ಕೋವಿಡ್‌ ವಿರುದ್ಧ ಸಂಘಟಿತ ಹೋರಾಟ ಅಗತ್ಯ : ಸಚಿವ ಸುಧಾಕರ್

Team Newsnap
2 Min Read

ಸರ್ಕಾರದ ಪ್ರಮಾಣಿಕ ಪ್ರಯತ್ನಗಳ ಜತೆಗೆ ಸಮಾಜದ ಪ್ರತಿಯೊಬ್ಬರ ಸಹಕಾರ ಮತ್ತು ಸಂಘಟಿತ ಹೋರಾಟದಿಂದ ಮಾತ್ರ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಯಶಸ್ಸು ಸಾಧ್ಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಅಭಿಪ್ರಾಯಪಟ್ಟರು.

ಮೈಸೂರಿನ ಜೆಎಸ್‌ಎಸ್‌ ಸಂಸ್ಥೆ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಜಿಯವರ ಜಯಂತಿ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ʼಕೋವಿಡ್‌-೧೯ : ಸವಾಲು ಮತ್ತು ನಿರ್ವಹಣೆ ʼ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶನಿವಾರ ಸಚಿವರು ಮಾತನಾಡಿದರು.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರಗಳು ಮಾನವೀಯ ನೆಲೆಯಲ್ಲಿ ಬಡವ-ಶ್ರೀಮಂತ, ಹಿರಿಯರು-ಕಿರಿಯರು ಬೇಧವಿಲ್ಲದೆ ಸಮಭಾವದಿಂದ ಎಲ್ಲರಿಗೂ ಗುಣಮಟ್ಟದ ಕೋವಿಡ್‌ ಚಿಕಿತ್ಸೆ ನೀಡುತ್ತಿವೆ. ಅದರಲ್ಲೂ ರೋಗಕ್ಕೆ ತುತ್ತಾಗುವ ಅವಕಾಶಗಳಿರುವ ಮಕ್ಕಳು ಮತ್ತು ಹಿರಿಯರ ವಿಷಯದಲ್ಲಿ ವಿಶೇಷ ಕಾಳಜಿ ವಹಿಸಿದೆ. ಕೆಲ ಮುಂದುವರಿದ ರಾಷ್ಟ್ರಗಳು ತಮ್ಮದೇ ಕಾರಣಗಳಿಂದ ರೋಗಪೀಡಿತರಾದ ಹಿರಿಯ ನಾಗರಿಕರಿಗೆ ಚಿಕಿತ್ಸೆ ನಿರಾಕರಿಸಿದ ಉದಾಹರಣೆಗಳಿವೆ. ಅಂತಹ ಯಾವುದೇ ತಾರತಮ್ಯ ನಮ್ಮಲ್ಲಿ ಮಾಡಿಲ್ಲ ಎಂದರು.
ಜಗತ್ತಿನ ಇತರೆ ರಾಷ್ಟ್ರಗಳಲ್ಲಿ ಸಾವಿನ ಪ್ರಮಾಣ ಶೇಕಡಾ ೪ ಮತ್ತು ಅದಕ್ಕಿಂತ ಹೆಚ್ಚು ಇದ್ದರೆ ಭಾರತದಲ್ಲಿ ಶೇ.1.5 ರಿಂದ 1.7 ರಷ್ಟಿರುವುದು ಸಮಾಧಾನಕರ ಸಂಗತಿ. ಇದನ್ನು ಶೇಕಡಾ ೧ಕ್ಕಿಂತ ಕಡಿಮೆ ಮಾಡುವ ಉದ್ದೇಶದಿಂದ ಯತ್ನಗಳನ್ನು ಮುಂದುವರಿಸಲಾಗಿದೆ. ಇದು ಯುದ್ಧದ ಸಮಯ. ಈ ಹೋರಾಟದಲ್ಲಿ ಸರ್ಕಾರದಿಂದ ಮಾತ್ರ ಸಂಪೂರ್ಣ ನಿಗ್ರಹ ಸಾಧ್ಯವಿಲ್ಲ. ಸಮಾಜದಲ್ಲಿನ ಎಲ್ಲ ಸಂಘ-ಸಂಸ್ಥೆಗಳ ಜತೆ ಪ್ರತಿಯೊಬ್ಬ ನಾಗರೀಕರು ತಮ್ಮ ಜವಾಬ್ದಾರಿಗಳನ್ನು ಅರಿತು ಈ ಸಮಯದಲ್ಲಿ ಸಾಮಾಜಿಕ ಪ್ರಜ್ಞೆ ಮೆರೆಯಬೇಕಿದೆ ಎಂದರು.

sudhakar


ಕೋವಿಡ್‌ ನಂತರದ ದಿನಗಳಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳು ಸಂಶೋಧನೆ ಮತ್ತು ಪರಿಹಾರ ಉಪಕ್ರಮಗಳ ಬಗ್ಗೆ ಗಮನಹರಿಸಬೇಕಿದೆ. ಭವಿಷ್ಯದಲ್ಲಿ ಎದುರಾಗುವ ಇಂತಹ ಕಂಟಕಗಳನ್ನು ಯಾವುದೇ ಜೀವಹಾನಿ ಮತ್ತು ಜೀವನಕ್ರಮಗಳಿಗೆ ಧಕ್ಕೆ ಆಗದಂತೆ ನಿವಾರಿಸುವ ಪರಿಹಾರೋಪಾಯಗಳನ್ನು ನಾವು ಕಂಡುಕೊಳ್ಳಬೇಕು. ಇತರೆ ದೇಶಗಳ ಕೆಲ ತಪ್ಪು ನಿರ್ಧಾರಗಳಿಂದ ಎಚ್ಚೆತ್ತುಕೊಂಡ ನಾವು ನಿಖರ ಮತ್ತು ವೈಜ್ಞಾನಿಕ ಹಿನ್ನಲೆಯಲ್ಲಿ ತೀರ್ಮಾನಗಳನ್ನು ತೆಗೆದುಕೊಂಡಿದ್ದರಿಂದ ಇಂದು ಸಮಾಧಾನಕರ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಸರ್ಕಾರ ಸೂಚಿಸಿರುವ ಸರಳ ಮಾರ್ಗಸೂಚಿಗಳನ್ನು ದೈನಂದಿನ ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳುವ ಮೂಲಕ ಸಹಕರಿಸಬೇಕು. ಆಗ ಮಾತ್ರ ಕೋವಿಡ್‌ ಮಣಿಸಲು ಸಾಧ್ಯ ಎಂದು ತಿಳಿಸಿದರು.
ಆರಂಭದಿಂದಲೂ ಕರ್ನಾಟಕ ದೇಶಕ್ಕೆ ಮಾದರಿಯಾದ ಕ್ರಮಗಳನ್ನು ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಅಳವಡಿಸಿಕೊಂಡಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಪ್ರಯಾಣಿಕರ ತಪಾಸಣೆ, ಜನದಟ್ಟಣಿ ಪ್ರದೇಶಗಳಲ್ಲಿ ನಿರ್ಬಂಧಗಳಂತಹ ಸಕಾರಾತ್ಮಕ ನಿಲುವುಗಳು ಕೊರೋನಾ ಹರಡುವಿಕೆಯ ತೀವ್ರತೆಯನ್ನು ತಡೆಯಲು ಸಾಧ್ಯವಾಯಿತು. ತಂತ್ರಜ್ಞಾನದ ಬಳಕೆ, ಇತರೆ ರಾಜ್ಯಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ವೈದ್ಯಕೀಯ, ನರ್ಸಿಂಗ್‌, ಪ್ಯಾರಾಮೆಡಿಕಲ್‌ ಶಿಕ್ಷಣ ಸಂಸ್ಥೆಗಳಿಂದ ನಮ್ಮಲ್ಲಿ ಚಿಕಿತ್ಸೆಗೆ ಹೆಚ್ಚಿನ ಮಾನವ ಸಂಪನ್ಮೂಲವನ್ನು ಒದಗಿಸಿಕೊಳ್ಳಲಾಯಿತು. ಜತೆಗೆ ಲಾಕ್‌ಡೌನ್‌ ಸಂದರ್ಭದಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು ನೆರವಿಗೆ ಬಂತು ಎಂದು ವಿವರಿಸಿದರು.
ರೋಗಕ್ಕೆ ಶೀಘ್ರದಲ್ಲೇ ಲಸಿಕೆ ಸಿಗುವ ವಿಶ್ವಾಸವಿದೆ. ಆದರೆ ಅಲ್ಲಿಯವರೆಗೆ ಜೀವ ಮತ್ತು ಜೀವನ ನಡೆಸಲು ಅವಕಾಶ ಮಾಡಿಕೊಟ್ಟಿರುವ ಸರ್ಕಾರದ ಜತೆಗೆ ಜನರು ಕೈ ಜೋಡಿಸಬೇಕು. ನಿಯಮಿತವಾಗಿ ನೀಡುವ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಆಗ ಮಾತ್ರ ಸಂಪೂರ್ಣ ನಿಯಂತ್ರಣ ಸಾಧ್ಯ ಎಂದರು.
ಜಮ್ಮು ಕಾಶ್ಮೀರದ ಲೆಪ್ಟಿನೆಂಟ್‌ ಗೌರ್ನರ್‌ ಮನೋಜ್‌ ಸಿನ್ಹಾ ಕಾರ್ಯಕ್ರಮ ಉದ್ಘಾಟಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ, ಇನ್ಫೊಸಿಸ್‌ ಫೌಂಡೇಶನ್ನಿನ ಮುಖ್ಯಸ್ಥೆ ಸುಧಾಮೂರ್ತಿ, ಚಿತ್ರನಟ ದರ್ಶನ್‌, ಜೆಎಸ್‌ಎಸ್‌ ಸಂಸ್ಥೆಗಳ ಸಮ ಕುಲಾಧಿಪತಿ ಡಾ. ಸುರೇಶ್‌ ಭೋಜರಾಜ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದರು.

Share This Article
Leave a comment