಲಿ 10 ಕೋಟಿ ರೂಪಾಯಿ ಪರಿಹಾರವನ್ನ ಸಂಸ್ಥೆ ಕೇಳಿತ್ತು.
ಇದೀಗ ಕೋರ್ಟ್ನಲ್ಲಿ ಸಂಸ್ಥೆ ವಿರುದ್ಧ ಆರೋಪ ಸಾಬೀತುಪಡಿಸುವಲ್ಲಿ ದೇವೇಗೌಡರು ವಿಫಲರಾಗಿದ್ದಾರೆ. ಈ ಸಂಬಂಧ ನೈಸ್ ಸಂಸ್ಥೆಗೆ 2 ಕೋಟಿ ರೂಪಾಯಿ ಪರಿಹಾರ ನೀಡಬೇಕು ಮತ್ತು ಇನ್ಮುಂದೆ ಯಾವುದೇ ಮಾನಹಾನಿ ಹೇಳಿಕೆ ನೀಡಬಾರದು ಅಂತಾ ಸಿಟಿ ಸಿವಿಲ್ ಕೋರ್ಟ್ನ ನ್ಯಾ. ಮಲ್ಲನಗೌಡ ಆದೇಶ ನೀಡಿದ್ದಾರೆ.