ಸಮುದಾಯದ ಸರ್ವಾಂಗೀಣ ಏಳಿಗೆಗೆ ಬದ್ಧ:ಬಿ.ಸುಬ್ರಹ್ಮಣ್ಯ

Team Newsnap
2 Min Read
  • ಕುರುಬ ಸಂಘದ ನೂತನ ಅಧ್ಯಕ್ಷರಾದ ಬಿ.ಸುಬ್ರಹ್ಮಣ್ಯರಿಗೆ ಮೈಸೂರಿನಲ್ಲಿ ಅದ್ಧೂರಿ ಸ್ವಾಗತ

ಕರ್ನಾಟಕ ಪ್ರದೇಶ ಕುರುಬರ ಸಂಘದ ನೂತನ ಪ್ರಭಾರ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಸುಬ್ರಹ್ಮಣ್ಯ ಮೈಸೂರಿಗೆ ಮೊದಲ ಬಾರಿಗೆ ಆಗಮಿಸಿದ ಹಿನ್ನೆಲೆ ಸಂಘದ ವತಿಯಿಂದ ಸಾಂಸ್ಕೃತಿಕ ಕಲಾ ತಂಡದಿಂದ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿ, ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ಬುಧವಾರ ಮೈಸೂರಿನ ಡಿ.ದೇವರಾಜು ಅರಸು ರಸ್ತೆಯ ಶ್ರೀ ಶಿವಾಯ ಮಠದ ಹತ್ತಿರ ಮೆರವಣಿಗೆ ಮೂಲಕ ಸ್ವಾಗತಿಸಿದ ಕುರುಬ ಸಮಾಜದ ಮುಖಂಡರು ಹಾಗೂ ಜಿಲ್ಲಾ ಪದಾಧಿಕಾರಿಗಳು, ಪುಷ್ಪಮಾಲೆಗಳನ್ನು ಹಾಕುವ ಮೂಲಕ ಅಭಿನಂದನೆ ಸಲ್ಲಿಸಿದರು.

ಕುರುಬರಲ್ಲಿ ರಾಜಕೀಯ ಇಚ್ಛಾಶಕ್ತಿ ಕಡಮೆ :

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಕ್ಷರಾದ ಬಿ. ಸುಬ್ರಹ್ಮಣ್ಯ ಅವರು, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಕುರುಬ ಸಮುದಾಯ ಎಸ್‌ಟಿಗೆ ಸೇರ್ಪಡೆಯಾಗಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕುಲಶಾಸ್ತ್ರೀಯ ಅಧ್ಯಯನಕ್ಕೆ ಶಿಫಾರಸು ಮಾಡಿದ್ದಾರೆ. ಈ ಹೋರಾಟದಲ್ಲಿ ನಮ್ಮ ಬೆನ್ನಿಗೆ ಅವರು ನಿಲ್ಲಲು ಭರವಸೆ ನೀಡಿದ್ದಾರೆ‌ ಎಂದರು.

ಒಗ್ಗೂಡಿಸಿ ಹೋರಾಟ – ಸ್ವಾಮೀಜಿ:

ಕಾಗಿನೆಲೆ ಕನಕ ಗುರುಪೀಠದ ಸ್ವಾಮೀಜಿಗಳು, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಎಚ್.ವಿಶ್ವನಾಥ್ ಎಲ್ಲರನ್ನೂ ಭೇಟಿ ಮಾಡುತ್ತೇನೆ. ಒಗ್ಗೂಡಿಸಿ ಈ ಹೋರಾಟವನ್ನು ಮುಂದುವರುತ್ತೇನೆ ಎಂದು ತಿಳಿಸಿದರು.

ಸಮುದಾಯದ ಸರ್ವಾಂಗೀಣ ಏಳಿಗೆಗೆ ನಾನು ಬದ್ಧ. ಜನಾಂಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅನೇಕ ಸೌಲಭ್ಯಗಳನ್ನು ಒದಗಿಸಲು ಶಕ್ತಿಮೀರಿ ಶ್ರಮಿಸುತ್ತೇನೆ. ಸಮುದಾಯದಲ್ಲಿ ಅನೇಕ ಯುವಕರು ಉನ್ನತ ಅಧಿಕಾರಿಗಳ ಸ್ಥಾನಕ್ಕೇರಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದುಡಿಯುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ರಂಗರಾಜು ವಹಿಸಿದ್ದರು.ಜಿಲ್ಲಾ ಪಂಚಾಯತ್ ಸದಸ್ಯ ಬೀರಿಹುಂಡಿ ಬಸವಣ್ಣ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರುಗಳಾದ ಜೆ.ಗೋಪಿ, ನಾಗರಾಜು, ಅಭಿಲಾಷ್, ಮಾದೇಗೌಡ, ಮಹದೇವು, ಕನಕ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಸಿದ್ದಯ್ಯ, ಬ್ಯಾಂಕ್ ಪುಟ್ಟಸ್ವಾಮಿ, ರಾಜಣ್ಣ, ವಿ.ಸಿ.ಬಸವಣ್ಣ, ರೇವಣ್ಣ, ಆಲಹಳ್ಳಿ ಬಸವಣ್ಣ, ಆಲಹಳ್ಳಿ ನಂಜೇಗೌಡ, ತಾಲ್ಲೂಕು ಕುರುಬ ಸಂಘದ ಅಧ್ಯಕ್ಷ ಶಿವಪ್ಪ ಕೋಟೆ, ಉದ್ಯಮಿ ಬಸವೇಗೌಡ, ಶ್ರೀನಿವಾಸ ಉಪಸ್ಥಿತರಿದ್ದರು.

Share This Article
Leave a comment