ಸರ್ಕಾರಿ ಕೆಲಸ ಪಡೆಯಲು ಲಂಚ ನೀಡಿದ್ದ ಮೂವರ ಮೇಲೆ ಎಸಿಬಿ ಅಧಿಕಾರಿಗಳು ಎಫ್ಐಆರ್ ದಾಖಲು ಮಾಡಿದ್ದಾರೆ.
ಕೆ.ಪಿ.ಸುಧೀಂದ್ರ ರೆಡ್ಡಿ, ಜಿ ನರಸಿಂಹಯ್ಯ ಹಾಗೂ ಗೋವಿಂದಯ್ಯ ಎಂಬುವರ ವಿರುದ್ಧ ಎಸಿಬಿ ಪ್ರತ್ಯೇಕವಾಗಿ ಮೂರು ಎಫ್ಐಆರ್ ದಾಖಲು ಮಾಡಿಕೊಂಡಿದೆ.
ಮೂವರು ಕೂಡ ಕುಖ್ಯಾತ ವಂಚಕ ಯುವರಾಜ್ ಸ್ವಾಮಿಗೆ ಸರ್ಕಾರಿ ಕೆಲಸ ಕೊಡಿಸಲು ಲಂಚ ನೀಡಿದ್ದರು ಎಂಬ ಆರೋಪ ಮೇರೆಗೆ ದೂರು ದಾಖಲಿಸಲಾಗಿದೆ.
ಜನಾಧಿಕಾರ ಸಂಘರ್ಷ ಪರಿಷತ್ ಸಹ ಅಧ್ಯಕ್ಷ ಆದರ್ಶ ಆರ್. ಐಯ್ಯರ್ ಎಂಬುವರು ಎಸಿಬಿಗೆ ನೀಡಿದ ದೂರಿನ ಮೇರೆಗೆ ಎಸಿಬಿ ಎಫ್ಐಆರ್ ದಾಖಲು ಮಾಡಿದೆ.
ಕೆಎಸ್ಆರ್ಸಿಸಿ ಅಧ್ಯಕ್ಷ, ಕೆಎಂಎಫ್ನಲ್ಲಿ ಮ್ಯಾನೇಜರ್ ಹಾಗೂ ಎಇಇ ಹುದ್ದೆಗಾಗಿ ಮೂವರು ಆರೋಪಿಗಳು ಲಕ್ಷಾಂತರ ರೂಪಾಯಿ ಹಣ ಎಣಿಸಿದ್ದರು ಎನ್ನಲಾಗಿದೆ.
ವಂಚಕ ಯುವರಾಜ್ ಸ್ವಾಮಿಗೆ ಕಳೆದ ವರ್ಷ ಹಣ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿ ಯುವರಾಜ್ ಸ್ವಾಮಿಗೆ ರಾಜಕಾರಣಿಗಳ ಪರಿಚಯವಿದೆ. ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚನೆ ಮಾಡುತ್ತಿದ್ದ ಎನ್ನಲಾಗಿದೆ.
ಆರೋಪಿ ಯುವರಾಜ್ ವಿರುದ್ದ ಜ್ಞಾನಭಾರತಿ, ಅನ್ನಪೂರ್ಣೇಶ್ವರಿ ನಗರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು.
ಸದ್ಯ ಎಸಿಬಿ ಪೊಲೀಸರು ಭ್ರಷ್ಟಾಚಾರ ನಿಗ್ರಹ ತಿದ್ದುಪಡಿ ಕಾಯ್ದೆಯಡಿ ಮೂವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.