ಕಾಂಗ್ರೆಸ್ ಸೇರಲ್ಲ : ಬಾಹ್ಯ ಬೆಂಬಲ ಕೋರುತ್ತೇನೆ – ಶರತ್ ಬಚ್ಚೇಗೌಡ

Team Newsnap
1 Min Read

ಕಾಂಗ್ರೆಸ್‌ ಸೇರ್ಪಡೆಯಿಂದ ಹಿಂದೆ ಸರಿದ ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ ಕಾಂಗ್ರೆಸ್ ಪಕ್ಷ ಸೇರ್ಪಡೆ ಬದಲಿಗೆ ಬಾಹ್ಯ ಬೆಂಬಲ ನೀಡಲು ನಿರ್ಧರಿಸಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಬೆಂಬಲ ಕೋರಿ, ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ಬಾಹ್ಯ ಬೆಂಬಲ ಘೋಷಿಸುವ ಪತ್ರವನ್ನು ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಇಂದು ಸಿಎಲ್ ಪಿ ಲೀಡರ್ ಸಿದ್ದರಾಮಯ್ಯ ಗೆ ನೀಡಿದರು.

ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎಂಬುದಕ್ಕೆ ಇಂದು ತೆರೆ ಬಿದ್ದಿದೆ. ಪಕ್ಷಕ್ಕೆ ಸೇರ್ಪಡೆಯಾಗುವುದಕ್ಕೆ ಬದಲಾಗಿ ಕಾಂಗ್ರೆಸ್‌ನ ಬೆಂಬಲ ಪಡೆದು ಕೊಂಡಿದ್ದಾರೆ.

ಸಿದ್ದರಾಮಯ್ಯನವರ ಸರ್ಕಾರಿ ನಿವಾಸದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಹಸದಸ್ಯನಾಗಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್‌, ಹೊಸಕೋಟೆ ನಾಯಕರಿಗೆ ನಾನು 30-40 ವರ್ಷಗಳಿಂದ ಗಾಳ ಹಾಕುತ್ತಲೇ ಇದ್ದೆ. ಆದರೆ ನನ್ನ ಗಾಳಕ್ಕೆ ಮೀನು ಬಿದ್ದಿರಲಿಲ್ಲ. ಈಗಲೂ ಸಹ ನಿಮ್ಮ ಶಾಸಕರು ನಮ್ಮ ಗಾಳಕ್ಕೆ ಬಿದ್ದಿಲ್ಲ, ಆದರೆ ಬೆಂಬಲಿಗರು ನಮ್ಮ ಗಾಳಕ್ಕೆ ಬಿದ್ದಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.

ನಾವು ಬೆಂಬಲ ನೀಡ್ತೇವೆ. ಈಗ ನಿಮ್ಮನ್ನೆಲ್ಲ ಪಕ್ಷಕ್ಕೆ ಸೇರಿಸಿಕೊಳ್ಳಲು ಏನೆಲ್ಲಾ ಪಗಡೆ ಆಡಿದ್ದೀವಿ ಅಂತ ನನಗೆ ಹಾಗೂ ಸಿ.ಎಂ. ಲಿಂಗಪ್ಪನವರಿಗೆ ಗೊತ್ತು. ನಮ್ಮ ಸಂಪೂರ್ಣ ಬೆಂಬಲ ನಿಮಗೆಲ್ಲಾ ಇದೆ ಎಂದರು.

ಪಕ್ಷೇತರ ಶಾಸಕ ಶರತ್‌ ಬಚ್ಚೇಗೌಡ ಮಾತನಾಡಿ, ತಾಲೂಕಿನ ಹಿತದೃಷ್ಟಿಯಿಂದ ಇಲ್ಲಿ ಸೇರಿಸಿದ್ದೇವೆ. ಉಪಚುನಾವಣೆಯಲ್ಲಿ‌ ಸ್ವಾಭಿಮಾನಿಯಾಗಿ ಸ್ಪರ್ಧಿಸಿ ಗೆದ್ದೆ. ತಾಲೂಕಿನಲ್ಲಿ ಅಧಿಕಾರಿಗಳ ದಬ್ಬಾಳಿಕೆ ನಡೆದಿದೆ, ಪೊಲೀಸರ ದೌರ್ಜನ್ಯವೂ ನಡೆಯುತ್ತಿದೆ. ನಮ್ಮ ಕೂಗಿಗೆ ಧ್ವನಿ ಸಿಕ್ಕಿರಲಿಲ್ಲ. ಹಾಗಾಗಿ ಕಾಂಗ್ರೆಸ್ ಶಾಸಕಾಂಗ ಬೆಂಬಲ ಕೇಳುತ್ತಿದ್ದೇನೆ. ಹಾಗೆ ನಾನು ಬಾಹ್ಯ ಬೆಂಬಲವನ್ನು ಸೂಚಿಸುತ್ತಿದ್ದೇನೆ ಎಂದು ಹೇಳಿದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಮಾಜಿ ಸಚಿವ ರಮೇಶ್ ಕುಮಾರ್, ಕೃಷ್ಣ ಭೈರೇಗೌಡ, ಜಮೀರ್ ಅಹ್ಮದ್, ಕೆ.ಜೆ. ಜಾರ್ಜ್, ನಜೀರ್ ಅಹ್ಮದ್, ನಾರಾಯಣಸ್ವಾಮಿ, ಭೈರತಿ ಸುರೇಶ್, ಎಂಎಲ್ಸಿ ರವಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Share This Article
Leave a comment