ಮತಾಂತರ : ಹೇಗೆಲ್ಲಾ ಯೋಚಿಸಬಹುದು…….

Team Newsnap
3 Min Read

ಒಬ್ಬ ವ್ಯಕ್ತಿ ತಾನು ಇಚ್ಚಿಸಿದ ಧರ್ಮವನ್ನು ಆಯ್ಕೆ ಮಾಡಿಕೊಂಡು ಅನುಸರಿಸಲು ಕಾನೂನುಗಳು ಅವಶ್ಯಕತೆ ಇದೆಯೇ…….

ಒಬ್ಬ ವ್ಯಕ್ತಿ ಭಾರತೀಯ ಪ್ರಜೆ ಎಂದು ಗುರುತಿಸಿದ ನಂತರ ಆತನ ಆಚರಣೆಯ ಮತ ಯಾವುದಾದರೆ ಏನು. ಅದನ್ನು ಏಕೆ ಪ್ರಶ್ನಿಸಬೇಕು ಅಥವಾ ನಿಯಂತ್ರಿಸಬೇಕು…..

ಬಲವಂತವಾಗಿ ಅಥವಾ ಆಸೆ ಆಮಿಷ ತೋರಿಸಿ ಮತಾಂತರ ಮಾಡುವುದು ಅಪರಾಧ ಎಂಬ ಕಾನೂನು ಈಗಾಗಲೇ ಇದೆ. ಸ್ವ ಇಚ್ಛೆಯಿಂದ ಮತಾಂತರ ಆಗುವುದನ್ನು ತಡೆಯುವುದು ವ್ಯಕ್ತಿ ಸ್ವಾತಂತ್ರ್ಯದ ಹರಣವೇ…….

ವ್ಯಕ್ತಿಯೊಬ್ಬ ಹಿಂದೂ ಇಸ್ಲಾಂ ಕ್ರಿಶ್ಚಿಯನ್ ಸಿಖ್ ಭೌದ್ದ ಜೈನ ಪಾರ್ಸಿ ಲಿಂಗಾಯತ ಮುಂತಾದ ಯಾವುದೇ ಮತದ ಅನುಯಾಯಿಯೇ ಆಗಿರಲಿ ಜೀವಪರ ನಿಲುವಿನ ಮಾನವೀಯ ಮೌಲ್ಯಗಳ ನಿಷ್ಠಾವಂತನಾಗಿದ್ದಾಗ ಯಾವ ಮತದಲ್ಲಿ ಇದ್ದರೂ ವ್ಯತ್ಯಾಸವೇನು…….

ಯಾವ ಮತದಿಂದ ಯಾವ ಮತಕ್ಕೆ ಹೆಚ್ಚು ಮತಾಂತರ ಆಗುತ್ತಿದೆ ಮತ್ತು ಏಕೆ ಹಾಗು ಅದಕ್ಕೆ ಕಾರಣವೇನು…..

ಮತಗಳ ಸಾಮರ್ಥ್ಯ ಭಕ್ತಿ ನಂಬಿಕೆ ಆಕರ್ಷಣೆಯ ಕಾರಣಕ್ಕಾಗಿ ಮತಾಂತರ ಆಗುತ್ತಿದೆಯೇ ಅಥವಾ ಮತಗಳ ಹಿಂಸೆ ತಾರತಮ್ಯ ಅಪನಂಬಿಕೆ ತಿರಸ್ಕಾರದ ಕಾರಣಕ್ಕಾಗಿ ಮತಾಂತರ ಆಗುತ್ತಿದೆಯೇ……

ಸೇವೆ ಮತ್ತು ಮನುಷ್ಯ ಕಲ್ಯಾಣವೇ ಒಂದು ಮತದ ಉದ್ದೇಶವಾದರೆ ಅದನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಮಾಡಬಹುದಲ್ಲವೇ, ಇದಕ್ಕಾಗಿ ಮತಾಂತರ ಅವಶ್ಯಕವೇ……

ಸಾಮಾನ್ಯವಾಗಿ ಕ್ರಿಶ್ಚಿಯನ್ ಧರ್ಮದ ಮೇಲೆ ಹೆಚ್ಚು ಮತಾಂತರದ ಆರೋಪವಿದೆ ಮತ್ತು ಹಿಂದೂಗಳನ್ನು ಹೆಚ್ಚು ಮತಾಂತರ ಮಾಡುತ್ತಾರೆ ಎಂದು ಹೇಳಲಾಗುತ್ತದೆ ಅದು ಏಕೆ…..

ಮತಾಂತರ ಇಲ್ಲದೆಯೇ ಬಡವರು ಶೋಷಿತರ ಸಹಾಯ ಮಾಡುವ ಅವಕಾಶ ಇರುವಾಗ ಅನವಶ್ಯಕ ಮತಾಂತರ ಆರೋಪವನ್ನು ತಡೆಯಬಹುದಲ್ಲವೇ…

ಮನುಷ್ಯರೆಲ್ಲಾ ಒಂದೇ, ಯಾವುದೇ ದೇವ ಮಂದಿರಗಳಿಗೆ ಎಲ್ಲರಿಗೂ ಏಕ ರೀತಿಯ ಪ್ರವೇಶ ಎಂಬ ಕ್ರಿಶ್ಚಿಯನ್ ಧರ್ಮದ ಸಮಾನತೆಯ ಸರಳ ಆಚರಣೆ ಮತಾಂತರದ ಬಹುದೊಡ್ಡ ಸಾಮರ್ಥ್ಯವೇ….

ಜಾತಿ ವ್ಯವಸ್ಥೆ ಮತ್ತು ಆ ಮೂಲಕ ಮೇಲು ಕೀಳು ಎಂಬ ಅಮಾನವೀಯ ಆಚರಣೆ ಹಿಂದೂಗಳು ಹೆಚ್ಚು ಮತಾಂತರಕ್ಕೆ ಒಳಗಾಗುತ್ತಾರೆ ಎಂಬುದು ಸತ್ಯವೇ…..

ಮನುಷ್ಯರೆಲ್ಲಾ ಒಂದೇ ಸೃಷ್ಟಿಯ ಪ್ರಾಣಿಗಳು ಎಂದು ಎಲ್ಲಾ ಮತಗಳು ಭೋದಿಸುವಾಗ ಮತಾಂತರದ ಪರವಾಗಿ ಅಥವಾ ವಿರುದ್ಧವಾಗಿ ಮಾತನಾಡುವುದು ತಪ್ಪು ಎನಿಸುವುದಿಲ್ಲವೇ…….

ಮತಾಂತರ ಎಂಬುದು ಧಾರ್ಮಿಕ ಮುಖಂಡರ ಕುಚೇಷ್ಟೇ ಮತ್ತು ರಾಜಕಾರಣಿಗಳ ಚುನಾವಣಾ ತಂತ್ರಗಾರಿಕೆ ಹೊರತು ಹೆಚ್ಚಿನ ಯಾವುದೇ ಮಹತ್ವ ಇಲ್ಲ ಎಂಬುದು ವಾಸ್ತವವೇ…..

ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರು. ಆದ್ದರಿಂದ ಅಲ್ಲಿನ ಬಡವರ ಸೇವೆ ಮುಖ್ಯವಾಗಲಿ, ಮತಾಂತರ ಅಲ್ಲಿನ ಬಹಳಷ್ಟು ಜನರ ಆಕ್ರೋಶಕ್ಕೆ ಕಾರಣವಾಗುತ್ತದೆ ಅದನ್ನು ಮಾಡಬೇಡಿ ಎಂದು ಕ್ರಿಶ್ಚಿಯನ್ ಧರ್ಮದ ಮುಖ್ಯಸ್ಥರು ತಮ್ಮ ಆಜ್ಞಾಪಾಲಕರಿಗೆ ಹೇಳಿ ಸೌಹಾರ್ದತೆ ಮೆರೆಯಬಹುದಲ್ಲವೇ…..

ಹಿಂದೂ ಧರ್ಮದ ಅಸಮಾನತೆಯೇ ಮತಾಂತರದ ಮೂಲ ಕಾರಣ. ಅದರ ನಿವಾರಣೆಗೆ ಮತಾಂತರ ಬಯಸದ ಎಲ್ಲಾ ಹಿಂದೂ ಧಾರ್ಮಿಕ ಮುಖಂಡರು ಪ್ರಯತ್ನಿಸಬಹುದಲ್ಲವೇ…..

ಬಸವರಾಜ್ ಬೊಮ್ಮಾಯಿ ಸಿದ್ದರಾಮಯ್ಯ ಕುಮಾರಸ್ವಾಮಿ ಶಿವಕುಮಾರ್ ಎಲ್ಲರೂ ಹಿಂದೂಗಳೇ.
ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಾಗ್ಯುದ್ದಗಳು ಮಾಡುತ್ತಿರುವವರು ಸಹ ಹಿಂದೂಗಳೇ. ಹಾಗಾದರೆ ಮತಾಂತರದ ಪರ ವಿರುದ್ಧ ಚರ್ಚೆಗಳು ಪ್ರಜಾಪ್ರಭುತ್ವದ ಉತ್ತಮ ಲಕ್ಷಣವೇ, ಹಿಂದುತ್ವದ ಹುಳುಕುಗಳೇ, ರಾಜಕೀಯ ಸ್ವಾರ್ಥವೇ…..

ಮತಗಳೇ ಒಂದು ವಿಭಜಕ ಶಕ್ತಿಗಳು. ನಾಗರಿಕ ಸಮಾಜದ ಶತ್ರುಗಳು. ಅದನ್ನು ತಿರಸ್ಕರಿಸಿ ಮಾನವೀಯ ಮತದ ಅಡಿಯಲ್ಲಿ ದೇಶದ ಕಾನೂನಿನ ನೆರಳಲ್ಲಿ ಉತ್ತಮವಾಗಿ ಜೀವಿಸಬಹುದಲ್ಲವೇ…..

ಮಾನವೀಯ ಮೌಲ್ಯಗಳ ಪುನರುತ್ಥಾನದ, ಜನರ ಜೀವನಮಟ್ಟ ಸುಧಾರಣೆ, ಆಹಾರದ ಗುಣಮಟ್ಟ ಹೆಚ್ಚಳ, ಶಿಕ್ಷಣ ಆರೋಗ್ಯ ಕಡಿಮೆ ವೆಚ್ಚದಲ್ಲಿ ಎಲ್ಲರಿಗೂ ಸಿಗುವುದು, ಭ್ರಷ್ಟಾಚಾರ ನಿರ್ಮೂಲನೆ, ರೈತರ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಮುಂತಾದ ಅತ್ಯವಶ್ಯಕ ವಿಷಯಗಳನ್ನು ವಿಧಾನಸಭೆಯ ಕಲಾಪದಲ್ಲಿ ಚರ್ಚಿಸುವುದು ಬಿಟ್ಟು ಜನರ ತೆರಿಗೆ ಹಣ ಕೆಲಸಕ್ಕೆ ಬಾರದ ವಿಷಯದಲ್ಲಿ ಹಣ ಮತ್ತು ಸಮಯ ಹಾಳು ಮಾಡುವುದು ಒಂದು ದೊಡ್ಡ ಅಪರಾಧ ಅಲ್ಲವೇ….

ಮತಾಂತರ ನಿಷೇಧ ಕಾನೂನು ಇಂದಿನ ಅತ್ಯವಶ್ಯ. ಹಿಂದೂಗಳ ರಕ್ಷಣೆಗೆ ಉತ್ತಮ ಹೆಜ್ಜೆ ಅದನ್ನು ಬೆಂಬಲಿಸೋಣ ಎಂಬ ಅಭಿಪ್ರಾಯ ಸರಿಯೇ….

ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ಓಟಿನ ರಾಜಕೀಯಕ್ಕಾಗಿ ಸಾಮರಸ್ಯ ಹಾಳುಮಾಡಿ ಮೂಲಭೂತವಾದಿ ಮನೋಭಾವ ಬೆಳೆಸುವ ಮತಾಂತರ ನಿಷೇಧ ಕಾನೂನನ್ನು ವಿರೋಧಿಸಬೇಕು ಎಂಬ ಅಭಿಪ್ರಾಯ ಸರಿಯೇ….

ಯೋಚನೆಗಳಿಗೆ ಯಾವುದೇ ಮಿತಿ ಇಲ್ಲ. ವಿವಿಧ ದೃಷ್ಟಿಕೋನದಿಂದ ನೋಡಬಹುದು. ಆದರೆ ವಾಸ್ತವ….

ಸಮಗ್ರ ಚಿಂತನೆಯ ಯೋಚನೆಗಳೇ ನಮ್ಮನ್ನು ಹೆಚ್ಚು ಸತ್ಯ ಮತ್ತು ವಾಸ್ತವದ ಹತ್ತಿರಕ್ಕೆ ಮುಟ್ಟಿಸುತ್ತದೆ.
ಮತಾಂತರದ ಬಗ್ಗೆಯೂ ಮತ್ತಷ್ಟು ಎಲ್ಲಾ ಆಯಾಮಗಳಿಂದ ಯೋಚಿಸಿದಾಗ ಒಂದು ಸ್ವಂತ ಅಭಿಪ್ರಾಯ ನಿಮ್ಮದಾಗಬಹುದು. ಹಾಗಾಗಲಿ ಮತ್ತು ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಸ್ವತಂತ್ರ ಚಿಂತನೆಯ ಶಕ್ತಿ ಬೆಳೆಯಲಿ. ಆಗ ಈ ರೀತಿಯ ಸ್ವಾರ್ಥ ರಾಜಕಾರಣಿಗಳು ಮತ್ತು ಧಾರ್ಮಿಕ ಮೂಲಭೂತವಾದಿಗಳ ಆಟ ನಡೆಯುವುದಿಲ್ಲ……..

ಸಿದ್ಧಾಂತಗಳನ್ನು ಮೀರಿದ, ಮಾನವೀಯ ಮತದ, ಸೃಷ್ಟಿಯ ನಿಷ್ಠೆಯ ಚಿಂತನೆಗಳು ನಮ್ಮದಾಗಲಿ ಎಂದು ಆಶಿಸುತ್ತಾ…….

ವಿವೇಕಾನಂದ. ಹೆಚ್.ಕೆ.

Share This Article
Leave a comment