ದೇಶದಲ್ಲಿ ಕರೋನಾ ಹೆಚ್ಚಳ – 5 ರಾಜ್ಯಗಳಿಗೆ ಪತ್ರ – ರೈಲು ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ

Team Newsnap
1 Min Read

ಭಾರತದಲ್ಲಿ ಕಳೆದ ಮೂರು ದಿನಗಳಿಂದ ನಿತ್ಯ ಸರಾಸರಿ ಸಾವಿರದಂತೆ ಕರೊನಾ ಸೋಂಕು ಏರಿಕೆ ಆಗುತ್ತಿದ್ದು, ನಾಲ್ಕನೇ ಅಲೆ ಆತಂಕವನ್ನು ಸೃಷ್ಟಿಸಿದೆ, ದೇಶದಲ್ಲಿ 4,041 ಹೊಸ ಕೇಸ್​ಗಳು ಪತ್ತೆಯಾಗಿದ್ದು ಇದು 84 ದಿನಗಳಲ್ಲಿ ಅತಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ.

ಮಹಾರಾಷ್ಟ್ರದಲ್ಲಿ ಗುರುವಾರ 900ಕ್ಕೂ ಹೆಚ್ಚು ಹೊಸ ಪ್ರಕರಣಗಳು ವ್ಯಕ್ತವಾಗಿದ್ದವು. ಸೋಂಕು ಪ್ರಸರಣ ಕಡಿಮೆಯಾಗದಿದ್ದರೆ ನಿರ್ಬಂಧ ಕ್ರಮಗಳನ್ನು ಮತ್ತೆ ಜಾರಿ ಮಾಡಬೇಕಾಗುತ್ತದೆ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.

ಕರ್ನಾಟಕ ಹಾಗೂ ಇತರೆ 4 ರಾಜ್ಯಗಳಿಗೆ ಕೇಂದ್ರ ಪತ್ರ:

ದೇಶದಲ್ಲಿ ಕರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ಈ ಸಂಬಂಧ ಕರ್ನಾಟಕ ಸಹಿತ ಐದು ರಾಜ್ಯಗಳಿಗೆ ಪತ್ರ ಬರೆದು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ. ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಮಹಾರಾಷ್ಟ್ರಗಳಲ್ಲಿ ಸೋಂಕಿನ ಸ್ಥಳೀಯ ಪ್ರಕರಣಗಳು ಹೆಚ್ಚಿರುವ ಸಾಧ್ಯತೆಯಿದೆ ಎಂಬುದು ಕೇಂದ್ರದ ಅಭಿಪ್ರಾಯವಾಗಿದೆ. ರಾಜ್ಯಗಳು ಕಟ್ಟುನಿಟ್ಟಿನ ನಿಗಾವಹಿಸಬೇಕು. ಹಾಗೂ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರದಲ್ಲಿ ಹೇಳಿದ್ದಾರೆ.

ಇದನ್ನು ಓದಿ –ಮಂಡ್ಯದ ವಿಕಲಾಂಗನ ಸಮಸ್ಯೆಗೆ ಎರಡೇ ದಿನಕ್ಕೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ

ರೈಲು ಪ್ರಯಾಣಿಕರಿಗೆ `ಮಾಸ್ಕ್ ಕಡ್ಡಾಯ’

ನೈಋತ್ಯ ರೈಲ್ವೆ ಕೊರೊನಾ ಮುಂಜಾಗ್ರತೆಗೆ ಹೊಸ ಮಾರ್ಗಸೂಚಿಗಳನ್ನು ಬಿಡಗುಡೆ ಮಾಡಿದ್ದು, ಪ್ರಯಾಣಿಕರು ರೈಲ್ವೆ ನಿಲ್ದಾಣ ಮತ್ತು ರೈಲಿನಲ್ಲಿ ಮಾಸ್ಕ್ ಧರಿಸಬೇಕು ಎಂದು ತಿಳಿಸಿದೆ, ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಕೊರೊನಾ ಮುಂಜಾಗ್ರತೆಗಾಗಿ ಮಾಸ್ಕ್ ಕಡ್ಡಾಯ ಮಾಡಿದ್ದು, ಪ್ರಯಾಣಿಕರು ನಿಲ್ದಾಣ, ಹೊರ ಮತ್ತು ಒಳಭಾಗದಲ್ಲಿ ಹಾಗೂ ರೈಲಿನಲ್ಲಿ ಸಂಚರಿಸುವಾಗಲೂ ಕಡ್ಡಾಯ ಮಾಸ್ಕ್ ಧರಿಸಬೇಕು.ನಿಲ್ದಾಣಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದೆ.

Share This Article
Leave a comment