ಕೊರೋನಾ ನೆಪ : 10 ಸಾವಿರ ಕೋಟಿ ಗೋಲ್ ಮಾಲ್ – ಆಮ್ ಆದ್ಮಿ ಪೃಥ್ವಿ ರೆಡ್ಡಿ

Team Newsnap
1 Min Read

ಕೊರೋನಾ ನೆಪದಲ್ಲಿ ಸುಮಾರು 10 ಸಾವಿರ ಕೋಟಿಗಳಷ್ಟು ಹಣವನ್ನು ರಾಜ್ಯ ಸರ್ಕಾರ ಬೃಹತ್ ಗೋಲ್ ಮಾಲ್ ಮಾಡಿದೆ ಎಂದು ರಾಜ್ಯ ಆಮ್ ಆದ್ಮಿ ಪಕ್ಷದ ಸಂಚಾಲಕ ಪೃಥ್ವಿ ರೆಡ್ಡಿ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಪೃಥ್ವಿ ರೆಡ್ಡಿ ಹೋಮ್ ಐಸೋಲೇಷನ್ ಇರುವವರಿಗೆ ಕಿಟ್ ನೀಡಲಾಗುವುದು ಎಂದು ಹೇಳಿ ಯಾವುದೇ ಕಿಟ್ ನೀಡಿಲ್ಲ ಆದರೆ ಕಿಟ್ ನೀಡಲಾಗಿದೆ ಎಂದು ಸುಮಾರು 150 ಕೋಟಿ ರು ಹಣ ದೋಚಲಾಗಿದೆ ಎಂದು ಆರೋಪಿಸಿದರು.

ಕಾಲ್ ಸೆಂಟರ್‌ಗಳ ಮೂಲಕ ಸೋಂಕಿತರಿಗೆ ಕರೆ ಮಾಡಲು ಸರ್ಕಾರವೇ ತಿಳಿಸಿರುವಂತೆ 69 ರು. ನೀಡಲಾಗುತ್ತಿದೆ. ಸುಮ್ಮನೆ ಅಂದಾಜು ಲೆಕ್ಕ ಹಾಕಿದರೂ 8 ಲಕ್ಷ ಜನರಿಗೆ 5 ಬಾರಿ ಕರೆ ಮಾಡಲು ನೂರಾರು ಕೋಟಿ ವ್ಯಯಿಸಲಾಗಿದೆ. ಹೆಚ್ಚುವರಿಯಾಗಿ 50 ರು. ನೀಡಿ ಹಣ ದೋಚಲಾಗಿದೆ ಎಂದು ಹೇಳಿದರು.

ದೀಪಾವಳಿ ಮತ್ತು ದಸರಾ ಹಬ್ಬಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಬಂಪರ್ ಕೊಡುಗೆ ನೀಡುತ್ತಿದ್ದಾರೆ. ಕೊರೋನಾ 3 ನೇ ಸ್ಥಾನದಿಂದ 2 ನೇ ಸ್ಥಾನಕ್ಕೆ ಕೊಂಡೊಯ್ಯಲಿದ್ದಾರೆ ಎಂದು ವ್ಯಂಗ್ಯವಾಡಿದರು.

ದೆಹಲಿ ಮಾದರಿಯನ್ನು ಅನುಸರಿಸಿ ಎಂದು ಸ್ವತಃ ಪ್ರಧಾನಿಗಳೇ ಹೇಳಿದ್ದರೂ ನಮ್ಮ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿತು. ವೈಯಕ್ತಿಕವಾಗಿ ನಾನೇ ನಮ್ಮ ರಾಜ್ಯದ ಆರೋಗ್ಯ ಮಂತ್ರಿಗಳಿಗೆ ಕರೆ ಮಾಡಿ, ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದರು ಸ್ಪಂದಿಸಲಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ, ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ಮುಖ್ಯ ವಕ್ತಾರ ಶರತ್ ಖಾದ್ರಿ ಉಪಸ್ಥಿತರಿದ್ದರು.

Share This Article
Leave a comment