ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ ಮೆಟ್ರೋ ರೈಲು ಸಂಚಾರಕ್ಕೆ ಸಿ ಎಂ ಬೊಮ್ಮಾಯಿ ಚಾಲನೆ

Team Newsnap
1 Min Read

ಬೆಂಗಳೂರಿನ ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ ನಿರ್ಮಾಣ ಮಾಡಲಾಗಿರುವ ಮೆಟ್ರೋ ನೇರಳೆ ಮಾರ್ಗವನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಉದ್ಘಾಟಿಸಿದರು.

ಮಹಿಳಾ ಲೋಕೋಪೈಲೆಟ್ ನಿಂದ ಮೊದಲ ರೈಲಿನ ಸಂಚಾರ ಆರಂಭಗೊಂಡಿತು.

ಉದ್ಘಾಟನೆ ಬಳಿಕ ನಾಯಂಡಹಳ್ಳಿ ನಿಲ್ದಾಣದಿಂದ ಕೆಂಗೇರಿವರೆಗೂ ಮೆಟ್ರೋ ಸಂಚಾರಿಸಿತು. ಮೊದಲ ಮೆಟ್ರೋದಲ್ಲಿ ಬಿಎಂಆರ್ ಸಿಎಲ್ ಸಿಬ್ಬಂದಿ ಸಂಚಾರ ಮಾಡಿದರು.

ರೈಲು ಸಂಚರಿಸಲು ಏಪ್ರಿಲ್ ನಿಂದ ಟ್ರಯಲ್ ರನ್ ನಡೆಸಿದ್ದ ಮೆಟ್ರೋ ನಿಗಮ ಇಂದಿನಿಂದ ಸಂಚಾರ ಆರಂಭಿಸಿದೆ. 7.5 ಕೀಮಿ ಉದ್ದದ ಮೆಟ್ರೋ ಮಾರ್ಗ ಇದಾಗಿದೆ. ನಾಯಂಡಹಳ್ಳಿಯಿಂದ ಕೆಂಗೇರಿ ಬಸ್ ಟರ್ಮಿನಲ್ ವರೆಗಿನ ನೇರಳೆ ಮೆಟ್ರೋ ಮಾರ್ಗ ವಿಸ್ತರಿಸಿದಂತಾಗಿದೆ.

ಅಧಿಕೃತವಾಗಿ ನಾಳೆ (ಸೋಮವಾರ) ಬೆಳಗ್ಗೆ 7 ಗಂಟೆಯಿಂದ ಮೆಟ್ರೋ ಸಂಚಾರ ಆರಂಭ ಮಾಡಲಿದೆ. ಪ್ರತಿ 10 ನಿಮಿಷಕ್ಕೆ ಒಮ್ಮೆ ಮೆಟ್ರೋ ಸಂಚರಿಸಲಿದೆ.

ಒಟ್ಟು 7.5 ಕೀಮಿ ದೂರದಲ್ಲಿ 6 ಸ್ಟೇಷನ್ ಇರಲಿದ್ದು, ಆಗಸ್ಟ್ 11 ಹಾಗೂ 12 ರಂದು ಸುರಕ್ಷತಾ ಪರೀಕ್ಷೆ ನಡೆಸಲಾಗಿತ್ತು. 1,560 ಕೋಟಿ ವೆಚ್ಚದಲ್ಲಿ ಮೆಟ್ರೋ ಮಾರ್ಗ ನಿರ್ಮಾಣವಾಗಿದೆ.

ಮೆಟ್ರೋ ನೇರಳೆ ಮಾರ್ಗದ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರದ ವಸತಿ ಸಚಿವ ಹರ್ದೀಪ್ ಸಿಂಗ್ ಪುರಿ, ಸಂಸದ ತೇಜಸ್ವಿ ಸೂರ್ಯ, ಸಚಿವರಾದ ವಿ ಸೋಮಣ್ಣ, ಆರ್. ಅಶೋಕ್, ಮುನಿರತ್ನ, ಎಸ್ ಟಿ ಸೋಮಶೇಖರ್ ಗೋಪಾಲಯ್ಯ ಉಪಸ್ಥಿತರಿದ್ದರು.

Share This Article
Leave a comment